ಪ್ರತಿ ಕಾಲೇಜಿನಿಂದ ಎರಡು ಗ್ರಾಮ ದತ್ತು ಸ್ಪೀಕರಿಸಿದರೆ ದೇಶ ಅಭಿವೃದ್ಧಿ-ಬಾಬು ಮೌನಿ
ಕೋಲಾರ:- ಪ್ರತಿ ಕಾಲೇಜು ಎರಡೆರೆಡು ಗ್ರಾಮಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸಲು ಮುಂದಾದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಅರಹಳ್ಳಿ ರೇಷ್ಮೆ ಬೆಳೆಗಾರರ ಸಹಕಾರ ಸಂಘ ನಿರ್ದೇಶಕ, ಸೋಲಾರ್ ಸಿಟಿ ಅಧ್ಯಕ್ಷ ಕೆ.ಜೆ.ಬಾಬು ಮೌನಿ ಹೇಳಿದರು.
ತಾಲೂಕು ಕಾಮಧೇನಹಳ್ಳಿಯಲ್ಲಿ ಮಹಿಳಾ ಸಮಾಜ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಒಂದು ವಾರ ಕಾಲ ಹಮ್ಮಿಕೊಂಡಿರುವ ವಿಶೇಷ ಸೇವಾ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜುಗಳು ಏರ್ಪಡಿಸುವ ಎನ್ಎಸ್ಎಸ್ ಶಿಬಿರಗಳು ಅರ್ಥಪೂರ್ಣವಾಗಿ ನಡೆದರೆ ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡಲು ಸಾಧ್ಯವಾಗುತ್ತದೆ, ಶಿಬಿರದ ವಿದ್ಯಾರ್ಥಿಗಳು ಸೇವಾ ಕಾರ್ಯಕ್ರಮ ಶ್ರಮದಾನ ಮಾಡುವುದರ ಜೊತೆಗೆ ಗ್ರಾಮದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಬೇಕೆಂದು ಸಲಹೆ ನೀಡಿದರು.
ಶಿಬಿರಾರ್ಥಿಗಳು ಕಾಮಧೇನಹಳ್ಳಿ ಗ್ರಾಮದಲ್ಲಿ ಸೇವಾ ಶಿಬಿರದ ಮೂಲಕ ಗ್ರಾಮದಲ್ಲಿರುವ ಮೂರು ಕಲ್ಯಾಣಿಗಳ ಹೂಳು ತೆಗೆಯುವುದು ಸೇರಿದಂತೆ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅವರಿಗೆ ಅಗತ್ಯವಿರುವ ಜೆಸಿಬಿ ಹಾಗೂ ಟ್ರಾಕ್ಟರ್ಗಳ ನೆರವನ್ನು ತಾವು ಒದಗಿಸುವುದಾಗಿ ಘೋಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಹಿಳಾ ಸಮಾಜ ಅಧ್ಯಕ್ಷೆ ಉಷಾ ಗಂಗಾಧರ್ ಮಾತನಾಡಿ, ಕಾಮಧೆÉೀನಹಳ್ಳಿ ಮಾದರಿ ಗ್ರಾಮವಾಗಿದ್ದು, ಇಂತ ಹಳ್ಳಿಯಲ್ಲಿ ಎನ್ಎಸ್ಎಸ್ ಸೇವಾ ಶಿಬಿರ ನಡೆಯುತ್ತಿರುವುದು ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಕಾಳಜಿಯನ್ನು ಪರಿಚಯಿಸಲು ಮತ್ತು ಹೆಚ್ಚಿಸಲು ಸಾಧ್ಯವಾಗುತ್ತದೆಯೆಂದರು.
