ಕೋಲಾರ ಆ. 9 : ಕೆ.ಎಸ್.ಆರ್.ಟಿ.ಸಿ. ಚಾಲಕನ ನಿರ್ಲಕ್ಷ್ಯದಿಂದ ಬಸ್ ರೇಡಿಯೇಟರ್ ಸಿಡಿದು 7 ಜನ ಶಾಲಾಮಕ್ಕಳ ಕಾಲುಗಳು ಸುಟ್ಟುಹೋಗಿದ್ದು, ಅದರಲ್ಲಿ 3 ಮಕ್ಕಳ ಪರಿಸ್ಥಿತಿಯು ಚಿಂತಾಜನಕವಾಗಿದ್ದು, ಕೂಡಲೇ ಕೆ.ಎಸ್.ಆರ್.ಟಿ.ಸಿ. ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಯನ್ನು ನೀಡಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳಾದ ವಿದ್ಯಾಕುಮಾರಿರವರಿಗೆ ರೈತ ನಾಯಕ ಪ್ರೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಮನವಿ ಮಾಡಿತು.
ಕೋಲಾರ ತಾಲ್ಲೂಕು ತೇರಹಳ್ಳಿ, ಹೊಸಹಳ್ಳಿಯ, ಪಾಪರಾಜನಹಳ್ಳಿ ಶಾಲಾ ಮಕ್ಕಳು ಸರ್ಕಾರಿ ಅನುದಾನಿತ ಸೆಂಟಾನ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಮೂರು ದಿನಗಳ ಹಿಂದೆ ಸಂಜೆ 5 ಗಂಟೆಗೆ ಶಾಲೆಯಿಂದ ಮನೆಗೆ ತೆರಳಲು ಕೆ.ಎಸ್.ಆರ್.ಟಿ.ಸಿ. ಬಸ್ನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಬಸ್ನ ಅತಿಯಾದ ಒತ್ತಡದಿಂದ ರೇಡಿಯೇಟರ್ ಸಿಡಿದು ಪಕ್ಕದಲ್ಲೇ ಕುಳಿತಿದ್ದ 7 ಜನ ಮಕ್ಕಳ ಕಾಲುಗಳಿಗೆ ಚಿಮ್ಮಿದ್ದು, ಅವರನ್ನು ನಗರದ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ದಾಖಲಿಸಿದ್ದು, 4 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 3 ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ. 13ವರ್ಷದ ಭರತ್ ಕುಮಾರ್, 11ವರ್ಷದ ಮಧುಕುಮಾರ್, 14ವರ್ಷದ ಭರತ್ ಎಂಬ ವಿದ್ಯಾರ್ಥಿಗಳಿಗೆ ಉಕ್ಕಿದ ಬಿಸಿ ನೀರಿನಿಂದ ಕಾಲುಗಳ ಮಾಂಸಕಂಡಗಳು ಸಂಪೂರ್ಣ ಸುಟ್ಟು ಹೋಗಿದ್ದು, ಪ್ಲಾಸ್ಟಿಕ್ ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿರುತ್ತಾರೆ.
ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಇನ್ನಿಬ್ಬರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಬಡ ಪೋಷಕರಿಂದ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಘಟನೆ ನಡೆದು 4 ದಿನವಾದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲಿ, ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಾಗಲಿ ಮಕ್ಕಳ ಪರಿಸ್ಥಿತಿಯನ್ನು ನೋಡಲು ಬಾರದೆ ಇರುವುದು ದುರಂತವೇ ಸರಿ. ಈಗಲಾದರೂ ಶಿಕ್ಷಣ ಇಲಾಖೆ ಮತ್ತು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಆ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಮುಂದಾಗಬೇಕೆಂದು ರೈತ ನಾಯಕ ಪ್ರೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಆಗ್ರಹಿಸುತ್ತದೆ.
ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಮಕ್ಕಳ ಪೋಷಕರಾದ ತೇರಹಳ್ಳಿ ಚಂದ್ರಣ್ಣ, ಬೈರಪ್ಪ, ರಾಜಪ್ಪ, ನಗರ ಸಂಚಾಲಕ ಜಬೀವುಲ್ಲಾ, ಅಮಿತ್, ನವಾಜ್, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಕದಿರೇನಹಳ್ಳಿ ಶ್ರೀನಿವಾಸ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಕೊಲದೇವಿ ಗೋಪಾಲಕೃಷ್ಣ, ನೀಲಕಂಠಪುರ ಮುನೇಗೌಡ, ಬೈರೇಗೌಡ, ವೆಂಕಟರೆಡ್ಡಿ ಮುಂತಾದವರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.