ಬರಜಿಲ್ಲೆಯ ಜೀವಾಳವಾದ ಕೆರೆಗಳ ಪುನಶ್ಚೇತನಕ್ಕೆ ಕೃತಜ್ಞತೆ-ವರ್ತೂರು ಪ್ರಕಾಶ್
ಕೋಲಾರ:- ಬರಪೀಡಿತ ಬಯಲು ಸೀಮೆಯ ಜೀವಾಳವಾದ ಕೆರೆಗಳ ಪುನಶ್ಚೇತನಕ್ಕೆ ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯವರು `ನಮ್ಮೂರು ನಮ್ಮಕೆರೆ'ಯೋಜನೆಯಡಿ ನೀಡುತ್ತಿರುವ ನೆರವು ಶ್ಲಾಘನೀಯ ಎಂದು ಶಾಸಕ ವರ್ತೂರು ಪ್ರಕಾಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ `ನಮ್ಮೂರು ನಮ್ಮ ಕೆರೆ' ಕಾರ್ಯಕ್ರಮದಡಿಯಲ್ಲಿ ಗ್ರಾಮದ ಹಿರೆಕೆರೆಯ ಪುನಃಶ್ಚೇತನ ಕಾಮಗಾರಿಯ ಗುದ್ದಲಿ ಪೂಜೆ ನೆರವೆರಿಸಿ ಅವರು ಮಾತನಾಡುತ್ತಿದ್ದರು.
ಮಳೆಯಾಶ್ರಿತ ಪ್ರದೇಶದಲ್ಲಿ ಬರದ ಬವಣೆ ತೀವ್ರವಾಗಿ ಕಾಡುತ್ತಿದ್ದು ಹನಿ ನೀರಿಗೂ ಜನ-ಜಾನುವಾರು, ತತ್ತರಿಸುತ್ತಿರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಕೆರೆಗಳ ಅಭಿವೃದ್ಧಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಕೈಗೆತ್ತಿಕೊಂಡಿರುವುದು ನಮ್ಮ ನಿಮ್ಮೆಲ್ಲರ ಸೌಭಾಗ್ಯ ಎಂದು ಬಣ್ಣಿಸಿದರು.
ನಮ್ಮ ಪೂರ್ವಜರು ಕಟ್ಟಿದ ಕೆರೆಗಳು ಹೂಳು ತುಂಬಿ ನೀರು ಸಂಗ್ರಹ ಸಾಮಥ್ರ್ಯ ಕಳೆದುಕೊಂಡಿವೆ, ಇಂತಹ ಕೆರೆಗಳ ಪುನಶ್ಚೇತನಕ್ಕೆ ಮುಂದಾಗಿರುವ ಧರ್ಮಸ್ಥಳ ಧರ್ಮಾಧಿಕಾರಿ ಶ್ರೀವೀರೇಂದ್ರಹೆಗಡೆಯವರ ಸಾಮಾಜಿಕ ಕಾಳಜಿಗೆ ವಂದನೆಗಳು ಎಂದರು.
ಜಿಲ್ಲೆಗೆ ಶಾಶ್ವತ ನೀರಿನ ಅಗತ್ಯವಿದೆ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕೆಸಿ ವ್ಯಾಲಿ ಹಾಗೂ ಎತ್ತಿನ ಹೊಳೆ ಯೋಜನೆಗಳನು ಆರಂಭಿಸಿದೆ ಎಂದ ಅವರು, ಆ ನೀರು ಬರುವ ವೇಳೆಗೆ ನಮ್ಮ ಕೆರೆಗಳು ಪುನಶ್ಚೇತನಗೊಂಡರೆ ಹೆಚ್ಚಿನ ನೀರು ಸಂಗ್ರಹವಾಗಿ ಅಂತರ್ಜಲ ಭರ್ತಿಗೆ ನೆರವಾಗಲಿದೆ ಎಂದು ತಿಳಿಸಿದರು.
ಇಂದಿನ ಕಾಲಘಟ್ಟದಲ್ಲಿ ಕೆರೆಗಳ ಪುನಶ್ಚೇತನ, ಜಲ ಮರುಪೂರ್ಣ, ಮಳೆ ನೀರು ಕೊಯ್ಲಿ, ಮಳೆ ನೀರು ಸಂರಕ್ಷಣೆ, ಮಿತವಾದ ನೀರಿನ ಬಳಕೆಯ ಮಹತ್ವವನ್ನು ಜನಸಾಮಾನ್ಯರು ಅರಿತುಕೊಳ್ಳುವಂತೆ ಮಾಡಿದೆ, ಜನತೆ ನೀರನ್ನು ವ್ಯರ್ಥ ಮಾಡುವುದನ್ನು ಬಿಡಬೇಕು, ಮುಂದಿನ ದಿನಗಳಲ್ಲಿ ನೀರು ಅತ್ಯಮೂಲ್ಯವಾಗಲಿದೆ ಎಂದರು.
ಸಾರ್ವಜನಿಕ ಸೇವೆಯನ್ನು ಮಾಡುವ ಮುಖೇನ ಗ್ರಾಮಗಳ ಅಭಿವೃದ್ಧಿಗೆ ಮತ್ತು ಸ್ವ-ಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಮಾಡುತ್ತಿರುವ ಕೆಲಸಗಳು ಮಾದರಿಯಾಗಿವೆ.
