ಕೋಲಾರ ಪ್ರತಿಯೊಬ್ಬ ವ್ಯಕ್ತಿಯು ಒಳ್ಳೆಯ ಆಹಾರ ಪದ್ಧತಿ, ಉತ್ತಮ ಅಭ್ಯಾಸಗಳು ಹಾಗೂ ಸನ್ಮಾರ್ಗದಿಂದ ನಡೆಯುವ ಮೂಲಕ ಉತ್ತಮ ಆರೋಗ್ಯ ಹೊಂದಲು ಸಾಧ್ಯ, ಎಂದು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಾದ ಗೀತಮ್ಮ ಆನಂದರೆಡ್ಡಿ ಅವರು ಅಭಿಪ್ರಾಯಪಟ್ಟರು.
ಇಂದು ನಗರದ ಟಿ.ಚನ್ನಯ್ಯ ರಂಗಮಂದಿರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ – 2017 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರೋಗ್ಯ ಹೊಂದಿರುವ ಜನರಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದ ಅವರು ಏಡ್ಸ್ ಎಂಬುದು ಭಯಾನಕ ರೋಗ. ಹೆಚ್.ಐ.ವಿ ವೈರಸ್ಗಳು ಹಲವಾರು ಕಾಯಿಲೆಗಳನ್ನು ಉಂಟು ಮಾಡುತ್ತವೆ. ಆದ್ದರಿಂದ ಏಡ್ಸ್ ರೋಗ ಬಾರದಂತೆ ಹಾಗೂ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರಾದ ಸೂಲೂರು ಎಂ. ಆಂಜಿನಪ್ಪ ರವರು ಮಾತನಾಡಿ, ಏಡ್ಸ್ ಎಂಬುದು ಮಾರಕ ರೋಗ. ವಿಶ್ವಸಂಸ್ಥೆಯು ಇದರ ನಿರ್ಮೂಲನೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದನ್ನು ತಡೆಗಟ್ಟಲು ಜಾಗೃತಿ ಮೂಡಿಸುವುದೇ ಪ್ರಮುಖ ಹಾದಿ. ಪ್ರಪಂಚದಲ್ಲಿಯೇ ಹೆಚ್ಚು ಯುವಶಕ್ತಿಯನ್ನು ಹೊಂದಿರುವ 2ನೇ ದೇಶ ಭಾರತ. ಆದರೆ ಯುವ ಜನಾಂಗವೇ ಹೆಚ್ಚಾಗಿ ಈ ಕಾಯಿಲೆಗೆ ತುತ್ತಾಗುತ್ತಿರುವುದು ದುಸ್ತರ. ಇದರಿಂದ ದೇಶದ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂದರು.
ಅಭಿವೃದ್ಧಿ ಎಂದರೆ ಚರಂಡಿ ರಸ್ತೆಗಳ ನಿರ್ಮಾಣ ಮಾತ್ರವಲ್ಲ. ಪ್ರತಿಯೊಬ್ಬ ಮನುಷ್ಯನಿಗೆ ಉತ್ತಮ ಆರೋಗ್ಯ, ಶಿಕ್ಷಣ ನೀಡಬೇಕು. ಆಗ ಮಾತ್ರ ಮಾನವಾಭಿವೃದ್ಧಿಯಾಗಿ ದೇಶದ ಅಭಿವೃದ್ಧಿ ಸಾದ್ಯವಾಗುತ್ತದೆ. ಏಡ್ಸ್ ಬಗ್ಗೆ ಜಾಗೃತಿಯನ್ನು ಪಂಚಾಯಿತಿ ಮಟ್ಟದಲ್ಲಿ, ಹೈಸ್ಕೂಲ್ ಹಾಗೂ ಕಾಲೇಜುಗಳಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಅರಿವು ಮೂಡಿಸಬೇಕು. ಏಡ್ಸ್ ಸೋಂಕಿತ ವ್ಯಕ್ತಿಗಳು ಯಾವುದೇ ಹಿಂಜರಿಕೆ ಇಲ್ಲದೆ ವೈದ್ಯರ ಬಳಿ ಮುಕ್ತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹೆಚ್.ಐ.ವಿ ಸೊಂಕಿತ ಪ್ರತಿನಿಧಿ ಹಾಗೂ ನವಜೀವನ್ ಸಂಸ್ಥೆಯ ಸದಸ್ಯೆಯಾದ ಪ್ರಮೀಳಾರವರು ಮಾತನಾಡಿ, ನನಗೆ 2004 ರಲ್ಲಿ ಸೋಂಕು ತಗುಲಿತ್ತು. ಆದರೆ ನನಗೆ ತಿಳಿದಿದ್ದು 2006 ರಲ್ಲಿ. ಅಂದು ನಾನು ತುಂಬಾ ಹೆದರಿದ್ದೆ. ನಂತರ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ನನಗೆ ನನ್ನ ಕುಟುಂಬ ತುಂಬಾ ಬೆಂಬಲ ನೀಡಿತು. ನಾನು ಅಂದಿನಿಂದ ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಹೆಚ್.