ಕೋಲಾರ: ನಾವು ಇಂದಿನ ಮಕ್ಕಳಲ್ಲಿ ಮೂಡಿಸುವ ಜಾಗೃತಿಯೇ, ನಾಳೆ ಉತ್ತಮ ಸಮಾಜದ ತಳಹದಿ ಆಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ರವರು ಅಭಿಪ್ರಾಯ ಪಟ್ಟರು.
ಹತ್ತು ದಿನಗಳ ‘ಚಿಣ್ಣರ ಬೇಸಿಗೆ ಶಿಬಿರ’ವನ್ನು ಮುಗಿಸಿಕೊಂಡು ಸಮಾರೋಪ ದಿನದ ಅಂಗವಾಗಿ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಸ್ವಾತಂತ್ರ್ಯ ಹೋರಾಟಗಾರರಂತೆ ವರ್ಣರಂಜಿತ ಉಡುಪುಗಳನ್ನು ಧರಿಸಿz್ದÀ ಚಿಣ್ಣರು ಸೇರಿದಂತೆ, ಸುಮಾರು 50ಕ್ಕೂ ಹೆಚ್ಚು ಕಬ್ಸ್, ಬುಲ್ ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಹಾಗೂ ರೇಂಜರ್ಗಳು ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಮತದಾನದ ಮಹತ್ವ ತಿಳಿಸುತ್ತಾ, ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಮತದಾನ ಕುರಿತು ಅರಿವು ಮೂಡಿಸಿದ್ದು, ವಿಶೇಷವಾಗಿತ್ತು.
ಕೈಯಲ್ಲಿ ವಿವಿಧ ಮತದಾನದ ಸಂದೇಶಗಳನ್ನು ಹಿಡಿದು ಅಂಗಡಿ ಮುಗ್ಗಟ್ಟುಗಳಿಗೆ ಇ.ವಿ.ಎಂ ಹಾಗೂ ವಿ.ವಿ.ಪ್ಯಾಟ್ ಹೇಗೆ ಬಳಸುವುದು, ನೈತಿಕ ಮತದಾನ ಹಾಗೂ ಮತದಾನದ ಪ್ರತಿಜ್ಞಾ ವಿಧಿ ಕುರಿತು ಕರಪತ್ರಗಳನ್ನು ವಿತರಿಸಿದ ಚಿಣ್ಣರು “ಮತದಾನ ನಿಮ್ಮ ಹಕ್ಕು - ಅದನ್ನು ತಪ್ಪದೆ ಚಲಾಯಿಸಿ” ಎಂದು ಸಾರ್ವಜನಿಕರನ್ನು ಆಗ್ರಹಿಸಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಂತಹ ಜಿಲ್ಲಾ ಸ್ವೀಫ್ ಸಮಿತಿಯ ನೋಡೆಲ್ ಅಧಿಕಾರಿ
ಸಿ.ಆರ್. ಮಂಜುನಾಥ್ ರವರು ಮಕ್ಕಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಸ್ಕೌಟ್ಸ್ನ ಜಿಲ್ಲಾ ಆಯುಕ್ತರಾದ ಕೆ. ಆರ್ ಸುರೇಶ್, ಜಿಲ್ಲಾ ಸಂಘಟನಾ ಆಯುಕ್ತರಾದ ವಿ. ಬಾಬು, ಜಿಲ್ಲಾ ಸಂಘಕರಾದ ವಿ.ವಿಶ್ವನಾಥ್, ಜಂಟಿ ಕಾರ್ಯದರ್ಶಿಗಳಾದ ಉಮಾದೇವಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ.ಮುರಳಿರವರು ಭಾಗವಹಿಸಿದ್ದರು.