ಕೋಲಾರ : ಬರಪೀಡಿತ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಸಂಪೂರ್ಣವಾಗಿ ಕಡೆಗಣಿಸಿದ್ದು, ಜಿಲ್ಲೆಯ ಜನಪ್ರತಿನಿದಿಗಳೂ ಕೂಡ ಈ ವಿಚಾರದ ಬಗ್ಗೆ ಚಕಾರವೆತ್ತದೆ ಇರುವುದು ಮುಂದಿನ ಕೋಲಾರ ಜಿಲ್ಲೆಯ ಪರಿಸ್ಥಿತಿ ಹೇಗಿರಬಹುದು ಎಂಬುದು ರೈತರಲ್ಲಿ ಪ್ರಶ್ನೆಯಾಗಿ ಉಳಿದಿದೆ.
ಈ ಬಾರಿ ರಾಜ್ಯ ಬಜೆಟ್ನಲ್ಲಿ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಮುಖ್ಯಮಂತ್ರಿಗಳು ರೈತರ ಸಾಲ ಸಂಪೂರ್ಣ ಮನ್ನ ಮಾಡುವ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಹಾಗೆಯೇ ಬಹುಮತ ಇಲ್ಲದೇ ಇದ್ದರೂ ಅದೃಷ್ಠವಶಾತ್ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವ ಮುನ್ನ ಆಡಿದ ಮಾತುಗಳು ಈ ಬಜೆಟ್ನಲ್ಲಿ ಎಲ್ಲಾ ಹುಸಿಯಾಯಿತು.
2 ಲಕ್ಷದವರೆಗೆ ರೈತರ ಸಾಲ ಮನ್ನ ಎಂದು ಹೇಳಿರುವ ಮುಖ್ಯಮಂತ್ರಿಗಳು ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಿತ್ತುಕೊಳ್ಳುವ ರೀತಿಯಲ್ಲಾಗಿದೆ. ರೈತರು ಬೆಳೆದ ಬೆಳೆÉಗಳಿಗೆ ಬೆಂಬಲ ಬೆಲೆ ಕೊಡಿಸುವುದರಲ್ಲಿಯೂ ವಿಫಲರಾಗಿರುವ ರಾಜ್ಯ ಸರ್ಕಾರ. ಕೋಲಾರ ಜಿಲ್ಲೆಯ ಬೆಂಗಳೂರಿನ ಕೊಳಚೆ ನೀರು ಬರುತ್ತಿದ್ದರೂ ಹಲವು ಪ್ರಗತಿಪರ ಸಂಘಟನೆಗಳು ಹಾಗೂ ರೈತ ನಾಯಕ ಪ್ರೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೂರು ಬಾರಿ ಶುದ್ಧಿಕರಿಸಿ ಕೆ.ಸಿ.ವ್ಯಾಲಿ ನೀರು ಹರಿಸಬೇಕೆಂದು ನಿರಂತರವಾಗಿ ಹೋರಾಟಗಳು ನಡೆಯುತ್ತಿದ್ದರೂ ಸಹ ಈ ಬಜೆಟ್ನಲ್ಲಿ ವಿಶೇಷ ವಾಗಿ ನೀರಿನ ವಿಚಾರವಾಗಿ ಯಾವುದೇ ಬಜೆಟ್ ಮಂಡನೆಯಾಗದಿರುವುದು ನೋವಿನ ಸಂಗತಿಯಾಗಿದೆ.
ನೀರಿನ ವಿಚಾರವಾಗಿ ಜಿಲ್ಲೆಗಳನ್ನು ಕಡೆಗಣಿಸಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದರಲ್ಲಿಯೂ ಮತ್ತು ರೈತರು ಮಾಡಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನ ಮಾಡುವುದರಲ್ಲಿಯೂ ವಿಫಲವಾಗಿದ್ದು, ರಾಜ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ರೈತರ ಪ್ರಾಣದ ಜೊತೆ ಚಲ್ಲಾಟವಾಡುತ್ತಿರುವುದು ಖಂಡನೀಯ. ಆದರೆ ರಾಜ್ಯದಲ್ಲಿ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳನ್ನು ವಿಶೇಷವಾಗಿ ಪರಿಗಣಿಸಿ ಬಯಲು ಸೀಮೆಯ ಜಿಲ್ಲೆಯಾದ ಕೋಲಾರವನ್ನು ಕÀಡೆಗಣಸಿರುವುದು ಇಲ್ಲಿನ ಜನಪ್ರತಿನಿಧಿಗಳ ನಾಚಿಕೆಯಾಗುವುದಿಲ್ಲವೆ. ಯಾವುದೇ ಸರ್ಕಾರಿ ಸೌಲತ್ತುಗಳಿಲ್ಲದೆ ಹೋರಾಟ ಮಾಡುತ್ತಿರುವ ಹೋರಾಟಗಾರರಿಗೆ ಇರುವ ಕಾಳಜಿಯು ಜಿಲ್ಲೆಯ ಎಲ್ಲಾ ರಾಜಕಾರಣಿಗೂ ಇಲ್ಲವಾಗಿದೆ. ರಾಜಕಾರಣಿಗಳು ಕೇವಲ ಆಟಕ್ಕುಂಟು ಲೆಕ್ಕಕಿಲ್ಲದಂತಾಗಿದೆ.
ಕೋಲಾರದಲ್ಲಿ ರೈತ ಮುಖಂಡರು ಸಭೆ ಸೇರಿ ಚರ್ಚಿಸಿ ರೈತ ವಿರೋಧಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ರಾಜ್ಯ ಸರ್ಕಾರದ ವಿರುದ್ಧವಾಗಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ರೈತ ನಾಯಕ ಪ್ರೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಈ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಕುರುಬರಹಳ್ಳಿ ಶಂಕರಪ್ಪ ಕೊಲದೇವಿ ಕೋಪಾಲಕೃಷ್ಣಮೂರ್ತಿ, ಕೊಲದೇವಿ ಗಂಗಾಧರ್, ಸುಣ್ಣಕಲ್ ಗಂಗಾಧರ್, ತೇರಹಳ್ಳಿ ಚಂದ್ರಪ್ಪ, ಕಲಾವಿದ ಮತ್ತಿಕುಂಟೆ ಕೃಷ್ಣ, ಚೋಳಘಟ್ಟ ರವಿ ಇನ್ನೂ ಅನೇಕರು ಭಾಗವಹಿಸಿದ್ದರು.