ಶ್ರೀನಿವಾಸಪುರ: ರೈತರು ತಾವು ಪಡೆದ ಸಾಲವನ್ನು ಕಾಲಕ್ಕೆ ಸರಿಯಾಗಿ ಹಿಂದಿರುಗಿಸಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಆರಿಕುಂಟೆ ಗ್ರಾಮದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಮಣಿಗಾನಹಳ್ಳಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಶನಿವಾರ ರ್ಪಡಿಸಲಾಗಿದ್ದ ಶೂನ್ಯಬಡ್ಡಿ ದರದಲ್ಲಿ ಸಾಲ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬ್ಯಾಂಕ್ ತಾಯಿ ಇದ್ದಂತೆ. ತಾಯಿ ಮಕ್ಕಳ ಸಂಬಂಧದಂತೆ ಬ್ಯಾಂಕ್ ವ್ಯವಹಾರ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಸಾಲ ನೀಡಿಕೆ ಸಮಾರಂಭದಲ್ಲಿ 150 ರೈತ ಫಲಾನುಭವಿಗಳಿಗೆ ರೂ.1.32 ಕೋಟಿ ಸಾಲ ವಿತರಣೆ ಮಾಡಲಾಗುವುದು. ಮುಂದೆ 500 ರೈತರಿಗೆ ಸಾಲ ನೀಡಲಾಗುವುದು. ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ತಲಾ ರೂ.1 ಲಕ್ಷ ಬಡ್ಡಿ ರಹಿತ ಸಾಲ ನೀಡಲಾಗುವುದು. ಅರ್ಹ ಫಲಾನುಭವಿಗಳು ಸಾಲ ಪಡೆಯಲು ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು. ಬ್ಯಾಂಕ್ನೊಂದಿಗೆ ನೇರವಾಗಿ ಸಂಪರ್ಕಿಸಬೇಕು. ಶೋಷಣೆಯಿಂದ ಮುಕ್ತರಾಗಬೇಕು ಎಂದು ಹೇಳಿದರು.
ಎಲ್ಲ ರೀತಿಯ ಸಾಲವನ್ನು ಪಾರದರ್ಶಕವಾಗಿ ಹಾಗೂ ಪಕ್ಷಾತೀತವಾಗಿ ನೀಡಲಾಗುವುದು. ಗ್ರಾಮ ಪಂಚಾಯಿತಿ ಮೂಲಕ ಕರಪತ್ರ ಹೊರಡಿಸಿ, ಸಾಲ ವಿತರಣೆ ಮಾಡಲಾಗುವುದು. ಬಡವರು ಆರ್ಥಿಕವಾಗಿ ಮುಂದೆ ಬರಬೇಕು. ಖಾಸಗಿ ವ್ಯಕ್ತಿಗಳ ಶೋಷಣೆಯಿಂದ ಬಿಡುಡೆಯಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಳೇಗಾರಿಕೆಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರ ಕೆಲಸ ಮಾಡುವಾಗ ಪರ, ವಿರೋಧ ಅಭಿಪ್ರಾಯ ಇರುವುದು ಸಾಮಾನ್ಯ. ಅದನ್ನು ಲೆಕ್ಕಿಸದೆ ಬಡವರ ಪರವಾಗಿ ಕೆಲಸಮಾಡಬೇಕು ಎಂದು ಹೇಳಿದರು.
ಹಿಂದೆ ಕಾರಣಾಂತರವಾಗಿ ಬಿದ್ದುಹೋಗಿದ್ದ ಡಿಸಿಸಿ ಬ್ಯಾಂಕ್ ಈಗ ಚೇತರಿಸಿಕೊಂಡಿದೆ. ರಾಜ್ಯದಲ್ಲಿಯೇ ಅತ್ಯುತ್ತಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿವಿಧ ಇಲಾಖೆಗಳಿಗೆ ಮಂಜೂರಾಗುವ ಹಣವನ್ನು ಡಿಸಿಸಿ ಬ್ಯಾಂಕ್ನಲ್ಲಿ ಇಡಲಾಗುವುದು. ಆರ್ಥಿಕ ವ್ಯವಹಾರ ಇಲ್ಲಿಂದಲೇ ಪ್ರಾರಂಭವಾಗಲಿದೆ. ರೂ.160 ಕೋಟಿ ವೆಚ್ಚದಲ್ಲಿ ರಾಜ್ಯದ ಗಡಿಯವರೆಗೆ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಆರು ತಿಂಗಳ ಒಳಗೆ ಕೆರೆಗಳಿಗೆ ನೀರು ತುಂಬಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಎಪಿಎಂಸಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಮುಖಂಡರಾದ ಅಯ್ಯಪ್ಪ, ವೆಂಕಟೇಶ್, ಆಲವಟ್ಟ ಮಂಜುನಾಥರೆಡ್ಡಿ, ಸೀತಾರಾಮರೆಡ್ಡಿ, ಲಕ್ಷ್ಮಣರೆಡ್ಡಿ, ಶ್ರೀನಿವಾಸರೆಡ್ಡಿ, ತಮ್ಮಿರೆಡ್ಡಿ ಇದ್ದರು.