ಕೋಲಾರ: ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆ ಸಮಯದಲ್ಲಿ ಶಾಂತಿ ಮತ್ತು ಕಾನೂನು ವ್ಯವಸ್ಥೆ ಕಾಪಾಡಲು ಹೆಚ್ಚಿನ ಪೋಲಿಸ್ ವ್ಯವಸ್ಥೆ ಮಾಡಬೇಕೆಂದು ಪೋಲಿಸ್ ವರಿಷ್ಠಾಧಿಕಾರಿಗಳಿಗೆ ರೈತ ಸಂಘದಿಂದ ಮನವಿ ನೀಡಿ ಒತ್ತಾಯಿಸಲಾಯಿತು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿದ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಚಿಕ್ಕಪುಟ್ಟ ವಿಷಯಗಳಿಗೆ ರಾಜಕೀಯ ಬಣ್ಣ ಕಟ್ಟಿ ಅಮಾಯಕರ ಜೀವನದ ಜೊತೆ ಚೆಲ್ಲಾಟವಾಡುತ್ತಾರೆ. ಐದು ವರ್ಷಗಳಿಂದ ನೆನಪು ಬಾರದ ಗ್ರಾಮೀಣ ಪ್ರದೇಶಗಳ ಸಗಣಿ, ಹದಗೆಟ್ಟ ರಸ್ತೆಗಳು ಚುನಾವಣೆ ಸಮಯದಲ್ಲಿ ಮಾತ್ರ ಜ್ಞಾಪಿಸಿಕೊಂಡು ಅನಂತರ ಮರೆತು ನಗರ ಜೀವನಕ್ಕೆ ಹೊಂದಿಕೊಳ್ಳುವ ರಾಜಕಾರಣಿಗಳ ಗುಳ್ಳೆನರಿ ತಂತ್ರಕ್ಕೆ ಬಲಿಯಾಗುವ ಅಮಾಯಕರನ್ನು ರಕ್ಷಿಸಲು ಚುನಾವಣೆ ಸಮಯದಲ್ಲಿ ಗ್ರಾಮೀಣ ಪ್ರದೇಶದ ಶಾಂತಿ ಸ್ನೇಹ ಕಾಪಾಡುವಂತೆ ಆಯಾ ವ್ಯಾಪ್ತಿಯ ಪೋಲಿಸ್ ಠಾಣೆಗಳಿಗೆ ತಿಳಿಸಬೇಕು. ಹಾಗೂ ಈ ಸಮಯದಲ್ಲಿ ಹೆಚ್ಚಿನ ಪೋಲಿಸ್ ಪಡೆಯನ್ನು ನೀಯೋಜಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಂಚಾಲಕ ಕೆ ಶ್ರೀನಿವಾಸಗೌಡ ಮತನಾಡಿ ಗ್ರಾಮೀಣ ಪ್ರದೇಶದ ಬಡವರ ರಕ್ತ ಹೀರುವ ಜೂಜಾಟ ಮತ್ತು ಇಸ್ಪೇಟ್ದಂಧೆ ಹಾಗೂ ಕೋಳಿ ಪಂದ್ಯಗಳಿಗೆ ಕಡಿವಾಣ ಹಾಕಿ ಬಡ ಕುಟುಂಬಗಳನ್ನು ಉಳಿಸಬೇಕು. ಮತ್ತು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಪೋಲಿಸ್ಠಾಣೆ ಸ್ಥಾಪನೆ ಮಾಡಿ ಅಲ್ಲಿನ ಅವ್ಯವಸ್ಥೆಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾದ್ಯಕ್ಷೆ ಎ.ನಳಿನಿ, ಪುರುಷೋತ್ತಮ್ ಈಕಂಬಳ್ಳಿ ಮಂಜುನಾಥ್, ರಂಜಿತ್, ಸಾಗರ್, ಶಿವ, ಸುರೇಶ್, , ಪುತ್ತೇರಿರಾಜು, ಮುಂತಾದವರಿದ್ದರು.