ಭಟ್ಕಳ: ಹೊರರಾಜ್ಯದ ಕಾರ್ಮಿಕರಿಂದಾಗಿ ಸ್ಥಳೀಯ ಕಟ್ಟಡ ಪೇಂಟಿಂಗ್ ಕೂಲಿ ಕಾರ್ಮಿಕರು ನಿರುದ್ಯೋಗಿಗಳಾಗುತ್ತಿದ್ದು ಭಟ್ಕಳದಲ್ಲಿ ಹೊರರಾಜ್ಯ ಕೂಲಿಕಾರ್ಮಿಕರು ಕೆಲಸ ಮಾಡದಂತೆ ನಿರ್ಬಂಧ ಹೇರಬೇಕೆಂದು ಆಗ್ರಹಿಸಿ ಭಟ್ಕಳ ತಾಲೂಕು ಕಟ್ಟಡ ಪೆಂಟಿಂಗ್ ಕೂಲಿ ಕಾರ್ಮಿಕರ ಸಂಘ ಗುರುವಾರ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿತು.
ಹೊರರಾಜ್ಯದ ಕೂಲಿ ಕಾರ್ಮಿಕರು ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದು ಇದರಿಂದಾಗಿ ಕಟ್ಟಡ ಪೆಂಟಿಂಗ್ ನ್ನು ಉದ್ಯೋಗವನ್ನಾಗಿ ಮಾಡಿಕೊಂಡ ಅದನ್ನೆ ಜೀವನ ಸಾಧನೆ ಮಾಡಿಕೊಂಡಿರುವ ಸ್ಥಳಿಯ ಕೂಲಿ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದ್ದು, ಸುಮಾರು ೪೦೦ ದಿಂದ ೫೦೦ ಪೇಂಟಿಂಗ್ ಕಾರ್ಮಿಕರು ಹೊರರಾಜ್ಯದಿಂದ ಭಟ್ಕಳಕ್ಕೆ ಬಂದು ನೆಲೆಸಿದ್ದಾರೆ. ಇದರಿಂದಾಗಿ ಸ್ಥಳೀಯರು ಹಲವು ಸಮಸ್ಯೆಗಳು ಎದುರಿಸುವಂತಾಗಿದ್ದು ಕೂಡಲೆ ಹೊರರಾಜ್ಯದ ಕೂಲಿ ಕಾರ್ಮಿಕರ ಮೇಲೆ ಭಟ್ಕಳದಲ್ಲಿ ಕೆಲಸ ಮಾಡದಂತೆ ನಿರ್ಬಂಧ ಹೇರಬೇಕು, ಒಂದು ವೇಳೆ ಇದು ಹೀಗೆಯೆ ಮುಂದುವರೆದರೆ ಅವರು ಕೆಲಸ ಮಾಡುವ ಸ್ಥಳದಲ್ಲಿ ಹೋಗಿ ಕೆಲಸವನ್ನು ನಿಲ್ಲಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಮನವಿ ಪತ್ರದಲ್ಲಿ ನೀಡಲಾಗಿದೆ. ಅಲ್ಲದೆ, ಪೇಂಟಿಂಗ್ ಅಂಗಡಿ ಮಾಲಿಕರು, ಗುತ್ತಿಗೆದಾರರು ಹಾಗೂ ಇಂಜಿನೀಯರ್ ಗಳು ಅಕ್ರಮವಾಗಿ ಹೊರರಾಜ್ಯದ ಕೂಲಿ ಕಾರ್ಮಿಕರನ್ನು ತಂದು ಕೆಲಸ ಮಾಡುವುದನ್ನು ನಿಲ್ಲಿಸಬೇಕು, ಭಟ್ಕಳದ ಸ್ಥಳೀಯ ಕಾರ್ಮಿಕರಿಗೆ ಪ್ರಥಮ ಆಧ್ಯತೆ ನೀಡಬೇಕು, ಭಟ್ಕಳ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಅಕ್ರಮವಾಗಿ ನೆಲೆಸುತ್ತಿರುವ ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಈ ಕೂಡಲೆ ಭಟ್ಕಳದಿಮದ ಹೊರ ಹಾಕಬೇಕು, ಭಟ್ಕಳದಲ್ಲಿ ಕೂಲಿ ಕಾರ್ಮಿಕರ ಕಾರ್ಯನಿರ್ವಣಾಧಿಕಾರಿಯನ್ನು ಖಾಯಂ ನೇಮಕಾತಿಗೊಳಿಸಬೇಕು ಎಂಬ ಬೇಡಿಕೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಭಟ್ಕಳ ತಲೂಕು ಕಟ್ಟಡ ಪೇಂಟಿಂಗ್ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ್ ನಾಯ್ಕ ಕಾರಗದ್ದೆ, ಉಪಾಧ್ಯಕ್ಷ ಮಂಜುನಾಥ್ ನಾಯ್ಕ ಹುರುಳಿಸಾಲ, ರಾಮಾ ನಾಯ್ಕ ಡಿ.ಪಿ.ಕಾಲೋನಿ, ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ನಾಯ್ಕ ಹನುಮಾನ್ ನಗರ್, ಖಜಾಂಚಿ ಮಂಜುನಾಥ್ ಗೊಂಡ ಜಾಲಿ, ಕಾರ್ಯದರ್ಶಿ ಬಾಲಚಂದ್ರ ನಾಯ್ಕ ಹುರಳಿಸಾಲ, ನಾರಾಯಣ ನಾಯ್ಕ ಮುಂಡಳ್ಳಿ, ಅಬ್ದುಲ್ ರಹೀಮ್ ಉಸ್ಮಾನ್ ನಗರ್, ಬಿಲಾಲ್ ಜಾಲಿ, ಕಿರಣ್ ನಾಯ್ಕ, ಶಿರಾಲಿ, ಲೋಕೇಶ್ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.