ಕೋಲಾರ: ಇಂದು ಮಾನವನು ಪ್ರಕೃತಿಯ ಜೊತೆ ಹೊಂದಾಣಿಕೆಯನ್ನು ಮರೆತಿದ್ದಾನೆ. ಸ್ವಾರ್ಥಕ್ಕೋಸ್ಕರ ಪ್ರಕೃತಿಯನ್ನು ಹಾಳು ಮಾಡುತ್ತಾನೆ. ಹಿರಿಯರನ್ನು ನೋಡಿಕೊಂಡು ಮುಂದೆ ಮಕ್ಕಳು ಅದನ್ನೇ ಪಾಲಿಸುತ್ತಾರೆ. ಈ ಕಾರಣದಿಂದ ಮಕ್ಕಳಿಗೆ ಪರಿಸರ ಜಾಗೃತಿಯ ಕಾಳಜಿ ಮೂಡಿಸುವುದು ಅಗತ್ಯ ಎಂದು ಜಿಲ್ಲಾ ಸರ್ವಶಿಕ್ಷಣ ಅಭಿಯಾನ ಉಪ ಸಮನ್ವಯಾಧಿಕಾರಿ ಎಂ.ಮೈಲೇರಪ್ಪ ತಿಳಿಸಿದರು.
ತಾಲ್ಲೂಕಿನ ಹರಟಿಯಲ್ಲಿಂದು ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಪರಿಸರ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮನುಷ್ಯನ ಸ್ವಾರ್ಥ ಬದುಕು ಆತನ ಬದುಕನ್ನೇ ನಾಶಮಾಡುತ್ತದೆ. ಸಾವಿರಾರು ವರ್ಷಗಳಿಂದ ಪೂರ್ವಜರು ಕಾಪಾಡಿಕೊಂಡು ಬಂದ ಪರಿಸರವನ್ನು ನಾವು ಕಾಪಾಡಿಕೊಂಡು, ಭವಿಷ್ಯಕ್ಕೆ ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿ ಹಾಗೂ ಯುವ ಸಮುದಾಯದ ಮೇಲಿದೆ ಎಂದರು.
ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರಗಳನ್ನು ವಿತರಿಸಿದ ಜಿಲ್ಲಾ ಮಾದ್ಯಮಿಕ ಶಿಕ್ಷಣ ಅಭಿಯಾನ ಉಪ ಸಮನ್ವಯಾಧಿಕಾರಿ ಟಿ. ಸಿದ್ದೇಶ್ ಮಾತನಾಡಿ ಶಿಕ್ಷಣ ಇಲಾಖೆ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕರಣ ಗೊಳಿಸುವಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇಂತಹ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮರಾವತಿ ಮಾತನಾಡಿ ಪರಿಸರ ದಿನಾಚರಣೆಗೂ ಮುನ್ನ ಇಂದಿನಿಂದಲೇ ಪರಿಸರ ಜಾಗೃತಿ ಚರ್ಚೆ, ಭಾಷಣ ಸ್ಪರ್ಧೆಗಳನ್ನು ನಡೆಸಲಿದ್ದು, ವಿದ್ಯಾರ್ಥಿಗಳು ಭಾಗವಹಿಸಬೇಕು ಹಾಗೂ ಹಸಿರು ಕ್ರಾಂತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾದ್ಯಾಯ ಜಿ. ಶ್ರೀನಿವಾಸ್ ಮಾತನಾಡಿ ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಉತ್ತಮ ವ್ಯಕ್ತಿತ್ವಕ್ಕಾಗಿ ಶಿಕ್ಷಣ ಪಡೆಯಬೇಕು ಎಂದರು. ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಎಂ.ಕೃಷ್ಣಪ್ಪ, ಪಿ.ಎಂ.ಗೋವಿಂದಪ್ಪ, ಎಂ.ಆರ್.ಮೀನಾ, ಹೆಚ್.ಮುನಿಯಪ್ಪ, ಆರ್.ಮಂಜುಳಾ, ಕೆ.ಮಮತಾ ಉಪಸ್ಥಿತರಿದ್ದರು.