ಭಟ್ಕಳ: ಮಳೆಗಾಲದಲ್ಲಿ ಮುಗಿಯದ ಪಳ್ಳಿಹೊಳೆ ಸೇತುವೆ ವ್ಯಥೆ; ಮುಗುಚಿ ಬಿದ್ದ ಮೋಟಾರ್ ಬೈಕ್; ಪ್ರಾಣಾಪಾಯದಿಂದ ಪಾರು
ಭಟ್ಕಳ: ತಾಲೂಕಿನ ಶಿರಾಲಿ ಅಳ್ವೆಕೋಡಿಯನ್ನು ಸಂಪರ್ಕಿಸುವ ಪಳ್ಳಿಹೊಳೆ ಸೇತುವೆಯ ಕಥೆ ಮಳೆಗಾಲದಲ್ಲಿ ವ್ಯಥೆಯಾಗಿ ಪರಿಣಮಿಸಿದೆ. ತಾತ್ಕಾಲಿಕ ಸಂಪರ್ಕ ರಸ್ತೆ ಕೊಚ್ಚಿ ಹೋದ ನಂತರ ಒಡ್ಡಿನ ಮೇಲೆ ಸಿಮೆಂಟ್ ಕಾಂಕ್ರೀಟ್ ಹಾಕಿ ಕಲ್ಪಿಸಲಾಗಿದ್ದ ಪರ್ಯಾಯ ಮಾರ್ಗ ಇದೀಗ ಜನರಿಗೆ ಆಪತ್ತನ್ನು ತಂದೊಡ್ಡಲಾರಂಭಿಸಿದೆ.
ಮೋಟಾರ್ ಬೈಕ್ವೊಂದು ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಪರಿಣಾಮವಾಗಿ ಸವಾರ ಗಾಯಗೊಂಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಗಾಯಗೊಂಡವರನ್ನು ಶಿರಾಲಿಯ ಮಹ್ಮದ್ ಇಮ್ತಿಯಾಜ್ ಫಿರ್ಜಾದೆ (48) ಎಂದು ಗುರುತಿಸಲಾಗಿದೆ. ಇವರ ಕೈ ಮತ್ತು ಕಾಲಿಗೆ ಏಟು ತಗುಲಿದ್ದು, ಸುತ್ತಮುತ್ತಲಿನ ಜನರ ಸಮಯ ಪ್ರಜ್ಞೆಯಿಂದಾಗಿ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ. ಇವರು ಭಟ್ಕಳದಿಂದ ಶಿರಾಲಿ ತಟ್ಟಿಹಕ್ಕಲ್ನತ್ತ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಶಿರಾಲಿ ಗ್ರಾಪಂ ಅಧ್ಯಕ್ಷ ವೆಂಕಟೇಶ ನಾಯ್ಕ, ತಹಸೀಲ್ದಾರ ವಿ.ಎನ್.ಬಾಡ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುತ್ತಿಗೆದಾರರಿಗೆ ತರಾಟೆ: ಘಟನೆ ನಡೆದ ಕೆಲ ಹೊತ್ತಿನಲ್ಲಿಯೇ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿ, ಅಲ್ಲಿಯೇ ಇದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಸೇತುವೆ ನಿರ್ಮಾಣ ಕಾಮಗಾರಿ ವಿಳಂಬದಿಂದಾಗಿ ಸಮಸ್ಯೆ ಉದ್ಭವಿಸಿದೆ. ಸೇತುವೆಯನ್ನು ಆದಷ್ಟು ಬೇಗ ಮಾಡಿ ಮುಗಿಸುವ ಭರವಸೆಯೊಂದಿಗೆ ಜನರೂ ಸಹಕಾರ ನೀಡಿದ್ದಾರೆ. ಆದರೆ ಜನರ ಕಳಕಳಿಯನ್ನು ಆಲಿಸದೇ ಹಳೆಯ ಸೇತುವೆಯನ್ನು ಕೆಡುಹಿ ಅವೈಜ್ಞಾನಿಕವಾಗಿ ತಾತ್ಕಾಲಿಕ ಸಂಪರ್ಕ ರಸ್ತೆಯನ್ನು ನಿರ್ಮಿಸಿದ್ದೇ ಎಲ್ಲ ಅನಾಹುತಕ್ಕೂ ಕಾರಣವಾಗಿದೆ. ಈಗ ಬೇರೆ ದಾರಿ ಇಲ್ಲ. ಶೀಘ್ರವಾಗಿ ಸೇತುವೆ ನಿರ್ಮಿಸುವುದೇ ಎಲ್ಲದಕ್ಕೂ ಪರಿಹಾರವಾಗಿದೆ ಎಂದು ಜನರು ಅಸಮಾಧಾನವನ್ನು ಹೊರ ಹಾಕಿದರು.
ಸೋಮವಾರ ಸಭೆ : ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಾವು ಘಟನೆ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದು, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸೋಮವಾರ ವಿಶೇಷ ಸಭೆಯನ್ನು ನಡೆಸಲಾಗುವುದು ಎಂದು ತಹಸೀಲ್ದಾರ ವಿ.ಎನ್.ಬಾಡ್ಕರ್ ತಿಳಿಸಿದ್ದಾರೆ. ಅವರು ಘಟನೆಯ ಕುರಿತು ಪ್ರತಿಕ್ರಿಯೆ ನೀಡಿ, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು, ಶಿರಾಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಪಿಡಿಓ, ಗುತ್ತಿಗೆದಾರರನ್ನು ಸಭೆಗೆ ಹಾಜರಿರುವಂತೆ ತಿಳಿಸಲಾಗಿದ್ದು, ಅಲ್ಲಿಯೇ ಸಮಸ್ಯೆ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.