ಕೋಲಾರ:- ಕೆಜಿಎಫ್ ವಿಧಾನಸಭಾ ಕ್ಷೇತ್ರ ನನ್ನ ಕರ್ಮಭೂಮಿ, ಮನೆಮಗಳಂತೆ ನನ್ನನ್ನು ಕಾಣುತ್ತಿರುವ ಇಲ್ಲಿನ ಜನರ ಋಣ ತೀರಿಸುವ ಸಂಕಲ್ಪದೊಂದಿಗೆ ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡಿ ಸಾಲ ಕೊಡಿಸಿ ಅವರ ಆರ್ಥಿಕ ಸಬಲತೆಗೆ ಶ್ರಮಿಸುತ್ತಿದ್ದೇನೆ ಎಂದು ಬ್ಯಾಂಕ್ ನಿರ್ದೇಶಕಿ ರೂಪಶಶಿಧರ್ ತಿಳಿಸಿದರು.
ಶುಕ್ರವಾರ ಬೇತಮಂಗಲ ಸಮೀಪದ ಸುಂದರಪಾಳ್ಯ ಎಸ್ಎಫ್ಸಿಎಸ್ ಆಶ್ರಯದಲ್ಲಿ ಮಹಿಳಾ ಸಂಘಗಳಿಗೆ ಡಿಸಿಸಿ ಬ್ಯಾಂಕಿನಿಂದ ಶೂನ್ಯಬಡ್ಡಿ ಸಾಲ ವಿತರಿಸಿ, ಸಾಲ ಸದ್ಬಳಕೆಗೆ ಜಾಗೃತಿ ಮೂಡಿಸಿ ಅವರು ಮಾತನಾಡುತ್ತಿದ್ದರು.
ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು,ಹಿಂದುಳಿದವರೇ ಇದ್ದಾರೆ, ಅವರ ನೆರವಿಗೆ ನಿಲ್ಲಲು ನನಗೆ ಡಿಸಿಸಿ ಬ್ಯಾಂಕ್ ಅವಕಾಶ ಕಲ್ಪಿಸಿದೆ, ಇಲ್ಲಿನ ನನ್ನ ತಾಯಂದಿರು,ಅಕ್ಕತಂಗಿಯರಿಗೆ ಶೂನ್ಯ ಬಡ್ಡಿಯ ಸಾಲ ಕೊಡಿಸಿ ಅವರ ಆರ್ಥಿಕ ಸದೃಢತೆಗೆ ನನ್ನ ಕೈಲಾದಷ್ಟು ನೆರವಾಗುವ ದೃಢ ನಿರ್ಧಾರೊಂದಿಗೆ ಶ್ರಮಿಸುತ್ತಿದ್ದೇನೆ ಎಂದರು.
ಜೀವನ ಪೂರ್ತಿ ನಾನು ಕೆಜಿಎಫ್ ಜನರ ಸೇವೆ ಮಾಡುತ್ತೇನೆ, ನಾನು ಇಲ್ಲಿಂದ ಹೊರ ಹೋಗುವ ಪ್ರಶ್ನೆಯೇ ಇಲ್ಲ ಎಂದ ಅವರು, ಇಲ್ಲಿನ ಅಕ್ಕತಂಗಿಯರು,ಅಣ್ಣತಮ್ಮಂದಿರು, ಹಿರಿಯರು ನನ್ನನ್ನು ತಮ್ಮ ಮನೆಮಗಳಂತೆ ಹಾರೈಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಮೂಲಕ ಸಾಲ ಕೊಡಿಸುವ ಅವಕಾಶ ನನಗೆ ಸಿಕ್ಕಿದೆ, ಈ ಸದಾವಕಾಶ ಬಳಸಿಕೊಳ್ಳುತ್ತಿದ್ದೇನೆ, ಯಾರೂ ಸಾಲಕ್ಕಾಗಿ ಯಾರಿಗೂ ಲಂಚ ನೀಡಬೇಕಾಗಿಲ್ಲ, ನಿಯಮಾನುಸಾರ ಅರ್ಜಿ ಹಾಕಿದರೆ ಸಾಕು ಸಾಲ ನಾನು ಕೊಡಿಸುತ್ತೇನೆ, ಯಾರ ಶಿಫಾರಸ್ಸು ಇಲ್ಲಿ ಅಗತ್ಯವಿಲ್ಲ ಎಂದರು.
