ಭಟ್ಕಳ: ಹಾವನ್ನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಯುವಕನನ್ನು ಹಾವು ಕಚ್ಚಿದ ಪರಿಣಾಮ ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾ ರಾತ್ರಿ ಭಟ್ಕಳ ಮಗ್ದೂಮ್ ಕಾಲೋನಿಯಲ್ಲಿ ಜರಗಿದೆ.
ಹಾವು ಕಡಿತಕ್ಕೊಳಗಾದ ಯುವಕನನ್ನು ಮಗ್ದೂಮ್ ಕಾಲೋನಿಯ ನಿವಾಸಿ ಅಬ್ದುಲ್ ಮುಯೀಝ್(29) ಎಂದು ಗುರುತಿಸಲಾಗಿದೆ. ಈತ ಹಾವು ಹಿಡಿಯುವುದರಲ್ಲಿ ಖಾತಿಯನ್ನು ಹೊಂದಿದ್ದು ಅದರಲ್ಲಿ ತುಂಬಾ ಪಳಗಿದ್ದ ಎಂದು ಹೇಳಲಾಗುತ್ತಿದೆ. ಆದರೆ ಸೋಮವಾರ ಸಂಜೆ ಒಂದು ಮನೆಯಲ್ಲಿ ಹಾವನ್ನು ಹಿಡಿಯುವ ಪ್ರಯತ್ನದಲ್ಲಿದ್ದಾಗ ಹಾವು ಯುವಕನ ಮೇಲೆ ದಾಳಿ ಮಾಡಿ ಕೈಯನ್ನು ಕಚ್ಚಿ ಘಾಸಿಗೊಳಿಸಿದೆ. ಕೂಡಲೇ ಯುವಕನನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಭಟ್ಕಳ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ, ಪುರಸಭೆ ಸದಸ್ಯ ಅಬ್ದುಲ್ ರಹೀಮ್ ಸೇರಿದಂತೆ ಮಗ್ದೂಮ್ ಕಾಲೋನಿಯ ಯುವಕರು ಆಸ್ಪತ್ರೆಗೆ ಭೇಟಿ ನೀಡಿ ಹಾವುಕಡಿತಕ್ಕೊಳಕ್ಕಾಗಿರುವ ಯುವಕನ ಆರೋಗ್ಯವನ್ನು ವಿಚಾರಿಸಿದ್ದಾರೆ.