ಕೋಲಾರ : ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಕುರುಡುಮಲೆ ಶಾಲೆ ಜಿಲ್ಲೆಗೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಲಿಯ ನಿರ್ಧೇಶಕರಾದ ಸುಮಂಗಲ ತಿಳಿಸಿದರು.
ಕುಡುಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಅನಿರೀಕ್ಷಿತವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ವೀಕ್ಷಿಸಿದರು. ಶಾಲಾ ಆವರಣ, ಅನೇಕ ಗಿಡ ಮರಗಳಿಂದ ಕಂಗೊಳಿಸುತ್ತಿದ್ದು, ಕಟ್ಟಡಗಳು ಸಹ ಸುಣ್ಣಬಣ್ಣದಿಂದ ಕೂಡಿದ್ದನ್ನು ಗಮನಿಸಿದ ಅವರು ಎಸ್.ಡಿ.ಎಂ.ಸಿ. ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿದರು. ಕೆಲವೇ ದಿನಗಳ ಹಿಂದೆ ಈ ಶಾಲೆಯಲ್ಲಿ ಮಕ್ಕಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅನೇಕ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿ ಶಾಲೆಯನ್ನು ಅತಿ ಉನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸುವಲ್ಲಿ ತಾವೆಲ್ಲ ಕೈ ಜೋಡಿಸುವುದಾಗಿ ಕೆಲವು ಶಂಕುಸ್ಥಾಪನೆಗಳನ್ನು ಸಹ ಮಾಡಿದರೆಂದು ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಈ ಶಾಲೆಯ ಮುಖ್ಯೋಪಾದ್ಯಾಯರಾದ ಸೊಣ್ಣಪ್ಪ ತಿಳಿಸಿದರು.
ಇದೇ ಸಂದರ್ಭದಲ್ಲಿ ನಿರ್ದೇಶಕರು ಮಾತನಾಡುತ್ತಾ ಶಾಲೆಯಲ್ಲಿ 280 ಮಕ್ಕಳಿರುವುದರಿಂದ ಆಂಗ್ಲ ಮಾದ್ಯಮ ಶಾಲೆಯನ್ನು ಮುಂದಿನ ಶೈಕ್ಷಣಿಕ ವರ್ಷ 2018-19ನೇ ಸಾಲಿನಲ್ಲಿ ತೆರೆಯಲು ಸೂಚಿಸಿದರಲ್ಲದೆ, ಇನ್ನೂ ಅಗತ್ಯವಾದ ಮೂಲಭೂತ ಸೌಕರ್ಯಗಳಿಗೆ ಇಲಾಖೆಯಿಂದ ಅನುದಾನವನ್ನು ನೀಡಲು ಶಿಫಾರಸ್ಸು ಮಾಡುವುದಾಗಿ ತಿಳಿಸಿದರು. ಮತ್ತು ಗಡಿನಾಡ ಭಾಗಗಳಲ್ಲೂ ಸಹ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಪೈಪೋಟಿಯನ್ನು ನೀಡುವಲ್ಲಿ ಶಿಕ್ಷಕರು ಶ್ರಮಿಸುತ್ತಿರುವುದು ಶ್ಲಾಘನೀಯ ಹಾಗೂ ಪೋಷಕರೂ ಸಹ ಸರ್ಕಾರಿ ಶಾಲೆಗಳ ಮೇಲೆ ನಂಬಿಕೆ ಇಟ್ಟು ಮಕ್ಕಳನ್ನು ಕಳುಹಿಸುತ್ತಿರುವುದು ಸಹ ಉತ್ತಮ ಬೆಳವಣಿಗೆ ಎಂದರು. ಇಂತಹ ಶಾಲೆಗಳನ್ನು ಮಾದರಿಯಾಗಿಟ್ಟುಕೊಂಡು ಎಲ್ಲಾ ಸರ್ಕಾರಿ ಶಾಲೆಗಳು ಇನ್ನೂ ಪ್ರಭುದ್ಧ ಸ್ಥಿತಿಯನ್ನು ಹೊಂದಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸಹಾಯಕ ನಿರ್ದೇಶಕ ಮ್ಯಾಗಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಾಲಾಜಿ, ಶಿಕ್ಷಣ ಸಂಯೋಜಕ ಆರ್. ಶ್ರೀನಿವಾಸನ್, ಮುಖ್ಯ ಶಿಕ್ಷಕ ಸೊಣ್ಣಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಅಂಜಿಲಮ್ಮ ಗೋಪಾಲಪ್ಪ, ಕೃಷ್ಣಮೂರ್ತಿ, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.