ಕೋಲಾರ, ಅಕ್ಟೋಬರ್ 10 :ಕರ್ನಾಟಕ ರಾಜ್ಯದಲ್ಲಿ ಕೋಲಾರ ಜಿಲ್ಲೆಯು ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿರುವ ಒಂದು ಪ್ರಮುಖ ಜಿಲ್ಲೆಯಾಗಿದೆ. ಈ ಜಿಲ್ಲೆಯು ಟೊಮ್ಯಾಟೊ ಬೆಳೆಯನ್ನು ಬೆಳೆಯುವುದರಲ್ಲಿ ಅಗ್ರಗಣ್ಯ ಸ್ಥಾನದಲ್ಲಿದ್ದು, ಟೊಮ್ಯಾಟೊ ಬೆಳೆಯನ್ನು ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಇಲ್ಲಿನ ಟೊಮ್ಯಾಟೊ ದೇಶಾದ್ಯಂತ ಇತರೇ ಮಾರುಕಟ್ಟೆಗಳಿಗೆ ಸರಬರಾಜು ಆಗುತ್ತದೆ ಹಾಗೂ ಹೊರ ದೇಶಕ್ಕೂ ಸಹ ರಫ್ತಾಗುತ್ತದೆ.
ಟೊಮ್ಯಾಟೊ ಉತ್ಪಾದನೆ ಹೆಚ್ಚಾಗುವುದರ ಜೊತೆಗೆ ಮಾರುಕಟ್ಟೆಗಳಿಗೆ ಟೊಮ್ಯಾಟೊ ಆವಕ ಹೆಚ್ಚಾಗಿ ಬರುವುದರಿಂದ ಧಾರಣೆಗಳ ಏರು-ಪೇರಿನಿಂದಾಗಿ ರಸ್ತೆ ಬದಿಗಳಲ್ಲಿ ಟೊಮ್ಯಾಟೊ ಕಾಯಿಗಳನ್ನು ಸುರಿಯುವುದರಿಂದ ಪರಿಸರ ಮಾಲಿನ್ಯ, ರೋಗ ರುಜಿನಗಳು ಹಾಗೂ ಜೊತೆಗೆ ಉತ್ಪಾದಕತೆ ಕಡಿಮೆಯಾಗಿ ಆದಾಯ ಸಹ ಕಡಿಮೆಯಾಗುತ್ತಿದೆ. ಆದ್ದರಿಂದ ರೈತರು ಟೊಮ್ಯಾಟೊ ಒಂದೇ ಬೆಳೆ ಅಲ್ಲದೆ ಇತರೇ ಬೆಳೆಗಳನ್ನು ಸಹ ಬೆಳೆಯುವುದರಿಂದ ಗುಣಮಟ್ಟದ ಇಳುವರಿ ಪಡೆಯುವುದರ ಜೊತೆಗೆ ಉತ್ತಮ ಆದಾಯವನ್ನು ಸಹ ಪಡೆಯಬಹುದು. ಜಿಲ್ಲೆಯಲ್ಲಿ 31-03-2017 ರ ಅಂತ್ಯಕ್ಕೆ ತೋಟಗಾರಿಕೆ ಬೆಳೆಗಳ ಒಟ್ಟು ವಿಸ್ತೀರ್ಣ 110966.20 ಹೆಕ್ಟೇರ್ ಆಗಿದ್ದು, ಅದರಲ್ಲಿ 8510 ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯನ್ನು ಬೆಳೆಯುತ್ತಿದ್ದಾರೆ. ಹಿಂಗಾರು ಹಂಗಾಮಿನಲ್ಲಿ 3663 ಹೆಕ್ಟೇರ್ ಪ್ರದೇಶದಲ್ಲಿ 207756.28 ಮೆ.ಟನ್ನುಗಳಷ್ಟು ಉತ್ಪಾದನೆಯಾಗಿದೆ.