ಗ್ರಾಪಂ ಮಾಜಿ ಸದಸ್ಯ ರವಿಚಂದ್ರಗೌಡ ಮಾತನಾಡಿ, ಎನ್ಎಸ್ಎಸ್ ಶಿಬಿರದ ಮೂಲಕ ಗ್ರಾಮದಲ್ಲಿ ಯಾವುದೇ ಶ್ರಮದಾನ ನಡೆಸಿದರೂ ಅದಕ್ಕೆ ಅಗತ್ಯ ನೆರವು ಸಹಕಾರ ನೀಡುವುದಾಗಿ ಹೇಳಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕಾಮಧೇನಹಳ್ಳಿಗೆ ವೈಶಿಷ್ಟ್ಯಪೂರ್ಣ ಇತಿಹಾಸವಿದ್ದು, ಅತಿ ಹೆಚ್ಚು ವಿದ್ಯಾವಂತರು, ಉದ್ಯೋಗಸ್ಥರು ಇರುವ ಗ್ರಾಮವಾಗಿದೆ. ಆದರೆ, ಕೆಲವು ದಶಕಗಳ ಹಿಂದೆ ಹಸಿರಿನಿಂದ ನಳನಳಿಸುತ್ತಿದ್ದ ಗದ್ದೆ ಹೊಲ ತೋಟಗಳು, ಕೆರೆ ಕುಂಟೆ ತುಂಬಿ ತುಳುಕುತ್ತಿದ್ದ ನೀರು ಈಗ ಬತ್ತಿ ಹೋಗಿದೆ. ಮುಂದಿನ ದಿನಗಳಲ್ಲಿ ಗ್ರಾಮಗಳ ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲದಂತಾಗಿದೆ. ಈ ಕುರಿತು ಯುವ ಪೀಳಿಗೆ ಕೋಲಾರ ಜಿಲ್ಲೆಯ ಭವಿಷ್ಯವನ್ನು ರೂಪಿಸುವತ್ತ ಚಿಂತನೆ ನಡೆಸಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಎಂ.ನವೀನ ಮಾತನಾಡಿ, ತಮ್ಮ ಕಾಲೇಜಿನಿಂದ ಪ್ರತಿ ವರ್ಷವೂ ಎನ್ಎಸ್ಎಸ್ ಶಿಬಿರಗಳನ್ನು ಒಂದೊಂದು ಗ್ರಾಮದಲ್ಲಿ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲು ಆದ್ಯತೆ ನೀಡುತ್ತೇವೆ, ಕಾಮಧೇನಹಳ್ಳಿಯ ಮುಖಂಡರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರೆಂದರು.
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಆರ್.ರಜನೀಕಾಂತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮುದಾಯ ಸೇವಾ ಮನೋಭಾವ ಮೂಡಿಸುವ ಸಲುವಾಗಿ ಕೇವಲ 40 ಸಾವಿರ ವಿದ್ಯಾರ್ಥಿಗಳಿಂದ ಆರಂಭವಾದ ಎನ್ಎಸ್ಎಸ್ ಈಗ 32 ಲಕ್ಷ ಮಂದಿ ಭಾಗವಹಿಸುತ್ತಿದ್ದಾರೆ, ಸಮಾಜದ ಅಭಿವೃದ್ಧಿಗೆ ಶ್ರಮದಾನದ ಮಹತ್ವ ಕುರಿತು ಅರಿವು ಮೂಡಿಸಲಾಗುವುದು ಎಂದರು.
ಶಿಬಿರಾಧಿಕಾರಿ ವಿ.ವೆಂಕಟಾಚಲಪತಿ ಶಿಬಿರದ ಮೇಲ್ವಿಚಾರಣೆ ಹೊತ್ತುಕೊಂಡಿದ್ದರು.
ವೇದಿಕೆಯಲ್ಲಿ ಮಾರ್ಜೇನಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ಯಾಮಲ ಧರ್ಮೇಗೌಡ, ಸದಸ್ಯ ವಿನೋದ್ಕುಮಾರ್, ಮಹಿಳಾ ಸಮಾಜ ಸದಸ್ಯರಾದ ತಾರಾ ರವಿಶಂಕರ್, ಪದ್ಮ ಅನಿಲ್, ರಾಜೇಶ್ವರಿ ರಾಜಶೇಖರ್, ರತ್ನಮ್ಮ ನಂಜುಂಡಪ್ಪ ಹಾಜರಿದ್ದರು.
ಸುಪ್ರಿಯ ನಿರೂಪಿಸಿ, ರಶ್ಮಿ ಪ್ರಾರ್ಥಿಸಿ, ಟಿ.ಎಸ್.ಕಾವ್ಯ ಸ್ವಾಗತಿಸಿ, ಕೃತಿಕಾ ವಂದಿಸಿದರು.