ಕೋಲಾರ,ಜು.25: ತೆರಿಗೆ ಪದ್ದತಿ ಸನಾತನವಾದದ್ದು. ರಾಜ ಮಹಾರಾಜರ ಕಾಲದಲ್ಲೂ ತೆರಿಗೆ ಪದ್ಧತಿ ಇತ್ತು. ಪ್ರಕೃತಿಯಲ್ಲೂ ತೆರಿಗೆ ಪದ್ಧತಿ ಇದೆ. ದೇಶ ಅಭಿವೃದ್ಧಿ ಪಥದತ್ತ ಸಾಗಲು ಹಣಕಾಸಿನ ಅಗತ್ಯತೆ ಇದ್ದು, ಅದಕ್ಕಾಗಿ ತೆರಿಗೆ ಸಂಗ್ರಹ ಅನಿವಾರ್ಯ ಎಂದು ಆದಾಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ಸೀತಾರಾಮ್ ಅಭಿಪ್ರಾಯಪಟ್ಟರು.
ಅವರು ಸೋಮವಾರದಂದು ನಗರದ ಆದಾಯ ತೆರಿಗೆ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ 157ನೇ ಆದಾಯ ತೆರಿಗೆ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಾ ಪ್ರಕೃತಿಯಲ್ಲಿ ಸೂರ್ಯ, ಭೂಮಿಯಲ್ಲಿನ ನೀರಿನ ಆಂಶವನ್ನು ಹೀರಿಕೊಂಡು ನಂತರ ಮಳೆ ನೀಡುತ್ತಾನೆ. ಅದೇ ರೀತಿ ಸರ್ಕಾರಗಳು ಜನರಿಂದ ತೆರಿಗೆ ಸಂಗ್ರಹಿಸಿ ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತಾರೆ. ಆದಾಯ ತೆರಿಗೆ ಪದ್ಧತಿ ನಮ್ಮ ದೇಶದಲ್ಲಿ 24-7-1860 ರಲ್ಲಿ ಜಾರಿಗೆ ಬಂದಿತೆಂದು ವಿವರ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎನ್.ದೇವರಾಜ್ ಮಾತನಾಡಿ ಪ್ರತಿಯೊಬ್ಬರು ಆದಾಯ ತೆರಿಗೆ ಪಾವತಿಸಿದ್ದಲ್ಲಿ ದೇಶದ ಅಭಿವೃದ್ಧಿಗೆ ಅನಕೂಲವಾಗುತ್ತದೆ. ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು. ಆದಾಯ ತೆರಿಗೆ ಪೂರ್ಣ ಇತಿಹಾಸವನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು.
ಮೊತ್ತೊಬ್ಬ ಮುಖ್ಯ ಅತಿಥಿ ಜಿಲ್ಲಾ ವಾಣಿಜ್ಯ ಮತ್ತು ಕ್ಯಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಸುರೇಶ್ ಮಾತನಾಡಿ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾದಷ್ಟು ತೆರಿಗೆ ದರಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಅದಕ್ಕಾಗಿ ತೆರಿಗೆ ತಪ್ಪಿಸದೇ ಪ್ರತಿಯೊಬ್ಬರು ತೆರಿಗೆ ಪಾವತಿಸಿಬೇಕು ಎಂದರು. ಆದಾಯ ತೆರಿಗೆ ಇಲಾಖೆ ಜನಸಾಮಾನ್ಯರನ್ನು ವಿಶ್ವಾಸಕ್ಕೆ ಪಡೆಯಲು ಆಗಾಗೆ ಇಂತಹ ಕಾರ್ಯಕ್ರಮಗಳನ್ನು ನಡೆಸಬೇಕೆಂದರು.
ಸ್ಥಳೀಯ ಆಧಾಯ ತೆರಿಗೆ ಇಲಾಖೆಯ ಅಧಿಕಾರಿ ಶೆಲ್ವಿನಾಯಗಿ ಸ್ವಾಗತಿಸಿ ವಂದಿಸಿದರು. ಆದಾಯ ತೆರಿಗೆ ನಿರೀಕ್ಷಕಿ ಮಾಧವಿಲತಾ ನಿರೂಪಿಸಿದರು. ಚಿನ್ಮಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಇಲಾಖೆಯ ನಿರೀಕ್ಷಕ ಎಸ್.ಡಿ ಬಾಬು, ಸಿಬ್ಬಂದಿ ಮತ್ತು ಆದಾಯ ತೆರಿಗೆ ಸಲಹೆಗಾರರು ಹಾಗೂ ವಾಣಿಜ್ಯೋದ್ಯಮಿಗಳು ಹಾಜರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.