ಕುಮಟಾ, ಡಿ ೫: ಕುಮಟಾದ ಹೆಗಡೆ ಪ್ರದೇಶದ ಬಳಿ ಭಾನುವಾರ ಸಂಜೆ ಎರಡು ಬೈಕ್ ಗಳ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಬರ್ಗಿ ನಿವಾಸಿ ಚಂದ್ರಕಾಂತ ಪಟಗಾರ ಮತ್ತು ಮಜಗಾಂ ನಿವಾಸಿ ವಿನಾಯಕ ಮುಕ್ರಿ ಎಂದು ಗುರುತಿಸಲಾಗಿದ್ದು ಅಪಘಾತವಾದ ತಕ್ಷಣ ಕುಮಟಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಚಂದ್ರಕಾಂತ್ ರವರ ಬೈಕ್ ವಿಪರೀತ ವೇಗದಿಂದ ಹೋಗುತ್ತಿದ್ದು ಎದುರಿನಿಂದ ಬರುತ್ತಿದ್ದ ವಿನಾಯಕ್ ರವರ ಬೈಕಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಅಡ್ಡಬಿದ್ದ ಚಂದ್ರಕಾಂತ್ ರವರ ತಲೆಗೆ ಪೆಟ್ಟಾಗಿ ರಕ್ತ ಹರಿದಿದೆ. ವಿನಾಯಕ್ ರಿಗೂ ದೇಹದ ಮೇಲೆ ಹಲವೆಡೆ ಗಾಯಗಳಾಗಿವೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೊನ್ನಾವರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ವಿನಾಯಕ್ ರವರ ಬೈಕಿನ ಹಿಂದೆ ಕುಳಿದಿದ್ದ ಮಹಿಳಾ ಪ್ರಯಾಣಿಕರಿಗೂ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತವಾದ ತಕ್ಷಣ ಸ್ಥಳದಲ್ಲಿ ಉಪಸ್ಥಿತರಿದ್ದ ಸಾರ್ವಜನಿಕರು ತಕ್ಷಣವೇ ೧೦೮ ಅಂಬ್ಯುಲೆನ್ಸ್ ಗೆ ಕರೆ ಮಾಡುವ ಮೂಲಕ ತಕ್ಷಣವೇ ಚಿಕಿತ್ಸೆ ದೊರಕಿಸಿ ಪ್ರಾಣ ಕಾಪಾಡುವಲ್ಲಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪ್ರಕರಣವನ್ನು ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.