ಕೋಲಾರ ತಾಲ್ಲೂಕಿನ ಮಂಗಸಂದ್ರ ಕೆರೆಯಲ್ಲಿ ಮಹಿಳೆಯರಿಂದ ನಡೆಯುತ್ತಿರುವ ಕೆರೆ ಪುನಶ್ಚೇತನ ಕಾಮಗಾರಿಯನ್ನು ಜಿಲ್ಲಾಧಿಕಾರಿ ತ್ರಿಲೋಕ್ ಚಂದ್ರ, ಜಿಪಂ ಸಿಇಒ ಕಾವೇರಿ ವೀಕ್ಷಿಸಿದರು.
ಕೋಲಾರ:- ತಾಲ್ಲೂಕಿನ ಮಂಗಸಂದ್ರದ ಕೆರೆ ಅಭಿವೃದ್ದಿ ಕೆರೆ ಪುನಶ್ಚೇತನ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ.ತ್ರಿಲೋಕ್ ಚಂದ್ರ ನೇತೃತ್ವದ ನಿಯೋಗ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಹೂಳೆತ್ತುವ ಕಾರ್ಯದಲ್ಲಿ ತೊಡಗಿರುವ ಮಹಿಳೆಯರೊಂದಿಗೆ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಕೆಂಚೇಗೌಡ, ಜನವಾದಿ ಸಂಘಟನೆಯ ಗೀತಾ ಮತ್ತಿತರರ ನೇತೃತ್ವದಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಮಂಗಸಂದ್ರ ಕೆರೆ ಹೂಳೆತ್ತುವ ಮತ್ತು ಪುನಶ್ಚೇತನ ಕಾಮಗಾರಿ ಭರದಿಂದ ಸಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಯವರು, ನರೇಗಾದಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ನೀಡಬೇಕಾದ ಕೂಲಿಹಣವನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದಿರಿ, ಸಮಯಕ್ಕೆ ಸರಿಯಾಗಿ ತಲುಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾ.ಪಂ ಅಧ್ಯಕ್ಷೆ ಸವಿತಾ ಅವರು ಡಿಸಿಯವರಿಗೆ ಮನವಿ ಮಾಡಿ, ಕೆರೆಯ ಆಸುಪಾಸಿನಲ್ಲಿರುವ ನೀಲಗಿರಿ ಮರಗಳನ್ನು ನಾಶಪಡಿಸಿ, ಅಲ್ಲಿ ಇತರೆ ಪರಿಸರ ಸ್ನೇಹಿ ಮರಗಳನ್ನು ನೆಡಲು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ 150 ದಿನಗಳು ಉದ್ಯೋಗ ನೀಡುವ ಅವಕಾಶವಿದ್ದು, ಕೂಲಿಹಣ ಬರುವುದಿಲ್ಲ ಎಂಬ ವದಂತಿಗಳಿಗೆ ಕಿವಿಗೊಡದೇ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.
ಜಿಪಂ ಸಿಇಒ ಬಿ.ಬಿ.ಕಾವೇರಿ, ಒಂದು ದಿನಕ್ಕೆ 236ರೂ. ಕೂಲಿಯನ್ನು ನಿಗಧಿಮಾಡಲಾಗಿದೆ, ಯೋಜನೆಯಲ್ಲಿ ಕೆಲಸಕ್ಕೆ ಬರುವವರು ಉದ್ಯೋಗ ಚೀಟಿಗಳನ್ನು ಪಡೆದುಕೊಂಡು ಹಾಜರಾಗಬೇಕಿದೆ. ಈಗಾಗಲೇ ಬಹುತೇಕ ಮಂದಿಗೆ ಜಾಬ್ಕಾರ್ಡ್ಗಳನ್ನು ವಿತರಿಸಲಾಗಿದ್ದು, ಉಳಿದವರಿಗೂ ಶೀಘ್ರ ಜಾಬ್ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ನುಡಿದರು.
ಕೂಲಿ ಕಾರ್ಮಿಕರಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ತಮ್ಮ ಪುಟ್ಟ ಮಕ್ಕಳಿಗೆ ನೆರಳು ಹಾಗೂ ನೀರಿನ ವ್ಯವಸ್ಥೆಯನ್ನು ಸಹ ಮಾಡಿಕೊಡಲಾಗುವುದಾಗಿ ತಿಳಿಸಿದರು.
ಅಂತರ್ಜಲ ರಕ್ಷಣೆಗಾಗಿ ಕೆರೆಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದರಿಂದ ಗ್ರಾಮಕ್ಕೆ ಅನುಕೂಲವಾಗಲಿದೆ. ಹೀಗಾಗಿ ಯೋಜನೆಯಲ್ಲಿ ಕೆಲಸ ಮಾಡುವುದರಿಂದ ಹಣವನ್ನು ಸಂಪಾದನೆ ಮಾಡುವುದರ ಜತೆಗೆ ಕೆರೆ, ಕುಂಟೆಗಳ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕೆರೆಗಳನ್ನು ಉಳಿಸಿ ಆಂದೋಲನವನ್ನು ಮೊದಲ ಬಾರಿಗೆ ಹಮ್ಮಿಕೊಳ್ಳಲಾಗುತ್ತಿದ್ದು, ಮಾದರಿಯಾಗಿ ಕೆಲಸ ನಿರ್ವಹಿಸಿದಲ್ಲಿ ಸುತ್ತಮುತ್ತಲ 7-8 ಗ್ರಾಮಗಳಿಗೆ ನೀರಿನ ಸೌಕರ್ಯ ಒದಗಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಅಧಿಕಾರಿಗಳ ತಂಡ, ಗ್ರಾ.ಪಂ ಪಿಡಿಒ ಕಮಲ, ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಮತ್ತು ಗ್ರಾಮಸ್ಥರು ಹಾಜರಿದ್ದರು.