ಶೈಕ್ಷಣಿಕ ಪರಿಸರ ಸೃಷ್ಟಿಯೇ ನಮ್ಮ ಮುಖ್ಯ ಧ್ಯೇಯ- ಹ್ಯಾರಿಕಾಂಗ್
ಕೋಲಾರ:- ಅಸಮಾನತೆ ಹೋಗಲಾಡಿಸಿ ಕಲಿಕೆಗೆ ಪೂರಕವಾದ ಶೈಕ್ಷಣಿಕ ಪರಿಸರ ಸೃಷ್ಟಿಯೇ ನಮ್ಮ ಧ್ಯೇಯ ಎಂದು ಬೆಂಗಳೂರಿನ ಸ್ಯಾಮಸಂಗ್ ಕಂಪನಿ ಮುಖ್ಯ ಆರ್ಥಿಕ ಅಧಿಕಾರಿ ಹ್ಯಾರಿಕಾಂಗ್ ತಿಳಿಸಿದರು.
ನಗರದ ಪಿಸಿ ಬಡಾವಣೆ ಸರ್ಕಾರಿ ಶಾಲಾ ಆವರಣದಲ್ಲಿ ಸ್ಯಾಮಸಂಗ್ ಕಂಪನಿ ಮತ್ತು ಶಿಕ್ಷಕ ಗೆಳೆಯರ ಬಳಗದ ಸಹಯೋಗದಲ್ಲಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ,ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ 1.78 ಲಕ್ಷ ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡುತ್ತಿದ್ದರು.
ಪೂರ್ವಪ್ರಾಥಮಿಕ ತರಗತಿಯಿಂದ 7ನೇ ತರಗತಿವರೆಗಿನ ಶಿಕ್ಷಣ ಅಡಿಪಾಯವಾಗಿದೆ, ಇಲ್ಲಿ ಮಕ್ಕಳಲ್ಲಿ ಶಿಸ್ತು, ಕಲಿಕೆಗೆ ಪ್ರೇರಕ ಶಕ್ತಿಯಾಗಿ ಅಗತ್ಯವಾದ ಸಮವಸ್ತ್ರದ ಅಗತ್ಯವನ್ನು ಮನಗಂಡು ಸ್ಯಾಮಸಂಗ್ ಕಂಪನಿಯ ಸಾಮಾಜಿಕ ಕಾಳಜಿಯಡಿ ಕಳೆದ 10 ವರ್ಷಗಳಿಂದ ಈ ಕೊಡುಗೆ ನೀಡುತ್ತಾ ಬಂದಿದೆ ಎಂದರು.
ಕೋಲಾರ ತಾಲ್ಲೂಕಿನಲ್ಲಿ ಕಳೆದ ಐದು ವರ್ಷಗಳಿಂದ ಐದಾರು ವರ್ಷಗಳಿಂದ ನೋಟ್ ಪುಸ್ತಕ ವಿತರಿಸುತ್ತಿದ್ದು, ಈ ಬಾರಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ನೋಟ್ ಪುಸ್ತಕ ನೀಡುತ್ತಿದ್ದೇವೆ ಎಂದರು.
ಸ್ಯಾಮಸಂಗ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ರವಿಕುಮಾರ್, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು, ಮಕ್ಕಳ ಶೈಕ್ಷಣಿಕ ಸಾಧನೆಗೆ ಕೊರತೆ ಎದುರಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಶಿಕ್ಷಕರು ಭವಿಷ್ಯದ ಪ್ರಜೆಗಳನ್ನು ನಿರ್ಮಿಸುವ ಪ್ರಮುಖ ಜವಾಬ್ದಾರಿ ಹೊಂದಿದ್ದೀರಿ, ನೀವು ತಪ್ಪು ಮಾಡಿದರೆ ಅದು ಸಮಾಜದ ಹಾದಿಯನ್ನೇ ದಾರಿ ತಪ್ಪಿಸುತ್ತದೆ ಆದ್ದರಿಂದ ಈ ದೇಶ ರೂಪಿಸುವಲ್ಲಿ ನಿಮ್ಮ ