ಮಂಗಳೂರು: ನಗರದ ಸ್ಯಾಂಡ್ಪಿಟ್ ಬೆಂಗ್ರೆಯ ಬಜರಂಗದಳ ಮುಖಂಡನೋರ್ವನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಎಂಬ ಪುಕಾರು ನಗರದೆಲ್ಲೆಡೆ ಹಬ್ಬಿದೆ.
ಪಣಂಬೂರಿನ ತೋಟ ಬೆಂಗ್ರೆಯ ನಿವಾಸಿ, ಬಜರಂಗ ದಳದ ಮುಖಂಡ ಜಗದೀಶ್ ಸುವರ್ಣ (37) ಎಂಬವರ ಶವ ಅಳಿವೆಬಾಗಿಲಿನ ಬಳಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.
ಜಗದೀಶ್ ಸುವರ್ಣ ನಿನ್ನೆ ಸ್ನೇಹಿತನ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಕಾರ್ಯಕ್ರಮ ಮುಗಿಸಿ ಅಲ್ಲಿಂದ ಮುಂಜಾನೆ ತಮ್ಮ ಮನೆಗೆ ತೆರಳಿದ್ದರು ಎನ್ನಲಾಗಿದೆ. ಆದರೆ ಶುಕ್ರವಾರ ಸಂಜೆ ಬೆಂಗ್ರೆ ನದಿಯ ಅಳಿವೆ ಬಾಗಿಲಲ್ಲಿ ಜಗದೀಶ್ ಶವವಾಗಿ ಪತ್ತೆಯಾಗಿದ್ದಾರೆ.
ಇದೊಂದು ವ್ಯವಸ್ಥಿತ ಕೊಲೆ ಎಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಸುದ್ದಿಗಳು ಹರಿದಾಡುತ್ತಿವೆ. 15 ವರ್ಷಗಳಿಂದ ಬಜರಂಗ ದಳದಲ್ಲಿ ಸಕ್ರಿಯರಾಗಿದ್ದ ಜಗದೀಶ್, ಸಂಘಟನೆಯ ಬೆಂಗ್ರೆ ಘಟಕದ ಸಂಚಾಲಕರಾಗಿದ್ದರು. ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.