ಐ.ವಿ ಪೀಡಿತರಿಗೆ ಮಾರ್ಗದರ್ಶನ ಹಾಗೂ ಸರ್ಕಾರದಿಂದ ಇರುವ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ನೆರವಾಗುತ್ತಿದ್ದೇನೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಐ.ಇ.ಸಿ ಸಾಮಗ್ರಿಗಳ ಬಿಡುಗಡೆ ಮತ್ತು ಪೊಸ್ಟಲ್ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯದಲ್ಲಿ ಹೆಚ್.ಐ.ವಿ ಪೀಡಿತರ ಹೆರಿಗೆ ಮಾಡಿಸಿರುವ ಉತ್ತಮ ಆಸ್ಪತ್ರೆಗಳು, ಹೆಚ್.ಐ.ವಿ ಬಗ್ಗೆ ಅರಿವು ಮೂಡಿಸುವ ಸಂಘ ಸಂಸ್ಥೆಗಳು, ರಕ್ತನಿಧಿ ಸಂಗ್ರಹಣೆ ಮಾಡಿರುವ ಉತ್ತಮ ಬ್ಲೆಡ್ ಬ್ಯಾಂಕ್ಗಳು, ಉತ್ತಮ ಡಾಕೋ ಘಟಕಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಈ ವರ್ಷ “ಆರೋಗ್ಯ ಎಲ್ಲರ ಹಕ್ಕು, ನನ್ನ ಆರೋಗ್ಯ ನನ್ನ ಹಕ್ಕು” ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಯಿತು.
ಬೆಳಿಗ್ಗೆ 9.30 ಗಂಟೆಗೆ ಜಾಥಾ ಕಾರ್ಯಕ್ರಮಕ್ಕೆ ನಗರದ ಪ್ರವಾಸಿ ಮಂದಿರದ ಬಳಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಗೀತಮ್ಮ ಆನಂದರೆಡ್ಡಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಬಿ.ಕಾವೇರಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಾಥವು ಜಾಗೃತಿ ಮೂಡಿಸುತ್ತಾ ಗಾಂಧಿ ವೃತ್ತ ಮೂಲಕ ರಂಗಮಂದಿರಕ್ಕೆ ಬಂದಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಜಿ.ಸತ್ಯವತಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಬಿ.ಕಾವೇರಿ, ಜಿಲ್ಲಾ ರಕ್ಷಣಾಧಿಕಾರಿ ರೋಹಿಣಿ ಕಟೋಚ್ ಸಪೆಟ್, ಪ್ರಿವೆಂಷನ್ ಸೊಸೈಟಿಯ ನಿರ್ದೇಶಕರಾದ ಡಾ. ಶಮಾ ಇಕ್ಬಾಲ್, ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರಾದ ಯಶೋದ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್, ಅಂಚೆ ಇಲಾಖೆಯ ನಿರ್ದೇಶಕರಾದ ನಟರಾಜನ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಲಕ್ಷ್ಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿಜಯಕುಮಾರ್, ಡಾ.ಜಗದೀಶ್ ಸೇರಿದಂತೆ ಉಪಸ್ಥಿತರಿದ್ದರು.
