ಕೋಲಾರ ಜಿಲ್ಲಾ ನೌಕರರ ಸಂಘ ಹಾಗೂ ಶಿಕ್ಷಕ ಗೆಳೆಯರ ಬಳಗದಿಂದ ಸರ್ಕಾರಿ ಶಾಲಾ ಮಕ್ಕಳಿಗೆ 1.20 ಕೋಟಿಗೂ ಅಧಿಕ ಮೌಲ್ಯದನೋಟ್ಪುಸ್ತಕ,ಸಮವಸ್ತ್ರಗಳನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಎಂಎಲ್ಸಿ ಚೌಡರೆಡ್ಡಿ ವಿತರಿಸಿದರು.
ಕೋಲಾರ:- ತಾಲ್ಲೂಕಿಗೆ ಒಂದು ಶಾಲೆಯನ್ನು ದತ್ತು ಪಡೆದು ಮಾದರಿ ಶಾಲೆಗಳನ್ನಾಗಿಸಿ, ಶೈಕ್ಷಣಿಕ ಪರಿಸರಕ್ಕೆ ಪೂರಕವಾದ ನಿಮ್ಮ ಸಾಮಾಜಿಕ ಸೇವೆಯನ್ನು ಇಡೀ ಜಿಲ್ಲೆಗೆ ವಿಸ್ತರಿಸಿ ಎಂದು ದಾನಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಕರೆ ನೀಡಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರ ಸಂಘ ಹಾಗೂ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ವಿವಿಧ ಕಂಪನಿಗಳಿಂದ ಸುಮಾರು 1.20 ಕೋಟಿ ಮೌಲ್ಯದ ನೋಟ್ಪುಸ್ತಕ,ಸಮವಸ್ತ್ರ ಮತ್ತಿತರ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲಾ ಮಕ್ಕಳಿಗೆ ಖಾಸಗಿ ಪೈಪೋಟಿಗೆ ಅನುಗುಣವಾಗಿ ಕಲಿಕಾ ಸಾಮಗ್ರಿಯ ಅಗತ್ಯವಿದೆ, ಸರ್ಕಾರದ ಜತೆಗೆ ದಾನಿಗಳು ಕೈಜೋಡಿಸಬೇಕು ಎಂಬ ಇಚ್ಚೆ ನಮ್ಮದು ಎಂದ ಅವರು, ಉನ್ನತಮಟ್ಟದ ಶೈಕ್ಷಣಿಕ ವಾತಾವರಣ ಸೃಷ್ಟಿಗೆ ನೌಕರರಸಂಘ, ಶಿಕ್ಷಕ ಗೆಳೆಯರ ಬಳಗ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಸಹಕಾರಿ ಎಂದರು.
ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿ ಸಾಮಾಜಿಕ ಹೊಣೆ ಎಂದ ಅವರು, ಸರ್ಕಾರಿ ಶಾಲೆಗಳನ್ನು ಮಾದರಿಯಾಗಿಸಲು ವಿವಿಧ ಕಾರ್ಪೋರೇಟ್ ಕಂಪನಿಗಳ ಸಹಕಾರ ಪಡೆದುಕೊಳ್ಳಬಹುದಾಗಿದೆ ಎಂದರು.
ಛಲದಿಂದ ಸಾಗಿ
ಜಿಲ್ಲೆ ಮಾದರಿಯಾಗಲಿ
ವಿಧಾನಪರಿಷತ್ ಸದಸ್ಯ ಚೌಡರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ, ಜಿಲ್ಲೆಯಲ್ಲಿ ಸಾಧಕರಿಗೆ ಕೊರತೆಯಿಲ್ಲ, ಯುಪಿಎಸ್ಸಿಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದವರು ಈ ಜಿಲ್ಲೆಯವರು, ಇಲ್ಲಿನ ಮಕ್ಕಳು ಇದೇ ಹಾದಿಯಲ್ಲಿ ಛಲದಿಂದ ಸಾಗಿ ಸಾಧನೆ ಮಾಡಬೇಕು, ಜಿಲ್ಲೆಯ ಕೀರ್ತಿಯನ್ನು ಬೆಳಗಬೇಕೆಂದರು.
ಜಿಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ಜ್ಞಾನಕ್ಕೆ ಅಡ್ಡಿಯಾದ ಅಂಧಕಾರ ಕಳೆಯಲು ಶಿಕ್ಷಣವೇ ಅಸ್ತ್ರವಾಗಿದ್ದು, ಶಿಕ್ಷಣದ ಮಹತ್ವ ಅರಿತು ಎಲ್ಲಾ ಮಕ್ಕಳಿಗೂ ಕಲಿಕೆಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ದಾನಿಗಳು, ಸರ್ಕಾರಿ ನೌಕರರ ಸಂಘ,ಶಿಕ್ಷಕ ಗೆಳೆಯರ ಬಳಗ ಮುಂದಾಗಿರುವುದನ್ನು ಶ್ಲಾಘಿಸಿದರು.