ಒಂದು ಋತು ಅಥವಾ ಒಂದೇ ವರ್ಷದಲ್ಲಿ ಮುಕ್ತಾಯವಾಗುವ ತರಕಾರಿ ಬೆಳೆಗಳಾದ ನವಿಲುಕೋಸು, ಕ್ಯಾಬೇಜ್, ಹೂಕೋಸು, ಕ್ಯಾಪ್ಸಿಕಂ, ಅಲಸಂದೆ, ಬೆಂಡೆ, ಮೂಲಂಗಿ, ಬೀಟ್ರೂಟ್, ಚೆಂಡು ಹೂ, ಸೇವಂತಿ (ಪ್ರದೇಶಕ್ಕೆ ಸೂಕ್ತವಾದ ಬೆಳೆಗಳನ್ನು) ದ್ವಿದಳ ಧಾನ್ಯ ಬೆಳೆಗಳಾದ ಅವರೆ, ಹುರುಳಿ, ಚವಳಿಕಾಯಿ ಇತ್ಯಾದಿಗಳನ್ನು ಬೆಳೆದರೆ ಅದು ಅಂತರ ಬೆಳೆ ಬೇಸಾಯ. ಅಂತರ ಬೆಳೆಗಳು ಮುಚ್ಚು ಬೆಳೆಗಳಾಗಿಯು ವರ್ತಿಸುವುದರಿಂದ ಅವುಗಳಿಗೆ ಕೊಡುವ ಗೊಬ್ಬರ, ನೀರಾವರಿ, ಇತರೆ ಬೇಸಾಯ ಕ್ರಮಗಳು ಮುಖ್ಯ ಬೆಳೆಗೆ ಅನುಕೂಲವಾಗುತ್ತದೆ.
ಅಂತರ ಬೆಳೆಗಳಿಂದ ಲಾಭಗಳು
ಅಂತರ ಮತ್ತು ಮಿಶ್ರ ಬೆಳೆ ಬೇಸಾಯದಿಂದ ಆ ಪ್ರದೇಶದಲ್ಲಿ ಸಾಕಷ್ಟು ಉದ್ಯೋಗ ಸೃಷ್ಠಿಯಾಗುತ್ತದೆ ಹಾಗೂ ಹಳ್ಳಿಗಳ ಜೀವನ ಮಟ್ಟ ಸುಧಾರಿಸಲು ನೆರವಾಗುತ್ತದೆ.
ಅಂತರ ಬೆಳೆಗಳಿಂದ ಬೇಗನೆ ಉತ್ಪತ್ತಿ ಬರುವುದರಿಂದ, ಇದು ರೈತರಿಗೆ ಮುಖ್ಯ ಬೆಳೆಯಲ್ಲಿ ಉತ್ಪತ್ತಿ ಬರುವವರೆಗೆ ಅನುಕೂಲವಾಗುತ್ತದೆ. ಇದರ ಲಾಭ, ರೈತರ ದಿನನಿತ್ಯ ಖರ್ಚು ಹಾಗೂ ಮುಖ್ಯ ಬೆಳೆ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ನೆರವಾಗುತ್ತದೆ.
ಮಿಶ್ರ ಹಾಗೂ ಅಂತರ ಬೆಳೆಗಳು ರೈತರಿಗೆ ಮುಖ್ಯ ಬೆಳೆಗಳ ಏರಿಳಿತಗಳಿಂದ ಸೂಕ್ತ ಭದ್ರತೆಯನ್ನು ಒದಗಿಸುತ್ತದೆ.
ಟೊಮ್ಯಾಟೊ ಬೇಸಾಯವನ್ನು ಹೆಚ್ಚಾಗಿ ಹೊರ ವಾತಾವರಣದಲ್ಲಿ ಮಾಡುತ್ತಿದ್ದು, ಹವಾಗುಣದ ವೈಪರೀತ್ಯಗಳು ಹಾಗೂ ಕೀಟ ಮತ್ತು ರೋಗಗಳ ಬಾಧೆಯಿಂದ ಅಲ್ಲದೆ, ಅನುಕೂಲಕರ ವಾತಾವರಣವಿರುವ ಸಮಯದಲ್ಲಿ ರೈತರು ಉತ್ತಮ ಇಳುವರಿ ಪಡೆಯುವುದರಿಂದ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಹಣ್ಣುಗಳ ಬೆಲೆಯ ಏರು-ಪೇರು ಆಗುವುದಕ್ಕೆ ಮುಖ್ಯ ಕಾರಣಗಳಾಗಿವೆ.
