ಕೋಲಾರ:ಜಿಲ್ಲಾ ಅಭಿವೃದ್ಧಿ ಯೋಜನೆ ಕರುಡು ರಚನೆಗಾಗಿ ಯೋಜನಾ ಸಮಿತಿ ರಚನೆಗೆ ಸೂಚನೆ
ಕೋಲಾರ, ಜುಲೈ 31: ಜಿಲ್ಲಾ ಅಭಿವೃದ್ಧಿ ಯೋಜನೆ ಕರಡು ರಚನೆಗಾಗಿ ಯೋಜನಾ ಸಮಿತಿಯ ರಚನೆಗೆ ಚುನಾವಣೆ ನಡೆಸಲು ತಾತ್ಕಾಲಿಕ ಮತದಾರರ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ: 07-08-2017 ರ ಮಧ್ಯಾಹ್ನ ಮೂರು ಗಂಟೆಯೊಳಗೆ ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ.
ಗ್ರಾಮೀಣ ಮತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾ ಅಧಿಕಾರಿಗಳ ಮೂಲಕ, ನಗರ ಮತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಯಾ ನಗರಸಭೆ ಆಯುಕ್ತರ ಮೂಲಕ, ಪುರಸಭೆಗಳಿಗೆ ಸಂಬಂಧಿಸಿದಂತೆ ಮುಖ್ಯಾಧಿಕಾರಿಗಳ ಮೂಲಕ ಸಲ್ಲಿಸುವುದು ಹಾಗೂ ಸದರಿ ಅಧಿಕಾರಿಗಳು ದಿನಾಂಕ:08-08-2017ರ ಮಧ್ಯಾಹ್ನ 03 ಗಂಟೆಯೊಳಗೆ ಚುನಾಯಿತ ಸದಸ್ಯರಿಂದ ಬಂದಿರುವ ಆಕ್ಷೇಪಣೆಗಳನ್ನು ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾಪಂಚಾಯಿತಿ, ಕೋಲಾರ ಇವರಿಗೆ ಮುದ್ದಾಂ ಸಲ್ಲಿಸಬಹುದಾಗಿದೆ.
ಸರ್ಕಾರದ ನಿರ್ದೇಶನದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಐದು ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರುಗಳು ಹಾಗೂ ತಾಲ್ಲೂಕು ಯೋಜನೆ ಅಭಿವೃದ್ಧಿ ಸಮಿತಿಯ ಪದನಿಮಿತ್ತ ಕೋ ಚೇರ್ ಪರ್ಸನ್, ತಾಲ್ಲೂಕು ಯೋಜನೆ ಅಭಿವೃದ್ಧಿ ಸಮಿತಿಯ ಪದನಿಮಿತ್ತ ವೈಸ್ ಚೇರ್ ಪರ್ಸನ್, ಗ್ರಾಮ ಪಂಚಾಯಿತಿ ಮೂಲಕ ಚುನಾಯಿತರಾದ 5 ಮಂದಿ ಸದಸ್ಯರು, ಗ್ರಾಮೀಣ ಮತ ಕ್ಷೇತ್ರದಿಂದ 33 ಜನ ಸದಸ್ಯರು, ನಗರ ಮತ ಕ್ಷೇತ್ರದಿಂದ 15 ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಬೇಕಾಗಿರುತ್ತದೆ.
ಗ್ರಾಮೀಣ ಮತ ಕ್ಷೇತ್ರಗಳಾದ ಜಿಲ್ಲಾ ಪಂಚಾಯಿತಿ ಕೋಲಾರ, ತಾಲ್ಲೂಕು ಪಂಚಾಯಿತಿ ಕೋಲಾರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕುಗಳ ಚುನಾಯಿತಿ ಸದಸ್ಯರ ಪಟ್ಟಿ. ನಗರ ಮತಕ್ಷೇತ್ರಗಳಾದ ನಗರಸಭೆ ಕೋಲಾರ, ಕೆ.ಜಿ.ಎಫ್, ಮುಳಬಾಗಿಲು ಮತ್ತು ಪುರಸಭೆ ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ ಚುನಾಯಿತ ಸದಸ್ಯರ ಪಟ್ಟಿಗಳನ್ನು ಒಳಗೊಂಡಿರುತ್ತದೆ.
ಹೆಚ್ಚಿನ ಮಾಹಿತಿಯನ್ನು ಕೋಲಾರ ಜಿಲ್ಲಾ ಪಂಚಾಯಿತಿಯಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.
ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ
ಕೋಲಾರ, ಜುಲೈ 31 : 2017-18 ನೇ ಸಾಲಿನ ನವ ಕಾನೂನು ಪದವಿಧರರಿಗೆ ಸರ್ಕಾರದಿಂದ ಪ್ರೋತ್ಸಾಹ ಧನ ನೀಡುವ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ದಿನಾಂಕ: 26-08-2017 ರೊಳಗೆ ಜಿಲ್ಲಾ ಕೇಂದ್ರದಲ್ಲಿ ನೇರವಾಗಿ ಕೋಲಾರದ ಜಿಲ್ಲಾ ನ್ಯಾಯಾಲಯದ ಕಚೇರಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆಯಾ ತಾಲ್ಲೂಕುಗಳ ಹಿರಿಯ ನ್ಯಾಯಾಧೀಶರು/ಪ್ರಧಾನ ಸಿವಿಲ್ ನ್ಯಾಯಾಧೀಶರಿಗೆ ಭರ್ತಿ ಮಾಡಿದ ಅರ್ಜಿಗಳನ್ನು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ನ್ಯಾಯಾಧೀಶರಾದ ಎಸ್.ಮಹಾಲಕ್ಷ್ಮೀ ನೇರಳೆ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.