1.14 ಲಕ್ಷ ಮಂದಿ
ಸರ್ಕಾರಿ ಶಾಲಾ ಮಕ್ಕಳು
ಜಿಪಂ ಸಿಇಒ ಬಿ.ಬಿ.ಕಾವೇರಿ, ಜಿಲ್ಲೆಯಲ್ಲಿ 2.3 ಲಕ್ಷ ಶಾಲಾ ಮಕ್ಕಳಿದ್ದು, ಇದರಲ್ಲಿ 1.14 ಲಕ್ಷ ಮಂದಿ ಸರ್ಕಾರಿ ಶಾಲಾ ಮಕ್ಕಳು, 14 ಸಾವಿರ ಅನುದಾನಿತ ಶಾಲಾ ಮಕ್ಕಳು ಮತ್ತು 92 ಸಾವಿರ ಮಂದಿ ಖಾಸಗಿ ಶಾಲಾ ಮಕ್ಕಳು ಎಂದರು.
ಖಾಸಗಿ ಶಾಲೆಗಳನ್ನು ನೋಡಿಕೊಳ್ಳಲು ಸಾಕಷ್ಟು ಮಂದಿ ಇದ್ದಾರೆ, ಸರ್ಕಾರಿ ಶಾಲೆಗಳನ್ನು ಗಮನಿಸಲು ನಾವು,ಸಮಾಜ ಮುಂದಾಗಬೇಕು, ಸರ್ಕಾರಿ ಶಾಲೆ ಯಾವುದರಲ್ಲೂ ಕಡಿಮೆಯಿಲ್ಲ, ಇಲ್ಲಿನ ಶಿಕ್ಷಕರು ಸಂಪನ್ಮೂಲಭರಿತರು, ಕೀಳಿರಿಮೆ ಅಗತ್ಯವಿಲ್ಲ ಎಂದರು.
ಕೀಳಿರಿಮೆ ಬಾರದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಸೌಲಭ್ಯ ನೀಡಬೇಕು, ಸ್ಯಾಮಸಂಗ್ ಇಂಡಿಯಾ ಲಿಮಿಟೆಡ್, ರಾಜಸ್ತಾನ್ ಕಾಸ್ಮೋಕ್ಲಬ್, ಎಪ್ಸನ್ ಇಂಡಿಯಾ ಕಂಪನಿಗಳು ಶಾಲೆಗಳಿಗೆ ಶೌಚಾಲಯ ಒದಗಿಸುವ ಕಾರ್ಯದಲ್ಲಿ ಸಹಕಾರ ನೀಡಬೇಕು ಎಂದರು.
ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಗುರುವಿಗೆ ಗುರುವೇ ಸಮಾನ,ಖಾಸಗಿ ಶಾಲೆಗಲು ಸರ್ಕಾರಿ ಶಾಲೆ ಮುಗಿಸಲು ಹುನ್ನಾರ ನಡೆಸಿವೆ, ಇದರ ವಿರುದ್ದ ಎಚ್ಚರಗೊಳ್ಳಬೇಕಾಗಿದೆ, ಸಮಾನ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆ ಉಳಿಸಬೇಕಾಗಿದೆ ಎಂದರು.
ರಾಜಸ್ತಾನ್ ಕಾಸ್ಮೋ ಪೌಂಡೇಷನ್ನ ಲಲಿತ್ ಜೈನ್, ಜಿಲ್ಲಾಧಿಕಾರಿಗಳ ಮನವಿಯಂತೆ ಜಿಲ್ಲೆಯಲ್ಲಿ ಶಾಲೆಗಳನ್ನು ದತ್ತು ಪಡೆಯುವ ಚಿಂತನೆ ನಡೆಸುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಗೆಳೆಯರ ಬಳಗದ ಖಜಾಂಚಿ ಚಂದ್ರಪ್ಪ, ಸ್ಯಾಮಸಂಗ್ ಕಂಪನಿ 80 ಲಕ್ಷ ಮೌಲ್ಯದ 1.78 ಲಕ್ಷ ನೋಟ್ಪುಸ್ತಕ, ಎಪ್ಸನ್ ಕಂಪನಿ 20 ಲಕ್ಷ ಮೌಲ್ಯದ 58 ಸಾವಿರ ನೋಟ್ಪುಸ್ತಕ, ರಾಜಸ್ತಾನ್ ಕಾಸ್ಮೋ ಪೌಂಡೇಷನ್ 2 ಸಾವಿರ ಮಕ್ಕಳಿಗೆ 20 ಲಕ್ಷ ಮೌಲ್ಯದ ಸಮವಸ್ತ್ರ,ಶೂ,ಸಾಕ್ಸ್,ಟೈ,ಬೆಲ್ಟ್, ಮಣಿಪಾಲ್ ಗ್ರೂಪ್ಸ್ ಜಿಲ್ಲೆಯ ಎರಡು ಶಾಲೆಗಳಿಗೆ ಉಪಗ್ರಹ ಆಧಾರಿತ ಶಾಲಾ ಸೌಲಭ್ಯ ಮತ್ತಿತರ ಕೊಡುಗೆ ನೀಡಿವೆ ಎಂದು ತಿಳಿಸಿ ಅವರಿಗೆ ಧನ್ಯವಾದ ಸಲ್ಲಿಸಿದರು.