ಸಂಗೀತ-ನೃತ್ಯ ಅಕಾಡೆಮಿ ಗುರುಗಳ ಹುದ್ದೆಗೆ ಅರ್ಜಿ ಆಹ್ವಾನ
ಕೋಲಾರ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2017-18 ನೇ ಸಾಲಿನ ಸಂಗೀತ ನೃತ್ಯ ಕಲಾ ಪ್ರಕಾರಗಳಿಗೆ ವಿಶೇಷ ಘಟಕದಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗಾಗಿ ಗುರುಶಿಷ್ಯ ಪರಂಪರೆ ತರಬೇತಿ ಹಾಗೂ ರಸಗ್ರಹಣ ಶಿಬಿರಕ್ಕಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗುರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಗುರುಗಳು ತಮ್ಮ ಮನವಿ ಪತ್ರದೊಂದಿಗೆ 12 ವರ್ಷದಿಂದ 25 ವರ್ಷದ ಒಳಗಿರುವ 25 ರಿಂದ 30 ಅಭ್ಯರ್ಥಿಗಳ ಸ್ವವಿವರದ ಜೊತೆಗೆ ಕಲಾಭ್ಯಾಸದ ವಿವರದೊಂದಿಗೆ ಜನ್ಮಪ್ರಮಾಣ ಪತ್ರ , ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ದಿನಾಂಕ: 15.12.2017 ರ ಒಳಗಾಗಿ ರಿಜಿಸ್ಟ್ರಾರ್, ಕರ್ನಾಟಕ ನೃತ್ಯ ಅಕಾಡೆಮಿ, ಕನ್ನಡ ಭವನ 2 ನೇ ಮಹಡಿ, ಜೆಸಿ ರಸ್ತೆ, ಬೆಂಗಳೂರು-2, ದೂರವಾಣಿ : 080-22215072 ಇಲ್ಲಿಗೆ ಕಳುಹಿಸಲು ಅಕಾಡೆಮಿಯ ರಿಜಿಸ್ಟಾರ್ ಅವರು ತಿಳಿಸಲಾಗಿದೆ.
ಡಿ.17 ಉಪ ಚುನಾವಣೆ ಪ್ರಯುಕ್ತ ಸಂತೆ,ಜಾತ್ರೆ ಇತ್ಯಾದಿಗಳಿಗೆ ನಿಷೇಧ
ಕೋಲಾರ: 2017 ರ ಉಪ ಚುನಾವಣೆಯ ಸಂಬಂಧ ಕೋಲಾರ ಜಿಲ್ಲೆಯ, ಕೋಲಾರ ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿಯ ದಾರಿರೆಡ್ಡಿಹಳ್ಳಿ-6 ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಬೈರಗಾನಪಲ್ಲಿ ಮತ್ತು ದಳಸನೂರು ಗ್ರಾಮ ಪಂಚಾಯಿತಿಗಳಲ್ಲಿನ ಬೈಕೊತ್ತೂರು-7 ಮತ್ತು ಕೊಡಿಚೆರುವು-8 ರಲ್ಲಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಲ್ಲಿನ ಸದ್ಯಸ ಸ್ಥಾನಗಳಿಗೆ ಉಪ ಚುನಾವಣೆಯನ್ನು ಎಲ್ಲಾ ಮತಗಟ್ಟೆ ಕ್ಷೇತ್ರಗಳಲ್ಲಿ ದಿನಾಂಕ 17-12-2017 ರಂದು ನಡೆಯಲಿದೆ. ಮತದಾನ ನಡೆಯಲಿರುವುದರಿಂದ ಮುಕ್ತ ಮತ್ತು ನ್ಯಾಯೋಚಿತವಾಗಿ ಚುನಾವಣೆಯನ್ನು ನಿರ್ವಹಿಸಲು
ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮ 1993 ರ ಪ್ರಕರಣ 36 ರನ್ವಯ ಈ ಮೇಲ್ಕಂಡ ಪ್ರದೇಶಗಳಲ್ಲಿ ದಿನಾಂಕ 17-12-2017 ರಂದು ಜಾತ್ರೆ , ಸಂತೆ ಇತ್ಯಾದಿಗಳನ್ನು ನಡೆಯದಂತೆ ಮಾನ್ಯ ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶ ಹೊರಡಿಸಿರುತ್ತಾರೆ.
