ಕೋಲಾರ; ಸರ್ಕಾರವು ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 2017-18ನೇ ಸಾಲಿನ ಬಜೆಟ್ನಲ್ಲಿ 175 ಕೋಟಿಗಳನ್ನು ನೀಡಿದೆ. ಈ ಅನುದಾನದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಈ ಯೋಜನೆಗಳು ಕ್ರೈಸ್ತ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಐವನ್ ಡಿಸೋಜಾ ಕರ್ನಾಟಕ ವಿಧಾನ ಪರಿಷತ್ನ ಸಚೇತಕ ಮತ್ತು ಉಪಾಧ್ಯಕ್ಷರು ಕ್ರಿಶ್ಚಿಯನ್ ಡೆವಲಪ್ಮೆಂಟ್ ಕೌನ್ಸಿಲ್ ಇವರು ಅಭಿಪ್ರಾಯ ಪಟ್ಟರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಸರ್ಕಾರವು 2013-14, 2014-15, 2015-16, 2016-17, 2017 ಮತ್ತು 2017-18 ನೇ ಸಾಲುಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗೋಸ್ಕರ ಪ್ರಯೋಜಿಸಿರುವ ವಿವಿಧ ಯೋಜನೆಗಳು ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯಡಿ ಪ್ರಯೋಜಿಸಿರುವ ಎಲ್ಲಾ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರಲ್ಲಿ ಶೇ 16 ರಷ್ಟಿರುವ ಕ್ರಿಶ್ಚಿಯನ್ ಸಮುದಾಯಕ್ಕೆ ಸರ್ಕಾರವು ಹಲವಾರು ಯೋಜನೆಗಳನ್ನು ನೀಡಿದೆ. ಈ ಯೋಜನೆಗಳ ಸದುಪಯೋಗಕ್ಕೆ ಸಮುದಾಯದಿಂದ ಅರ್ಜಿಗಳು ಬರುತ್ತಿಲ್ಲ ಎಂಬ ದೂರು ಇದ್ದು, ಸಮುದಾಯದವರಿಗೆ ಮಾಹಿತಿಯ ಕೊರತೆ ಇರಬಹುದು. ಇದನ್ನು ಹೋಗಲಾಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಿ ಮಾಹಿತಿಯನ್ನು ನೀಡಲಾಗುತ್ತಿದೆ ಹಾಗೂ 1 ಲಕ್ಷ ಬ್ರೌಚರ್ಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ. ಈಗಾಗಲೇ 28 ಜಿಲ್ಲೆಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ ಎಂದರು.
ಕ್ರಿಶ್ಚಿಯನ್ ಸಮುದಾಯಕ್ಕೆ ಸ್ವ ಉದ್ಯೋಗ ಕೈಗೊಳ್ಳಲು 5 ಲಕ್ಷ ರೂಗಳನ್ನು ನೀಡಲಾಗುವುದು. ಇದರಲ್ಲಿ 2 ಲಕ್ಷ ಸಬ್ಸಿಡಿ ನೀಡಲಾಗುವುದು. ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುವವರಿಗೆ 20 ಲಕ್ಷ ರೂಗಳವರೆಗೆ ಸಹಾಯ ಧನ, ಕುರಿ ಕೋಳಿ ಸಾಕಾಣಿಕೆಗೆ 40 ಸಾವಿರ ಸಹಾಯ ಧನ, ಚರ್ಚ್ ರಿಪೇರಿಗೆ 50 ಲಕ್ಷ ರೂ, ಸಮುದಾಯ ಭವನ ನಿರ್ಮಾಣಕ್ಕೆ 2 ಕೋಟಿ ರೂ ಅನುದಾನ ಮುಂತಾದ ಸೌಲಭ್ಯಗಳು ಇದ್ದು ಸಮುದಾಯದವರು ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿಗಳಾದ ಜಿ.ಸತ್ಯವತಿಯವರು ಮಾತನಾಡಿ, ಸರ್ಕಾರವು ಸಮುದಾಯಕ್ಕೆ ಹಲವಾರು ಯೋಜನೆಗಳನ್ನು ನೀಡಿದೆ. ಮಾಹಿತಿಯ ಕೊರತೆಯಿಂದಾಗಿ ಎಲ್ಲರಿಗೂ ಸೌಲಭ್ಯಗಳು ತಲುಪಿಲ್ಲ. ಬ್ಯಾಂಕ್ಗಳು ಜನಸಾಮಾನ್ಯರ ಜೊತೆ ಹೇಗೆ ವರ್ತಿಸಬೇಕು ಹಾಗೂ ಬ್ಯಾಂಕ್ಗಳಲ್ಲಿ ಕನ್ನಡ ಬಳಕೆಯ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಂಡು ತರಬೇತಿ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಬಿ.ಕಾವೇರಿಯವರು ಮಾತನಾಡಿ, ಈ ಸಮಾರಂಭದಿಂದ ಕ್ರೈಸ್ತ ಸಮುದಾಯಕ್ಕೆ ಇರುವ ಸೌಲಭ್ಯಗಳ ಅರಿವು ಮೂಡಿದೆ. ವಿದ್ಯಾರ್ಥಿ ವೇತನ, ಶಾದಿ ಭ್ಯಾಗ್ಯ ಮುಂತಾದ ಸೌಲಭ್ಯಗಳು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಬೇಕು. ಲೀಡ್ ಬ್ಯಾಂಕ್ ಜನರ ಜೊತೆ ಸ್ಪಂದನೆ ಬಗ್ಗೆ ಬಂದ ದೂರಿಗೆ ಪ್ರತಿಕ್ರಿಯಿಸಿ ಮುಂದಿನ ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾಧಿಕಾರಿಗಳಾದ ಸೀನಾರವರು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಇಲಾಖೆಯಿಂದ ಸಮುದಾಯಕ್ಕೆ ಇರುವ ಹಲವಾರು ಯೋಜನೆಗಳ ಪ್ರಾತ್ಯಕ್ಷಿಕೆಯನ್ನು ನೀಡಿ ವಿವರಿಸಿದರು.
ಸಮಾರಂಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಚಿನ್ನಪ್ಪ, ಕ್ರಿಶ್ಚಿಯನ್ ಉಪಸಮಿತಿಯ ಸದಸ್ಯರಾದ ಬಾಸ್ಕರ್ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.