ಹಕ್ಕು ಪತ್ರ ಸಿಗದ ಕಿಲೇರಿಯ ,ಕೈಕೋ ನಿವಾಸಿಗಳಿಂದ ಸಚಿವ ಖಾದರ್ಗೆ ಘೇರಾವ್.
ಓಲೈಕೆಗಾಗಿ ತಾರತಮ್ಯ ಧ್ವಂಧ್ವ ನೀತಿಯಿಂದ ಹಕ್ಕು ಪತ್ರ ನೀಡಿದ್ದರೂ ಕೈಕೋ,ಕಿಲೇರಿಯಾ ನಗರದ ಸುಮಾರು 179 ಕುಟುಂಬಕ್ಕೆ ಹಕ್ಕು ಪತ್ರಗಳನ್ನು ಒದಗಿಸದ ಸಚಿವ ಯು.ಟಿ.ಖಾದರ್ಗೆ ಹಕ್ಕು ಪತ್ರ ವಂಚಿತರು ಬುಧವಾರದಂದು ಉಳ್ಳಾಲದಲ್ಲಿ ಘೆರಾವ್ ಹಾಕಿದರು.
ಬುಧವಾರದಂದು ಉಳ್ಳಾಲ ನಗರಸಭೆಯ ವಠಾರದಲ್ಲಿ ಸೋಮೇಶ್ವರ,ಉಳ್ಳಾಲ,ತಲಪಾಡಿ ಪ್ರದೇಶದ ಸುಮಾರು 700 ಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಆಹಾರ ಸಚಿವ ಯು.ಟಿ ಖಾದರ್ ಭಾಗವಹಿಸಿದ್ದರು.
ಕೈಕೋ ,ಕಿಲೋರಿಯಾ ಪ್ರದೇಶಗಳು ಸೀಆರ್ ಝೆಢ್ ವ್ಯಾಪ್ತಿಗೆ ಬರುವುದರಿಂದ ಹಕ್ಕು ಪತ್ರಗಳನ್ನು ನೀಡಲಾಗುವುದಿಲ್ಲವೆಂದು ಗ್ರಾಮಕರಣಿಕರು ಹಕ್ಕು ಪತ್ರ ವಂಚಿತರಲ್ಲಿ ಹೇಳಿದ ಪರಿಣಾಮ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಸಚಿವರಿಗೆ ಕೈಕೋ ,ಕಿಲೇರಿಯಾದ ನಿವಾಸಿಗಳು ಘೆರಾವ್ ಹಾಕಿದ್ದಾರೆ.ಬೆಂಗರೆ ಪ್ರದೇಶದ ನಿವಾಸಿಗಳಿಗೆ ಸರಕಾರ ಹಕ್ಕು ಪತ್ರ ನೀಡಿದೆ. ಆ ಪ್ರದೇಶ ಸೀಆರ್ ಝೆಡ್ ವ್ಯಾಪ್ತಿಗೆ ಒಳಪಡುವುದಿಲ್ಲವೇ ಎಂದು ಸಂತ್ರಸ್ತರು ಸಚಿವರಲ್ಲಿ ಪ್ರಶ್ನಿಸಿದ್ದಾರೆ.
ಕೈಕೋ,ಕಿಲೇರಿಯಾ ನಗರದ ನಿವಾಸಿಗಳಿಗೆ ಹಕ್ಕು ಪತ್ರ ಮತ್ತು ಮನೆ ಕಟ್ಟಲು ತಲಾ 3,80,000 ರೂಪಾಯಿ ಕೊಡುವುದಾಗಿ ಸಚಿವರು ಸರ್ಕ್ಯೂಟ್ ಹೌಸಿನಲ್ಲಿ ನಡೆದಿದ್ದ ಸಭೆಯಲ್ಲಿ ಭರವಸೆ ನೀಡಿದ್ದಾಗಿ ಅಲ್ಲಿನ ನಿವಾಸಿ ರೆಹನಾ ಬಾನು ಹೇಳಿದ್ದಾರೆ.
ಜನರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಸಚಿವರು ಪರಿಶೀಲಿಸುವುದಾಗಿ ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.