ಕುಂದಾಪುರ, ಜೂನ್ ೨೩ : ಮಂಗಳವಾರ ತ್ರಾಸಿ ಸಮೀಪದ ಮೊವಾಡಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಬಲಿಯಾದ ಕಟ್ ಬೇಲ್ತೂರಿನ ಲಾಯ್ಡ್ ಡಿಸಿಲ್ವಾ ಅವರ ಇಬ್ಬರು ಪುತ್ರಿಯರಾದ ನಿಖಿತ, ಅನನ್ಯ ಹಾಗೂ ಹೆಮ್ಮಾಡಿಯ ವಿನೋದ ಲೋಬೋ ಅವರ ಪುತ್ರ ರೋಯ್ ಸ್ಟನ್ ಅವರ ಮೃತ ಶರೀರದ ಅಂತ್ಯವಿಧಿಗಳನ್ನು ಗುರುವಾರ ಸಂಜೆ ತಲ್ಲೂರಿನ ಇಗರ್ಜಿಯಲ್ಲಿ ನಡೆಸಿದ ಬಳಿಕ ದಫನ ಮಾಡಲಾಯಿತು.
ಉಡುಪಿ ರೋಮನ್ ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಧಾರ್ಮಿಕ ವಿಧಿಯನ್ನು ನೆರವೇರಿಸಿದರು. ಕುಂದಾಪುರ ವಲಯ ಧರ್ಮಗುರುಗಳಾದ ಅನಿಲ್ ಡಿಸೋಜಾ, ತಲ್ಲೂರು ಇಗರ್ಜಿಯ ಧರ್ಮಗುರು ಜಾನ್ ವಾಲ್ಟರ್ ಮೆಂಡೋನ್ಸ್ ಸೇರಿದಂತೆ ಪರಿಸರದ ವಿವಿಧ ಇಗರ್ಜಿಗಳಿಂದ ಆಗಮಿಸಿದ್ದ ಧರ್ಮಗುರುಗಳು ಅಂತಿಮ ವಿಧಿಯಲ್ಲಿ ಸಹಕಾರ ನೀಡಿದರು. ಇಗರ್ಜಿಯ ಒಳ ಭಾಗದಲ್ಲಿನ ಧಾರ್ಮಿಕ ವಿಧಿ ಮುಗಿದ ಬಳಿಕ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಎಸ್.ಪಿ ಅಣ್ಣಾಮಲೈ, ಡಿವೈಎಸ್ ಪಿ ಎಂ.ಮಂಜುನಾಥ ಶೆಟ್ಟಿ, ಜಿಲ್ಲಾ ಗ್ರಹ ರಕ್ಷಕ ದಳ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು.
ತಾ.ಪಂ. ಸದಸ್ಯ ಎಚ್.ರಾಜೂ ದೇವಾಡಿಗ, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ., ಉಪನಿರೀಕ್ಷಕರುಗಳಾದ ನಾಸೀರ್ ಹುಸೇನ್, ಸುನೀಲ್ ಕುಮಾರ, ತಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಪೂಜಾರಿ ಮುಂತಾದವರಿದ್ದರು.
ತಲ್ಲೂರು ಬಂದ್: ದುರಂತದಲ್ಲಿ ಬಲಿಯಾದ ಮಕ್ಕಳ ಶೋಕಾರ್ಥವಾಗಿ ತಲ್ಲೂರಿನಲ್ಲಿ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿ ಹರತಾಳವನ್ನು ಆಚರಿಸಲಾಯಿತು. ಪರಿಸರದ ಶಾಲೆಗಳಲ್ಲಿ ಅಗಲಿದ ಮಕ್ಕಳ ಆತ್ಮಕ್ಕೆ ಮೌನ ಪ್ರಾರ್ಥನೆ ನಡೆಸಿ ಚಿರಶಾಂತಿ ಕೋರಲಾಗಿತ್ತು.