ಮಂಡ್ಯ: ರಸ್ತೆ ಅಪಘಾತ;ಇಬ್ಬರ ಸಾವು, ಮೂವರಿಗೆ ಗಾಯ
ಮಂಡ್ಯ: ಸಾರಿಗೆ ಬಸ್ ಢಿಕ್ಕಿಯೊಡೆದು ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯ ಆರ್ಎಂಸಿ ಗೇಟ್ (ಚೆಕ್ಪೋಸ್ಟ್) ಬಳಿ ರವಿವಾರ ಬೆಳಗ್ಗೆ ನಡೆದಿದೆ.
ಮೂಲತಃ ಕೇರಳದ ಕ್ಯಾಲಿಕಟ್ನವರಾದ, ಹಾಲಿ ಬೆಂಗಳೂರು ಆರ್.ಟಿ.ನಗರ ನಿವಾಸಿಗಳಾದ ಲಿಂಗೇಶ್ (37) ಮತ್ತು ಕಿರಣ್ (11) ಅಪಘಾತದಲ್ಲಿ ಸಾವನ್ನಪ್ಪಿದ್ದು, ಅರುಣ್, ರಾಹುಲ್ ಹಾಗೂ ಕಾರ್ತಿಕೇಯನ್ ಗಾಯಗೊಂಡಿದ್ದಾರೆ.
ಪಶ್ಚಿಮವಾಹಿನಿಯಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಕಾರಿಗೆ ಮೈಸೂರಿನಿಂದ ಬಿಇಎಂಎಲ್ ನೌಕರರನ್ನು ಕರೆದುಕೊಂಡು ಮೈಸೂರು ಕಡೆಗೆ ತಿರುವು ಪಡೆದುಕೊಳ್ಳುತ್ತಿದ್ದ ಬಸ್ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಲಿಂಗೇಶ್ ಸ್ಥಳದಲ್ಲೇ ಮೃತಪಟ್ಟರೆ, ಕಿರಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಕಾರಿನಲ್ಲಿದ್ದವರೆಲ್ಲರೂ ಒಂದೇ ಕುಟುಂಬದವರು. ಇವರ ಜತೆಗೆ ಟೆಂಪೋ ಟ್ರಾವೆಲ್ಲರ್ನಲ್ಲೂ ಮನೆಯವರು ಬಂದಿದ್ದರು. ಇವರು ತಮ್ಮ ಅಜ್ಜಿಯ ಶ್ರಾದ್ಧ ಕಾರ್ಯವನ್ನು ಪಶ್ಚಿಮವಾಹಿನಿಯಲ್ಲಿ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರದ ಎದುರು ಮೃತರ ಕುಟುಂಬದವರ ರೋದನ ಮುಗಿಲುಮುಟ್ಟಿತ್ತು. ಸ್ಥಳದಿಂದ ಬಸ್ ಚಾಲಕ ಪರಾರಿಯಾಗಿದ್ದು, ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.