ಭಟ್ಕಳ: ಕಳೆದ ಕೆಲವು ದಿನಗಳಿಂದ ಸಂಘ ಪರಿವಾರದ ದಾಂಧಲೆಯಿಂದ ತತ್ತರಿಸಿರುವ ಹೊನ್ನಾವರ, ಕುಮಟಾ ಸಹಜ ಸ್ಥಿತಿಯತ್ತ ಮರಳುತ್ತಿದ್ದರೂ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ.
ಈ ನಡುವೆ ಶಿರಾಲಿ ಮತ್ತು ಮುರ್ಡೇಶ್ವರದಲ್ಲಿ ಬುಧವಾರ ಬಂದ್ ಎಂದು ಕಿಡಿಗೇಡಿಗಳು ವಾಟ್ಸಾಪ್ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಇಂದು ಬೆಳಗ್ಗೆ ಅಂಗಡಿಮುಂಗಟ್ಟುಗಳು ತೆರೆಯುವಲ್ಲಿ ವಿಳಂಬವಾಗಿದ್ದವು.
ಹೊನ್ನಾವರ, ಶಿರಸಿಯಲ್ಲಿ ಜನ ಸಂಚಾರ ವಿರಳವಾಗಿದ್ದು, ಜನರು ಎಂದಿನಂತೆ ಬೀದಿಗಿಳಿಯಲು ಹಿಂಜರಿಯುತ್ತಿದ್ದಾರೆ. ಇಲ್ಲಿಂದ ದೂರದ ಊರುಗಳಿಗೆ ತೆರಳಿರುವವರು ವಾಪಾಸಾಗಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಭಟ್ಕಳ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸರು ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು, ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅದರಲ್ಲೂ ಪ್ರತೀ ದ್ವಿಚಕ್ರ ವಾಹನವನ್ನು ತಪಾಸಣೆ ನಡೆಸಿ ನೋಂದಣಿ ನಂಬರ್ ಅನ್ನು ಗುರುತು ಮಾಡಿಟ್ಟುಕೊಳ್ಳುತ್ತಿದ್ದಾರೆ. ಹೆದ್ದಾರಿಯಲ್ಲಿ ಅಗ್ನಿಶಾಮಕ ದಳದ ವಾಹನ ನಿಯೋಜಿಸಲಾಗಿದೆ.