ಮಂಗಳೂರು, ನ ೧೩ : ಮೈಸೂರಿನ ಕಾರಾಗ್ರಹದಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಮುಸ್ತಫಾ ಕಾವೂರು ಎಂಬವರನ್ನು ಸಹಖೈದಿ ಕಿರಣ್ ಶೆಟ್ಟಿ ಮತ್ತು ಇತರರು ಸೇರಿ ಸಂಘಪರಿವಾರದ ಕುಮ್ಮುಕ್ಕುನಿಂದ ಪೂರ್ವನಿಯೋಜಿತವಾಗಿ ಮಾಡಿದ ಕೃತ್ಯವಾಗಿದ್ದು ಇದನ್ನು ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಅತ್ಯಂತ ಭದ್ರತೆಯಿರುವ ಜೈಲಿನಲ್ಲಿ ವಿಚಾರಣಾಧೀನ ಖೈದಿಯೊಬ್ಬನ ಹತ್ಯೆ ನಡೆದಿರುವುದಿರುವುದರಿಂದ ಈ ಘಟನೆಯಲ್ಲಿ ಸಂಘಪರಿವಾರದ ಷಡ್ಯಂತ್ರಗಳು ಎದ್ದು ಕಾಣುತ್ತಿದೆ. ರಾಜ್ಯ ಸರಕಾರದ ಅಧೀನದಲ್ಲಿ ಬರುವ ಬಂದೀಖಾನೆಯಲ್ಲಿ ಈ ರೀತಿಯ ಘಟನೆ ನಡೆದಿರುವುದರಿಂದ ಘಟನೆಯ ಸಂಪೂರ್ಣ ಹೊಣೆಯನ್ನು ರಾಜ್ಯ ಸರಕಾರವೇ ಹೊರಬೇಕಾಗುತ್ತದೆ. ಈ ಹತ್ಯೆ ನಡೆದಿರುವುದು ಸಂಘಪರಿವಾರದವರ ಪ್ರಚೋದನಾತ್ಮಕ ಹೇಳಿಕೆಗಳನ್ನು ಆಗಾಗ ನೀಡುತ್ತಿರುವುದರಿಂದ ಪ್ರಚೋದನೆಯಾಗಿ ಈ ಕೃತ್ಯ ನಡೆದಿರುವುದು ಸ್ಪಷ್ಟವಾಗಿರುತ್ತದೆ. ಮಾತ್ರವಲ್ಲದೇ ಸಂಸದ ಪ್ರತಾಪ ಸಿಂಹ ಜೈಲಿಗೆ ಆಗಾಗ ಭೇಟಿ ನೀಡಿರುವುದರಿಂದ ಅವರ ಶಾಮೀಲಿನ ಬಗ್ಗೆ ಸಂಶಯವೂ ಎದ್ದು ಕಾಣುತ್ತಿದೆ. ಜೈಲಿನೊಳಗೂ ಕೂಡ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಹ ಸನ್ನಿವೇಶ ನಿರ್ಮಾಣವಾಗುತ್ತಿದೆ. ಈ ಘಟನೆಯಲ್ಲಿ ಎರಡು ಪೊಲೀಸರನ್ನು ಅಮಾನತು ಮಾಡುವುದರ ಮೂಲಕ ಸರಕಾರ ಮತ್ತು ಪೊಲೀಸ್ ಇಲಾಖೆ ಘಟನೆಯನ್ನು ಮರೆಮಾಚಿ ಕೈ ತೊಳೆಯುವಂತಹ ಕೆಲಸ ಮಾಡುತ್ತಿದೆ. ಆದುದರಿಂದ ಅತ್ಯಂತ ಭದ್ರತೆಯಿರುವ ಜೈಲಿನೊಳಗೆ ಮಾರಕಾಯುಧಗಳು ಹೇಗೆ ರವಾನೆಯಾಯ್ತು. ಇದರ ಹಿಂದಿರುವ ಶಕ್ತಿಗಳು ಯಾರೆಲ್ಲಾ ಎಂಬ ಸತ್ಯಾಸತ್ಯತೆ ಹೊರಬರಬೇಕಾದರೆ ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಹನೀಫ್ ಖಾನ್ ಕೊಡಾಜೆಯವರು ಆಗ್ರಹಿಸಿದ್ದಾರೆ. ನ್ಯಾಯಾಂಗ ತನಿಖೆಗೆ ಒಪ್ಪಿಸದೇ ಇದ್ದಲ್ಲಿ ಇದರ ವಿರುದ್ದ ಕಾನೂನು ರೀತಿಯ ಹೋರಾಟವನ್ನು ಮುಂದುವರಿಸುವುದರೆಂದು ಹೇಳಿದರು. ಅದೇ ರೀತಿ ಹತ್ಯೆಯಾದ ಮುಸ್ತಫಾರವರ ಕುಟುಂಬಕ್ಕೆ ಸರಕಾರ 50 ಲಕ್ಷ ಪರಿಹಾರ ಮೊತ್ತವನ್ನು ನೀಡಬೇಕಾಗಿ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.