ತಮ್ಮ ಸ್ವಂತ ಜಿಲ್ಲೆಯಲ್ಲದಿದ್ದರೂ, ದೂರದ ಕೋಲಾರದ ಕೆರೆಗಳ ಪುನಃಶ್ಚೇತನಕ್ಕೆ ಹಣ ನೀಡುತ್ತಿರುವ ಧರ್ಮಾಧಿಕಾರಿ ಹೆಗಡೆಯವರ ಜನಪರ ಕಾಳಜಿಗೆ ಸಾಟಿಯಿಲ್ಲ ಎಂದ ಅವರು, ದೇಶದಲ್ಲಿ ಕೋಟ್ಯಾಂತರ ರೂ ಭಕ್ತರಿಂದ ಸಂಗ್ರಹವಾಗುವ ಎಷ್ಟೋ ದೇವಾಲಯ,ಮಠಗಳಿವೆ ಎಲ್ಲರಿಂದಲೂ ಇಂತಹ ಸಾಮಾಜಿಕ ಕಾರ್ಯ ಅಸಾಧ್ಯ ಎಂದರು.
ಶಾಲೆಗಳಿಗೆ ಶಿಕ್ಷಕರ ನೇಮಕ ಡೆಸ್ಕ್ ವಿತರಣೆ, ಕೊಠಡಿ ನಿರ್ಮಾಣಕ್ಕೆ ನೆರವು ದೇವಾಲಯಗಳಿಗೆ ಹಣ, ಮಾಸಾಶನ, ರೈತರಿಗೆ ಯಂತ್ರೋಪಕರಣಗಳ ಸಹಾಯ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನಡೆಸುತ್ತಿರುವುದಕ್ಕಾಗಿ ಅಭಿನಂದಿಸಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ನಿರ್ದೇಶಕ ವಿಜಯಕುಮಾರ್ ನಾಗನಾಳ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಆರಂಭಿಸಿರುವ ನಮ್ಮೂರು ನಮ್ಮಕೆರೆ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ 5 ಕೆರೆಗಳ ಪುನಃಶ್ಚೇತನಕ್ಕಾಗಿ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ರಾಮಸ್ವಾಮಿ ಕೆರೆ, ಮಾಲೂರು ತಾಲ್ಲೂಕಿನ ಟೇಕಲ್ ಈಶ್ವರನ ಕೆರೆ, ಮುಳಬಾಗಿಲು ತಾಲ್ಲೂಕಿನ ಬಂಡಾರ್ಲಹಳ್ಳಿಕೆರೆ, ಬಂಗಾರಪೇಟೆ ತಾಲ್ಲೂಕಿನ ಅಂಕತಟ್ಟಿಹಳ್ಳಿಯ ಅಂಕತಟ್ಟಿಕೆರೆ ಹಾಗೂ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನ ಹಿರೆಕೆರೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಈಕೆರೆಗಳಲ್ಲಿ ಹೂಳೆತ್ತುವುದು, ಕೆರೆಗಳ ಏರಿ ತಯಾರಿ, ರಸ್ತೆ ನಿರ್ಮಾಣ ಮತ್ತು ಗಿಡ ನಾಟಿ ಮುಂತಾದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿದಿನ 10 ಜೆ.ಸಿ.ಬಿ. ಯಂತ್ರಗಳು, 50 ಟ್ರಾಕ್ಟರ್ಗಳು ಕೆಲಸ ಮಾಡುತ್ತಿದ್ದು 8 ಸಾವಿರ ಲೋಡ್ ಮಣ್ಣನ್ನು 110 ರೈತರು ತಮ್ಮ ಕೃಷಿ ಭೂಮಿಗೆ ಪಡೆದುಕೊಳ್ಳುತ್ತಿದ್ದಾರೆ ಮೇ ತಿಂಗಳ ಅಂತಿಮಕ್ಕೆ 5 ಕೆರೆಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮಸ್ಥರ ನಿರ್ವಹಣೆಗೆ ಬಿಟ್ಟುಕೊಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೂಪಶ್ರೀ, ಮಂಜುನಾಥ್, ತಾಲ್ಲೂಕು ಪಂಚಾಯತ್ ಅಧ್ಯಕ್ಷ, ಸೂಲೂರು ಆಂಜಿನಪ್ಪ, ತಾಲ್ಲೂಕು ಯೋಜನಾಧಿಕಾರಿ ಬಾಬು.ಹೆಚ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಲ, ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಸಿ.ನಂಜುಂಡಪ್ಪ, ಕೆರೆ ಸಮಿತಿಯ ಅಧ್ಯಕ್ಷರಾದ ನಾಗಭೂಷಣ್, ಗ್ರಾ.ಪಂ ಸದಸ್ಯರಾದ ಶ್ರೀಧರ್, ಸುಜಾತನಂಜೇಗೌಡ, ಮುಖಂಡರಾದ ಚಿಕ್ಕವೆಂಕಟಪ್ಪ, ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕರಾದ ಗುರುರಾಜ್, ಕೃಷಿ ಮೇಲ್ವಿಚಾರಕರ ಮಹಂತೇಶ್ ಡಿ.ಟಿ, ಸೇವಾಪ್ರತಿನಿಧಿ ರಾಮಚಂದ್ರಪ್ಪ ಮತ್ತಿತರರು ಹಾಜರಿದ್ದರು.