ಕುಂದಾಪುರ: ಕಳೆದ ನಾಲ್ಕು ವರ್ಷಗಳಿಂದ ಮನೆ ಬಿಟ್ಟು ಮಾನಸಿಕ ಅಸ್ವಸ್ಥನಾಗಿದ್ದ ಬಿಹಾರದ ಯುವಕ ಮುಹಮ್ಮದ್ ಅಖ್ತರ್ ಅನ್ಸಾರಿ ಗಂಗೊಳ್ಳಿಯ ಸಮಾಜ ಸೇವಕ ಇಬ್ರಾಹಿಂ ನಡೆಸುತ್ತಿರುವ ೨೪*೭ ಅಂಬ್ಯುಲನ್ಸ್ ಸೇವೆ ಸಂಸ್ಥೆಯ ಸಹಾಯದಿಂದ ಕೊನೆಗೆ ತನ್ನ ಮನೆಯನ್ನು ಸೇರಿದ್ದಾನೆ. ಇದಕ್ಕಾಗಿ ಇಬ್ರಾಹಿಂ ಗಂಗೊಳ್ಳಿ ತಮ್ಮ ಪ್ರಯತ್ನಕ್ಕೆ ಫಲ ದೊರೆತಿದೆ ಎಂದು ಸಮಾಧಾನಪಟ್ಟುಕೊಂಡಿದ್ದಾರೆ.
ಅದ್ಯಾವುದೋ ಬಗೆಹರಿಸಲಾಗದ ಸಮಸ್ಯೆಯಿಂದ ಚಿಂತಾಕ್ರಾಂತನಾಗಿ ನಾಲ್ಕು ವರ್ಷಗಳಿಂದ ಮನೆಬಿಟ್ಟು ಕೊಳಕು ಬಟ್ಟೆ ತೊಟ್ಟು, ಬದುಕಿಗೆ ನಿರ್ದಿಷ್ಟ ಗುರಿ ಇಲ್ಲದೇ ಊರೂರು ಅಲೆಯುತ್ತಿದ್ದ ಬಿಹಾರದ ವ್ಯಕ್ತಿಯನ್ನು ಕೇರಳ ಸ್ನೇಹಾಲಯ ಗುಣಪಡಿಸಿ ಕೊನೆಗೂ ಮನೆಯವರಿಗೆ ಒಪ್ಪಿಸಿದ ಮಾನವೀಯ ಘಟನೆ ವರದಿಯಾಗಿದೆ. ಈ ಮಾನವೀಯ ಕಾರ್ಯಕ್ಕೆ ಸಾಥ್ ನೀಡಿದ್ದು ಗಂಗೊಳ್ಳಿಯ 24x7ಹೆಲ್ಪ್ ಲೈನ್.
ಮೊಹಮ್ಮದ್ ಅಖ್ತರ್ ಅನ್ಸಾರಿ(32) ಮನೋವ್ಯಥೆಯಿಂದ ಊರೂರು ಅಲೆಯುತ್ತಿದ್ದ ವ್ಯಕ್ತಿ.
ಇಬ್ರಾಹಿಂ ಗಂಗೊಳ್ಳಿಯವರ ಕಣ್ಣಿಗೆ ಬಿದ್ದ: ಅಂದು ನವೆಂಬರ್ 12. ತ್ರಾಸಿ ಕಡಲ ಕಿನಾರೆಯ ಬಳಿ ನೀರಿಗಿಳಿಯುವ ಯುವಕರಿಗೆ ಎಚ್ಚರಿಕೆಯ ಸಂದೇಶ ಕೊಡುವ ಸೂಚನಾ ಫಲಕವನ್ನು ಅಳವಡಿಸಲು ಬಂದಿದ್ದ ಗಂಗೊಳ್ಳಿ ಸಮಾಜ ಸೇವಕ, 24/7 ಹೆಲ್ಪ್ ಲೈನ್ ಮುಖ್ಯಸ್ಥ ಇಬ್ರಾಹಿಂ ಹಾಗೂ ತಂಡದ ಸದಸ್ಯರಾದ ಮೊಹಮ್ಮದ್ ಆದೀಲ್, ಮೊಹಮ್ಮದ್ ಸುಲ್ತಾನ್, ಮೊಹಮ್ಮದ್ ಸಹೀದ್ ಅಖ್ತಾರ್ ಅನ್ಸಾರಿಯನ್ನು ಕಂಡರು. ತಡ ಮಾಡದೇ ಆತನ ಬಳಿ ವಿಚಾರಿಸಿದಾಗ ತನ್ನ ಹೆಸರು ಅಖ್ತಾರ್ ಅನ್ಸಾರಿ. ತಾನೂ ಗಣೇಶಪುರದವನು ಎಂದಷ್ಟೆ ಹೇಳಿದ್ದನು. ತಕ್ಷಣ ಗಂಗೊಳ್ಳಿಯ ತಮ್ಮ ಕಚೇರಿಯಲ್ಲಿ ಆತನಿಗೆ ಊಟೋಪಚಾರ ನೀಡಿ ತಮ್ಮದೇ ಆಪತ್ಭಾಂಧವ ಆಂಬುಲೆನ್ಸ್ ನಲ್ಲಿ ದೂರದ ಕೇರಳದ ಸ್ನೇಹಾಲಯ ಆಶ್ರಮಕ್ಕೆ ಸೇರಿಸಿದ್ದರು.