ಡಿಡಿಪಿಐ ಸ್ವಾಮಿ, ಡಿಸಿ,ಸಿಇಒ ಅವರು ಜಿಲ್ಲೆಯ ಶಿಕ್ಷಕರ ಮೇಲೆ ಅಪಾರ ನಂಬಿಕೆ ಇಟ್ಟಿದ್ದು ಅದಕ್ಕೆ ದ್ರೋಹ ಬಗೆಯದೇ ಎಲ್ಲಾ ಇಲಾಖೆಗಳಿಗೂ ಗುರುವಾದ ಶಿಕ್ಷಣ ಇಲಾಖೆ ಮೇಲ್ಪಂಕ್ತಿಯಾಗಿರಲು ಶ್ರಮಿಸಿ ಎಂದು ಶಿಕ್ಷಕರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಡಾ.ಸುಬ್ರಮಣಿ,ಶಿಕ್ಷಕರ ಪ್ರತಿಭಾನ್ವಿತ ಪಿಯುಸಿ,ಎಸ್ಸೆಸ್ಸೆಲ್ಸಿ ಸಾಧಕ ಮಕ್ಕಳನ್ನು ಹಾಗೂ ವಿವಿಧ ಕಂಪನಿಗಳ ದಾನಿಗಳನ್ನು ಸನ್ನಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್ ವಹಿಸಿದ್ದು, ರಾಜ್ಯ ಸಂಘದ ಉಪಾಧ್ಯಕ್ಷ ಎಲ್.ಎ.ಮಂಜುನಾಥ್,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಡಾ.ಸುಬ್ರಮಣಿ ಮಾತನಾಡಿದರು.
ದಾನಿಗಳಾದ ಕೆಂಬೋಡಿ ನಾರಾಯಣಗೌಡ,ಎಎನ್ಆರ್ ದೇವರಾಜ್,ಎಂ.ಎನ್.ಆರ್ ಮಂಜುನಾಥರೆಡ್ಡಿ,ನಾಗೇಶ್ ಗೌಡ, ವೆಂಕಟೇಶ್,ಶಿಕ್ಷಕರಾದ ಅನುರಾಧಾ, ಎಸ್.ನಾರಾಯಣಸ್ವಾಮಿ, ಎಂ.ಅಮರನಾಥ್, ಆರ್.ಕೃಷ್ಣಮೂರ್ತಿ, ರವೀಂದ್ರಬಾಬುರನ್ನು ಪುರಸ್ಕರಿಸಲಾಯಿತು.
ನೌಕರರ ಸಂಘದ ಖಜಾಂಚಿ ಎಸ್.ಚೌಡಪ್ಪ ನಿರೂಪಿಸಿ,ಸ್ವಾಗತಿಸಿದ ವೇದಿಕೆಯಲ್ಲಿ ಡಿವೈಪಿಸಿ ಜಯರಾಜ್,ಬಿಇಒ ರಘುನಾಥರೆಡ್ಡಿ, ಬಿಆರ್ಸಿ ರಾಮಕೃಷ್ಣಪ್ಪ, ಉದಯಕುಮಾರ್,ನೌಕರರ ಸಂಘದ ಗೌರವಾಧ್ಯಕ್ಷ ರವಿಚಂದ್ರ,ಪ್ರಧಾನ ಕಾರ್ಯದರ್ಶಿ ಕೆ.ಬಿ.ಅಶೋಕ್, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ವಿವಿಧ ವೃಂದ ಸಂಘಗಳ ಕೆ.ವಿ.ಜಗನ್ನಾಥ್, ಶಂಕರಪ್ಪ, ಇ.ಶ್ರೀನಿವಾಸಗೌಡ, ಸಂಪತ್ಕುಮಾರ್,ಟಿ.ಕೆ.ನಟರಾಜ್,ವಿವಿಧ ಕಂಪನಿಗಳ ಮೋತಿಗೌಹಾತಿ,ವಿಕ್ರಮ್ ಬನ್ಸಾಲ್,ನರೇಶ್ ಗುಲ್ವಾ,ಮೋಹನ್, ವೀಣಾಸೆಹ್ವಾಲ್ ಮತ್ತಿತರರಿದ್ದರು.
ಕೋಲಾರ ಜಿಲ್ಲಾ ನೌಕರರ ಸಂಘ ಹಾಗೂ ಶಿಕ್ಷಕ ಗೆಳೆಯರ ಬಳಗದಿಂದ ಸರ್ಕಾರಿ ಶಾಲಾ ಮಕ್ಕಳಿಗೆ 1.20 ಕೋಟಿಗೂ ಅಧಿಕ ಮೌಲ್ಯದನೋಟ್ಪುಸ್ತಕ,ಸಮವಸ್ತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಿಕ್ಷಕರ ಪ್ರತಿಭಾನ್ವಿತ ಮಕ್ಕಳನ್ನು ಡಿಡಿಪಿಐ ಸ್ವಾಮಿ, ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್ ಮತ್ತಿತರರು ಸನ್ಮಾನಿಸಿದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.