ಕೋಲಾರ ತಾಲ್ಲೂಕಿನ ಕಸಬಾ ಹೋಬಳಿ ಕ್ರೀಡಾಕೂಟ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ದಿನಾಂಕ: 08-08-2017 ಮತ್ತು 09-08-2017ರಂದು ನಡೆಯುವಂತೆ ಕಸಬಾ ಹೋಬಳಿ ಮಟ್ಟದ ಮುಖ್ಯ ಶಿಕ್ಷಕರು, ಸಿ.ಆರ್.ಪಿಗಳು ಮತ್ತು ದೈಹಿಕ ಶಿಕ್ಷಕರ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
2017-18ನೇ ಸಾಲಿಗೆ ಕಸಬಾ ಹೋಬಳಿ ವೃತ್ತ ಕಾರ್ಯದರ್ಶಿಗಳಾಗಿ ಮಾರ್ಜೇನಹಳ್ಳಿ ಶಾಲೆಯ ಬಿ.ಎಂ.ನಾರಾಯಣಸ್ವಾಮಿಯವರನ್ನು ಮಾಜಿ ಕಾರ್ಯದರ್ಶಿಗಳಾದ ಯಲ್ಲಪ್ಪನವರು ಸೂಚಿಸಿದಂತೆ ಆಯ್ಕೆ ಮಾಡಲಾಯಿತು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತಿಮ್ಮಸಂದ್ರ ನಾಗರಾಜ್ ಮಾತನಾಡುತ್ತಾ ಮಕ್ಕಳ ಆರೋಗ್ಯದ ಜೊತೆಗೆ ಮಾನಸಿಕವಾಗಿ ಸದೃಢರಾಗಲು ಕ್ರೀಡಾಕೂಟಗಳು ಬಹಳ ಮುಖ್ಯ ಎಲ್ಲರೂ ಸಹ ಭಾಗವಹಿಸುವಂತೆ ಕ್ರಮವಹಿಸಲು ಮುಖ್ಯಶಿಕ್ಷಕರಿಗೆ ಹೇಳಿದರು.
ಮಾರ್ಜೇನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಮುರಳಿರವರು ಮಾತನಾಡುತ್ತಾ ಹಿಂದಿನ ವರ್ಷದ ಕ್ರೀಡಾಕೂಟದ ಖರ್ಚು ವೆಚ್ಚಗಳನ್ನು ಪರಿಶೀಲಿಸಿ ಇಂದಿನ ವರ್ಷದ ಕ್ರೀಡಾಕೂಟಕ್ಕೆ ಆರ್ಥಿಕವಾಗಿ ಹಣ ಸಂಗ್ರಹಿಸಲು ಹಾಗೂ ಕ್ರೀಡಾಕೂಟ ನಡೆಸಿಕೊಂಡು ಹೋಗಲು ಸೂಕ್ತ ಸಲಹೆ ಮಾರ್ಗದರ್ಶನ ನೀಡಿದರು.
ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡುತ್ತಾ ಕೇವಲ 6ಮತ್ತು 7ನೇ ತರಗತಿ ಮಕ್ಕಳು ಮಾತ್ರ ಭಾಗವಹಿಸಬೇಕು. ಭಾಗವಹಿಸಲು ಸಂಬಂಧಪಟ್ಟ ಮುಖ್ಯ ಶಿಕ್ಷಕ ವಿದ್ಯಾರ್ಥಿಯ ಭಾವಚಿತ್ರದ ಮೇಲೆ ಸಹಿ ಮಾಡಿ ದೃಢೀಕರಿಸಿ ಕ್ರೀಡಾಕೂಟಕ್ಕೆ ಕಳುಹಿಸಿಕೊಡುವಂತೆ ಸಂಪೂರ್ಣ ವಿವರ ನೀಡಿದರು.
ಸಮಾರಂಭದಲ್ಲಿ ಕ್ರೀಡಾಕಾರ್ಯದರ್ಶಿ ವೆಂಕಟೇಶ್, ಸಿ.ಆರ್.ಪಿ.ಗಳಾದ ಪರಮೇಶ್, ಸುಜಾತ, ಮುನಿಬೈರಪ್ಪ, ಮುಖ್ಯ ಶಿಕ್ಷಕರಾದ ಕಾಮಧೇನಹಳ್ಳಿ ನಾರಾಯಣಸ್ವಾಮಿ, ಅರಹಳ್ಳಿ ನಾರಾಯಣಸ್ವಾಮಿ, ಯಲವಾರ ಭಾಗ್ಯಮ್ಮ, ಪಾರೇಹೊಸಹಳ್ಳಿ ರುಕ್ಮಿಣ ಯಮ್ಮ, ಬೆಗ್ಲಿಹೊಸಹಳ್ಳಿ ರಾಮಚಂದ್ರಪ್ಪ, ಕೋಡಿರಾಮಸಂದ್ರ ಯಲ್ಲಪ್ಪ, ದೈಹಿಕ ಶಿಕ್ಷಕರಾದ ಮಾಲಾ, ಸೋಮೇಶ್ವರ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಗೀತಾ ನಿರೂಪಿಸಿ, ಭಾರತಿ ಸ್ವಾಗತಿಸಿ, ಎನ್.ಮುನಿರತ್ನಮ್ಮ ವಂದಿಸಿದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