ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಿತ್ರ ನಟ ಮತ್ತು ನಟಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಯಲ್ಲಿ ಕೂಡಿಹಾಕಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಆರೋಪದಡಿ ಸುಬ್ರಹ್ಮಣ್ಯ ಠಾಣೆಯ ಕಾನ್ಸ್ಟೆಬಲ್ಗಳಾದ ಪ್ರಶಾಂತ್ಕುಮಾರ್ ಮತ್ತು ಸಂಧ್ಯಾಮಣಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಮೈಸೂರು ಮೂಲದ ಚಿತ್ರನಟಿಯೊಬ್ಬರು ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪೂಜೆಗಾಗಿ ಬಂದು ತನ್ನ ಸ್ನೇಹಿತ ಕಿರುಚಿತ್ರ ನಟ ಬೆಳ್ಳಾರೆ ಕಲ್ಲೋಣಿಯ ಫರ್ವೇಝ್ನನ್ನು ಮಾತನಾಡಲು ಬರುವಂತೆ ಸೂಚಿಸಿದ್ದರು. ಅದರಂತೆ ಫರ್ವೇಝ್ ಚಿತ್ರನಟಿಯನ್ನು ಸುಬ್ರಹ್ಮಣ್ಯದಲ್ಲಿ ಭೇಟಿಯಾಗಿದ್ದರು. ಬಳಿಕ ಫರ್ವೇಝ್ ತನ್ನ ಮನೆಗೆ ಮರಳಿದರೂ ಕೂಡ ಸಂಘ ಪರಿವಾರದ ಕಾರ್ಯಕರ್ತರು ಮತ್ತು ಪೊಲೀಸರು ಜೊತೆಗೂಡಿ ನಟಿಯನ್ನು ಠಾಣೆಗೆ ಕರೆದೊಯ್ದರಲ್ಲದೆ ಬೆಳ್ಳಾರೆಯಲ್ಲಿದ್ದ ಫರ್ವೇಝ್ರಿಗೆ ನಟಿಯ ಮೊಬೈಲ್ನಿಂದ ಕರೆ ಮಾಡಿಸಿ ಕರೆಸಿಕೊಂಡಿದ್ದರು. ತದನಂತರ ಠಾಣೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿ ಚಿತ್ರನಟನಿಗೆ ಕಾಲಿನಿಂದ ಒದ್ದು ಧರ್ಮ ನಿಂದನೆ ಮಾಡಿದ್ದರು ಎಂಬ ಆರೋಪ ವ್ಯಕ್ತವಾಗಿತ್ತು.
ಇದರ ದೃಶ್ಯಾವಳಿ ಮತ್ತು ಚಿತ್ರನಟ-ನಟಿಯ ಹೇಳಿಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು.
ಅದರಂತೆ ಆಂತರಿಕ ತನಿಖೆ ನಡೆಸಿದ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.