ನಿಮ್ಮ ಮನೆ ಬಾಗಿಲಿಗೆ ಬಂದು ಸಾಲ ಕೊಡಿಸುವ ಕೆಲಸ ಮಾಡುವ ನನಗೆ ನಿಮ್ಮ ಆಶೀರ್ವಾದ ಮಾತ್ರ ಸಾಕು, ನಾನು ರಾಜಕೀಯ ಸಾಧನೆಗಾಗಿ ಮಾತ್ರ ಇಲ್ಲಿ ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದರು.
ರಾಜ್ಯದ ಸಿದ್ದರಾಮಯ್ಯ ಸರ್ಕಾರ ಮೀಟರ್ ಬಡ್ಡಿ ಶೋಷಣೆಯಿಂದ ತಾಯಂದಿರನ್ನು ಪಾರು ಮಾಡುವ ಉದ್ದೇಶದಿಂದ ಡಿಸಿಸಿ ಬ್ಯಾಂಕಿನ ಮೂಲಕ ತಾಯಂದಿರಿಗೂ ಶೂನ್ಯ ಬಡ್ಡಿ ಸಾಲ ನೀಡುತ್ತಿದೆ, ಕೆಲವು ಮಧ್ಯವರ್ತಿಗಳು ಇದರ ದುರ್ಬಳಕೆಗೆ ಯತ್ನಿಸಿರುವ ನಿದರ್ಶನಗಳಿವೆ, ತಾಯಂದಿರು ಎಚ್ಚರಿಕೆಯಿಂದಿರಿ ಎಂದರು.
ಪಡೆದ ಸಾಲ ಸದ್ಬಳಕೆಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಈ ಕಾರ್ಯಕ್ರಮ ಆಯೋಜಿಸಿದ್ದು, ಮಹಿಳೆಯರು ಕುರಿ,ಮೇಕೆ ಸಾಕಾಣೆ ಮತ್ತಿತರ ಆದಾಯೋತ್ಪನ್ನ ಚಟುವಟಿಕೆ ಕೈಗೊಂಡಿರುವುದು ನಿಜಕ್ಕೂ ಖುಷಿ ತಂದಿದೆ ಎಂದರು.
ಮಹಿಳೆಯರು ಸಾಲ ಮರುಪಾವತಿಯಲ್ಲಿ ನಂಬಿಕೆ ಉಳಿಸಿಕೊಂಡಿದ್ದಾರೆ, ಆ ನಂಬಿಕೆಗೆ ಚ್ಯುತಿ ಬಾರದಂತೆ ನೀವು ನಡೆದುಕೊಳ್ಳಿ ಸಾಲ ಮರುಪಾವತಿ ಮಾಡಿ ಮತ್ತಷ್ಟು ಸಾಲ ಪಡೆದು ನಿಮ್ಮ ಬದುಕು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಕುಮಾರಿ, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ, ಸುಂದರಪಾಳ್ಯ ಎಸ್ಎಫ್ಸಿಎಸ್ ಅಧ್ಯಕ್ಷ ರಾಧಾಕೃಷ್ಣಾರೆಡ್ಡಿ, ಉಪಾಧ್ಯಕ್ಷ ಚನ್ನಕೇಶವರೆಡ್ಡಿ, ಬೇತಮಂಗಲ ಎಸ್ಎಫ್ಸಿಎಸ್ ಅಧ್ಯಕ್ಷ ಪ್ರಸನ್ನ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಕೋಲಾರ ಜಿಲ್ಲೆಯ ಬೇತಮಂಗಲಸಮೀಪದ ಸುಂದರಪಾಳ್ಯದಲ್ಲಿ ಕೋಲಾರ ಡಿಸಿಸಿ ಬ್ಯಾಂಕಿನಿಂದ ಮಹಿಳೆಯರಿಗೆ ಡಿಸಿಸಿ ಬ್ಯಾಂಕಿನಿಂದ ಬ್ಯಾಂಕ್ ನಿರ್ದೇಶಕಿ ರೂಪಶಶಿಧರ್ ಶೂನ್ಯ ಬಡ್ಡಿ ಸಾಲ ವಿತರಿಸಿದರು.