ಕೋಲಾರ:- ಪ್ರೌಢಶಾಲಾ ಶಿಕ್ಷಣದ ಪಠ್ಯಕ್ರಮದಲ್ಲಿ ಎಲ್ಲಾ ವಿಷಗಳಂತೆ ವೃತ್ತಿ ಶಿಕ್ಷಣವೂ ಮಹತ್ವ ಪಡೆದುಕೊಂಡಿದೆ, ಶಾಲೆಯ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಡಿಡಿಪಿಐ ಸ್ವಾಮಿ ತಿಳಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವೃತ್ತಿ ಶಿಕ್ಷಕರ ಪಾತ್ರ ಶಾಲೆಯ ಪರಿಸರ ಕಾಪಾಡುವಲ್ಲಿ ಪ್ರಮುಖವಾದುದು ಎಂದರು.
ಇಂದು ಇಡೀ ಪ್ರಪಂಚ ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಿದೆ, ಪರಿಸರ ಮಾಲಿನ್ಯ ತಡೆಯದಿದ್ದರೆ ಮಾನವನ ಬದುಕೇ ಅತಂತ್ರ ಎಂಬ ಭಾವನೆ ಗಟ್ಟಿಗೊಳ್ಳುತ್ತಿದೆ, ಇಂತಹ ಸಂದರ್ಭದಲ್ಲಿ ಶಾಲಾ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಿ ಎಂದರು.
ಮಕ್ಕಳಲ್ಲಿ ಪರಿಸರ ಪ್ರೇಮ ಮೂಡಿಸಿ, ಗಿಡಮರಗಳನ್ನು ಯಥೇಚ್ಚವಾಗಿ ಬೆಳೆಸಲು ಕ್ರಮ ಕೈಗೊಳ್ಳಿ, ಪರಿಸರ ಉಳಿದರೆ ಮಾತ್ರ ನಾವು ಉಳಿದೇವು ಎಂಬ ಸತ್ಯ ಮಕ್ಕಳಿಗೆ ಮನದಟ್ಟು ಮಾಡಿ ಎಂದರು.
ಆಧುನಿಕತೆ ಬೆಳೆದಂತೆ ಶಿಕ್ಷಣದ ಕಲಿಕಾ ವಿಧಾನವೂ ವಿಕಾಸಗೊಳ್ಳುತ್ತಿದೆ, ಸ್ವರ್ಧಾ ಪೈಪೋಟಿಗೆ ತಕ್ಕಂತೆ ಶಿಕ್ಷಣ ನೀಡಬೇಕಾದಲ್ಲಿ ಶಿಕ್ಷಕರಲ್ಲಿನ ಸಾಮಥ್ರ್ಯವೂ ಹೆಚ್ಚುವುದು ಅನಿವಾರ್ಯ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕ ಆಡಳಿತ ನನ್ನ ಉದ್ದೇಶವಾಗಿದೆ, ಶಿಕ್ಷಕರ ಸಮಸ್ಯೆಗಳಿದ್ದರೆ ನೇರವಾಗಿ ಬಂದು ತಿಳಿಸಿ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ನನ್ನದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕ ನರಸಿಂಹರೆಡ್ಡಿ,ವೃತ್ತಿ ಶಿಕ್ಷಕರ ಸಂಘದ ವೆಂಕಟೇಶ್,ಆಂಜನೇಯ, ಆಂಗ್ಲ ವಿಷಯ ಪರಿವೀಕ್ಷಕ ಮಲ್ಲಿಕಾರ್ಜುನಾಚಾರಿ, ಕಚೇರಿ ವ್ಯವಸ್ಥಾಪಕ ಸುರೇಶ್, ಎಸ್ಎಸ್ಎ ಅಧಿಕಾರಿ ಸಿದ್ದೇಶ್,ಮಂಜುನಾಥರೆಡ್ಡಿ,ಜಗನ್ನಾಥ್, ಬೂದಿಕೋಟೆ ಮಂಜುನಾಥ್, ಚಿರಂಜೀವಿ ಮತ್ತಿತರರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