ಮಂಗಳೂರು: ಕಾಂಗ್ರೆಸ್ಗೆ ಸಂಘಪರಿವಾರವನ್ನು ಎದುರಿಸುವ ತಾಕತ್ತಿಲ್ಲ: ಎಸ್.ಡಿ.ಪಿ.ಐ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ವ ನಿಯೋಜಿತವಾಗಿ ಹಿಂದುತ್ವ ಶಕ್ತಿಗಳಿಂದ ನಡೆಯುತ್ತಿರುವ ಅಹಿತಕರ ಘಟನೆಯಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಸಂಘಪರಿವಾರವನ್ನು ಎದುರಿಸುವ ತಾಕತ್ತು ಇಲ್ಲದೆ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಘಟನೆಯನ್ನು ಎಸ್.ಡಿ.ಪಿ.ಐ ಹಾಗೂ ಪಾಪ್ಯುಲರ್ ಫ್ರಂಟ್ ಸಂಘಟನೆಗಳ ಮೇಲೆ ಎತ್ತಿಕಟ್ಟಿ ಅವರ ನಿಸ್ಸಹಾಯಕತೆಯನ್ನು ಮರೆಮಾಚುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತಿಳಿಸಿದೆ.
ಸಂಘಪರಿವಾರಿಗಳಿಂದ ಹತ್ಯೆಗೈಯ್ಯಲ್ಪಟ್ಟ ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ಕಲ್ಲಡ್ಕ, ಅಬ್ದುಲ್ ರಹಿಮಾನ್ ಸಂಗಬೆಟ್ಟು, ಅಬ್ದುಲ್ ಜಬ್ಬಾರ್ ಮಲ್ಲೂರು ಹಾಗೂ ಇತ್ತೀಚೆಗೆ ಹತ್ಯೆಯಾದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ, ಕಾಂಗ್ರೆಸ್ ಕಾರ್ಯಕರ್ತ ನಾಸಿರ್ ಸಜಿಪ ಹೀಗೆ ಹಲವಾರು ಅಲ್ಪಸಂಖ್ಯಾತರನ್ನು ಹತ್ಯೆಗೈದಿದೆ. ಈ ಎಲ್ಲಾ ಹತ್ಯೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಮೃದು ಹಿಂದುತ್ವ ಸ್ವಭಾವವನ್ನು ಬಿಟ್ಟು ಕೊಡಲೇ ಇಲ್ಲ. ಸಂಘಪರಿವಾರದ ಜನವಿರೋಧಿ ಮತ್ತು ಮಾನವ ವಿರೋಧಿ ಕೃತ್ಯವನ್ನು ಎದುರಿಸಲು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು, ನೈಜತೆಯನ್ನು ತಿಳಿಸಲು ಹಿಂಜರಿಯುತ್ತಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯನ್ನು ಮುಂದಿಟ್ಟು, ಬಿಜೆಪಿಯಂತೆ ಶವದ ಮುಂದೆ ರಾಜಕೀಯವನ್ನು ಮಾಡಿ, ಮುಂಬರುವ ಚುನಾವಣೆಯ ಬಗ್ಗೆ ಚಿಂತಿಸುತ್ತಿರುವುದು ವಿಪರ್ಯಾಸ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಎಸ್.ಡಿ.ಪಿ.ಐ ಅಭಿಪ್ರಾಯ ಪಡುತ್ತದೆ.
ಸಂಘಪರಿವಾರವನ್ನು ಎದುರಿಸುವ ಬಗ್ಗೆ ತನ್ನ ಸ್ಪಷ್ಟ ನಿರ್ಧಾರವನ್ನು ಕಾಂಗ್ರೆಸ್ ಇದುವರೆಗೂ ಸ್ಪಷ್ಟಪಡಿಸದೇ ಇರುವುದು ಇವರ ಜಾತ್ಯಾತೀತ ಮುಖವಾಡವನ್ನು ಸ್ಪಷ್ಟಪಡಿಸುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ. ನಡೆದ ಅಹಿತಕರ ಘಟನೆಗಳನ್ನು ನಿಭಾಯಿಸಲು ಸಾಧ್ಯವಾಗದೇ ಇರುವುದರಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಗಲಿದೆ ಎನ್ನುವುದನ್ನು ಅರಿತು ಇತರರ ಮೇಲೆ ಆರೋಪ ಹೊರಿಸುತ್ತಿರುವುದು ನಾಚಿಕೆಗೇಡು.
ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆಂಬ ಸಿದ್ಧಾಂತದೊಂದಿಗೆ ಕಾರ್ಯಾಚರಿಸುತ್ತಿರುವ ಸಂಘಪರಿವಾರ, ದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯವನ್ನು ಗುರಿ ಮಾಡಿ ಭೀಕರವಾಗಿ ಹತೈಗೈದಿದ್ದು. ಮೋದಿ ಅಧಿಕಾರಕ್ಕೆ ಬಂದ ನಂತರ ಇದು ಮಿತಿ ಮೀರುತ್ತಿದೆ. ಆದರೆ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಇದ್ಯಾವುದರ ಪರಿವೇ ಇಲ್ಲದಂತೆ ವರ್ತಿಸಿ, ತನ್ನ ಪರೋಕ್ಷ ಬೆಂಬಲವನ್ನು ನೀಡುತ್ತಿದೆಯಾ ಎಂಬ ಸಂಶಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚುನಾವಣಾ ಪ್ರಚಾರ ಸಭೆಯಲ್ಲಿ ‘ಅಲ್ಪಸಂಖ್ಯಾತರ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ’ ಎಂದು ಹೇಳಿಕೆಯನ್ನು ನೀಡಿದ ಕಾಂಗ್ರೆಸ್, ಅಲ್ಪಸಂಖ್ಯಾತರಿಗೆ ಯಾವ ರಕ್ಷಣೆಯನ್ನು ನೀಡಿದೆ ಎಂದು ಅತ್ಮಾವಲೋಕನ ನಡೆಸಲಿ. ಹಾಗೂ 7 ಶಾಸಕರು, 2 ಸಚಿವರುಗಳಿದ್ದೂ ಅಲ್ಪಸಂಖ್ಯಾತರ ಮೇಲೆ ದಿನನಿತ್ಯವು ಹತ್ಯೆ, ಹಲ್ಲೆಗೊಳಗಾಗುತ್ತಿದ್ದು, ಯಾಕೆ ನಿಮ್ಮಿಂದ ರಕ್ಷಿಸಲು ಸಾಧ್ಯವಾಗದೇ ಇರುವುದು ಎಂಬುವುದನ್ನು ಜಿಲ್ಲೆಯ ಜನತೆಗೆ ಸ್ಪಷ್ಟಪಡಿಸಬೇಕು.
ಬಿಜೆಪಿಯಂತೆ ಕಾಂಗ್ರೆಸ್ ನಿರಾಧಾರ ಆರೋಪವನ್ನು ಹೊರಿಸುವುದು ಇಂದು ನಿನ್ನೆಯದಲ್ಲ, ಇದು ನಿಮ್ಮ ನೀಚ ಸಂಸ್ಕೃತಿಯಾಗಿದೆ. ಸದ್ಯ ಜನತೆಗೆ ಸ್ಪಷ್ಟವಾಗುತ್ತಿದೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಸಂಘಪರಿವಾರಿಗಳೊಂದಿಗೆ ಜೊತೆಗೂಡಿ ಯಾವ ರೀತಿಯಲ್ಲಿ ಅಲ್ಪಸಂಖ್ಯಾತರನ್ನು ದಮನಿಸಲು ಪ್ರಯತ್ನಿಸುತ್ತಿದೆ ಎಂಬುವುದು. ನಿರಾಧಾರ ಆರೋಪವನ್ನು ಜನತೆ ಸ್ವೀಕರಿಸುತ್ತಾರೆ ಎಂಬ ಕನಸನ್ನು ಬಿಟ್ಟು, ಸಂಘಪರಿವಾರವನ್ನು ಕಾನೂನು ಮೂಲಕ ಎದುರಿಸಿ ನಿಮ್ಮ ತಾಕತ್ತು ಪ್ರದರ್ಶಿಸಿ ಎಂದು ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ. ಅಥಾವುಲ್ಲಾ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಸವಾಲನ್ನು ಎಸೆದಿದ್ದಾರೆ.
ಇಕ್ಬಾಲ್ ಬೆಳ್ಳಾರೆ
ಮಾಧ್ಯಮ ಕಾರ್ಯದರ್ಶಿಗಳು, ಎಸ್.ಡಿ.ಪಿ.ಐ ದ.ಕ ಜಿಲ್ಲೆ