ಸ್ನೇಹಾಲಯದಲ್ಲಿ 3 ತಿಂಗಳು ಚಿಕಿತ್ಸೆ: ಮಾನಸಿಕ ಅಸ್ವಸ್ಥನಾಗಿದ್ದ ಅನ್ಸಾರಿಗೆ ಸತತ ಮೂರು ತಿಂಗಳುಗಳ ಕಾಲ ಸ್ನೇಹಾಲಯ ಆಶ್ರಮ ಚಿಕಿತ್ಸೆ ಕೊಡಿಸಿತು. ಮೂರು ತಿಂಗಳ ನಂತರ ಗುಣಮುಖನಾದ ಅನ್ಸಾರಿ ತನ್ನ ಮನೆಯ ವಿಲಾಸವನ್ನು ಸ್ನೇಹಾಲಯದ ಬ್ರದರ್ ಜೊಸೇಫ್ ಕ್ರಾಸ್ತಾ ಅವರಿಗೆ ತಿಳಿಸಿದ್ದನು. ಬಿಹಾರದ ಚರ್ಚ್ ಗುರುಗಳಾದ ವಂ. ಫಾ. ಡೇವಿಡ್ ಅವರನ್ನು ಫೋನ್ ಮುಖಾಂತರ ಸಂಪರ್ಕಿಸಿ ಜೊಸೇಫ್ ಕ್ರಾಸ್ತಾ ಅನ್ಸಾರಿಯ ಮನೆಯ ವಿಳಾಸವನ್ನು ಪತ್ತೆ ಹಚ್ಚಲು ವಿನಂತಿಸಿಕೊಂಡಿದ್ದರು. ಅನ್ಸಾರಿಯ ಮನೆಯನ್ನು ಪತ್ತೆ ಹಚ್ಚಿದ್ದ ಫಾದರ್ ಡೇವಿಡ್ ಆತನ ಮನೆಯವರನ್ನು ಸಂಪರ್ಕಿಸಿ ಕೇರಳ ಸ್ನೇಹಾಲಯದ ವಿಳಾಸ ಕೊಟ್ಟಿದ್ದರು. ಇದೀಗ ಅನ್ಸಾರಿ ತಂದೆ, ತಮ್ಮ ಹಾಗೂ ಸ್ನೇಹಿತ ಸ್ನೇಹಾಲಯಕ್ಕೆ ಭೇಟಿ ನೀಡಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ನಾಲ್ಕು ವರ್ಷಗಳಿಂದ ಸತತ ಹುಡುಕಾಟ: ಬಿಹಾರದ ತನ್ನೂರಿನಲ್ಲಿ ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದ ಅನ್ಸಾರಿ ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳೊಂದಿಗೆ ಸಂಸಾರ ನಡೆಸಿಕೊಂಡಿದ್ದರು. ಇದ್ದಕ್ಕಿದ್ದಂತೆಯೇ ಮನೆ ಬಿಟ್ಟ ಅನ್ಸಾರಿ ಊರೂರು ಅಲೆದು ತ್ರಾಸಿಗೆ ಬಂದಿದ್ದರು. ಕಳೆದ ನಾಲ್ಕು ವರ್ಷಗಳಿಮದ ಅನ್ಸಾರಿ ಮನೆಯವರು ಹುಡುಕಾಡ ನಡೆಸಿದರಾದರೂ ಅನ್ಸಾರಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅಲ್ಲದೇ ಪ್ರತೀ ನಮಾಝ್ ನಲ್ಲಿಯೂ ಕೂಡ ಅನ್ಸಾರಿಯ ಬರುವಿಕೆಗೆ ಪ್ರಾರ್ಥನೆ ನಡೆಸುತ್ತಿದ್ದರು.
ಅನ್ಸಾರಿಯ ಬರುವಿಕೆಗೆ ಅವರ ಪತ್ನಿ ಮಕ್ಕಳು ಯಾವ ರೀತಿಯಲ್ಲಿ ಪರಿತಪಿಸುತ್ತಿದ್ದರೋ, ಅವರ ಅಗಲುವಿಕೆಯಿಂದ ಅದೆಷ್ಟು ಕಂಗೆಟ್ಟಿದ್ದರೋ ಅದನ್ನು ಅಕ್ಷರದಲ್ಲಿ ಹಿಡಿದಿಡಲು ಅಸಾಧ್ಯ. ಕೊನೆಗೂ ಗಂಗೊಳ್ಳಿಯ ಆಪತ್ಭಾಂಧವ ಇಬ್ರಾಹಿಂ ಹಾಗೂ ಕೇರಳ ಸ್ನೇಹಾಲಯ ಮುಖ್ಯಸ್ಥರು ಅವರನ್ನು ಮರಳಿ ಮನೆಗೆ ಸೇರಿಸುವಲ್ಲಿ ಸಫಲರಾಗಿದ್ದು, ಅನ್ಸಾರಿಯ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.