ಕಡಿಮೆ ಜಮೀನಿನಲ್ಲಿ ಭೂಮಿಯನ್ನು ಸಣ್ಣ ಸಣ್ಣ ಹಿಡುವಳಿಗಳಾಗಿ ಮಾಡಿಕೊಂಡು, ಬೇರೆ ಬೇರೆ ಬೆಳೆಗಳನ್ನು ಬೆಳೆಯುವುದರಿಂದ ಮುಖ್ಯ ಬೆಳೆಗಳಲ್ಲಾಗುವ ನಷ್ಟವನ್ನು ತಪ್ಪಿಸುವುದರ ಜೊತೆಗೆ ಉತ್ತಮ ಆದಾಯ, ರೋಗ ಮತ್ತು ಕೀಟಗಳ ನಿರ್ವಹಣೆ, ಮಣ ್ಣನ ಫಲವತ್ತತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಕೆಲವು ಸಂದರ್ಭದಲ್ಲಿ ಮುಖ್ಯ ಬೆಳೆಗಳಲ್ಲೂ ಕೀಟ, ರೋಗ ಬಾಧೆಗಳಿಂದ, ಹವಾಮಾನ ವೈಪರಿತ್ಯದಿಂದ ಇಳುವರಿ ಕಡಿಮೆಯಾದರೆ ಅಂತರ ಹಾಗೂ ಮಿಶ್ರ ಬೆಳೆಗಳು ರೈತರಿಗೆ ನೆರವಾಗುತ್ತದೆ.
ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಬೆಳಕುಗಳ ಸದ್ಬಳಕೆ.
ಹೆಚ್ಚಿನ ಆದಾಯ ಹಾಗೂ ಒಂದು ಬೆಳೆಯ ಉತ್ಪಾದನೆ ಕುಸಿದರೆ ಇತರೆ ಬೆಳೆಗಳು ಲಾಭ ದೊರಕಿಸುತ್ತದೆ.
ಮಣ್ಣು ಮತ್ತು ನೀರಿನ ಸಂರಕ್ಷಣೆ.
ಅಂತರ ಬೆಳೆಗಳು:
ತರಕಾರಿ ಬೆಳೆಗಳು : ಬದನೆ, ಬೆಂಡೆ, ಕುಂಬಳ, ಕ್ಯಾರೇಟ್, ಮೂಲಂಗಿ, ನವಿಲುಕೋಸು, ಗೆಡ್ಡೆಕೋಸು, ಅರಿಶಿನ, ಶುಂಠಿ, ಕರಿಬೇವು ಇತ್ಯಾದಿ.
ದ್ವಿದಳ ಧಾನ್ಯಗಳು : ಅಲಸಂದೆ, ಹೆಸರು, ತೊಗರಿ, ಸೋಯಾ, ಚವಳಿಕಾಯಿ, ಹುರುಳಿ, ಸೆಣಬು ಇತ್ಯಾದಿ.
ಮಿಶ್ರ ಬೆಳೆಗಳು : ನೇರಳೆ, ಸೀಬೆ, ನುಗ್ಗೆ, ಮಾವು, ನಿಂಬೆ ಇತ್ಯಾದಿ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಸಹಾಯಕ ತೋಟಗಾರಿಕೆ ಅಧಿಕಾರಿಗಳು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ತೋಟಗಾರಿಕೆ ಉಪ ನಿರ್ದೇಶಕರು ರವರುಗಳನ್ನು ಸಂಪರ್ಕಿಸಬಹುದು.
ಕೋಲಾರ: ನ 18ರಂದು ಮಾಜಿ ಸೈನಿಕರ ರ್ಯಾಲಿ
ಕೋಲಾರ, ಅಕ್ಟೋಬರ್ 10 :
ಎಂ.ಇ.ಜಿ. ಸೆಂಟರ್ ಬೆಂಗಳೂರು ಇವರು ಮಾಜಿ ಸೈನಿಕರಿಗೆ, ವಿಧವೆಯರಿಗೆ , ಯುದ್ದದಲ್ಲಿ ಮಡಿದ ಸೈನಿಕರು ಮತ್ತು ಅವರ ಅವಲಂಬಿತ ಮಾಜಿ ಸೈನಿಕರ ರ್ಯಾಲಿಯನ್ನು ದಿನಾಂಕ: 18-11-2017 ಮತ್ತು 19-11-2017 ರಂದು ಬೆಂಗಳೂರಿನ ಎಂ.ಇ.ಜಿ. ಸೆಂಟರ್ನಲ್ಲಿ ಆಯೋಜಿಸಲಾಗಿದೆ.
ತುಮಕೂರು, ಬೆಂಗಳೂರು ಗ್ರಾಮಾಂತರ , ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳ ಎಲ್ಲಾ ಮಾಜಿ ಸೈನಿಕರು ಹಾಗೂ ಅವಲಂಬಿತರು ಭಾಗವಹಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 080-25588718 ದೂರವಾಣ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