ಡಿ.11 ರಂದು ಕೋಲಾರದ ಹಲವೆಡೆ ವಿದ್ಯುತ್ ವ್ಯತ್ಯಯ
ಕೋಲಾರ: ಕೋಲಾರದ 220/66/11 ಕೆ.ವಿ ಸ್ವೀಕರಣಾ ಕೇಂದ್ರ ಹಾಗೂ ಮಾಲೂರಿನ 220/66/11 ಕೆ.ವಿ ಸ್ವೀಕರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಕೋಲಾರ ಮತ್ತು ಮಾಲೂರು 220 ಕೆ.ವಿ ಸ್ವೀಕರಣ ಕೇಂದ್ರದಿಂದ ಉಪ – ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜಾಗುವ ಗ್ರಾಮಗಳಲ್ಲಿ ದಿನಾಂಕ: 11-12-2017 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೋಲಾರದ 220/66/11 ಕೆ.ವಿ ಸ್ಟೇಷನ್, ಡಿ.ಆರ್.ಡಿ.ಓ, ಟಮಕ, ಪಿ.ಜಿ.ಸಿ.ಐ.ಎಲ್, ವಕ್ಕಲೇರಿ, ವೇಮಗಲ್, ಶೆಟ್ಟಿಮಾದಮಂಗಲ, ಕ್ಯಾಲನೂರು, ಸುಗಟೂರು, ನರಸಾಪುರ, ಕೆಂಬೋಡಿ, ತೊರದೇವಂಡಹಳ್ಳಿ, ಮಲ್ಲಸಂದ್ರ, ಹೆಚ್.ಗೊಲ್ಲಹಳ್ಳಿ, ಆವಣಿ, ತಾಯಲೂರು, ಯಲ್ದೂರು, ಬಂಗಾರಪೇಟೆ, ನಂಗಲಿ, ಮುಳಬಾಗಿಲು, ಮುಡಿಯನೂರು, ದಳಸನೂರು , ಬೈರಕೂರು , ಎನ್.ಜಿ.ಹುಲ್ಕೂರು , ಮಲ್ಲನಾಯಕನಹಳ್ಳಿ ಸ್ಟೇಷನ್ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಕೋಲಾರ ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ರವರು ತಿಳಿಸಿದ್ದಾರೆ.
ಸಾರಿಗೆ ಪ್ರಾಧಿಕಾರ ಸಭೆ ಮುಂದೂಡಿಕೆ
ಕೋಲಾರ :ಕೋಲಾರ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದದಂತೆ ದಿನಾಂಕ 08-12-2017 ರಂದು ಬೆಳಿಗ್ಗೆ 11:00 ಗಂಟೆಗೆ ನಡೆಯಬೇಕಾಗಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕಾರಣಾಂತರದಿಂದ ದಿನಾಂಕ : 15-12-2017 ರ ಬೆಳಿಗ್ಗೆ 11-00 ಗಂಟೆಗೆ ಮುಂದೂಡಿಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.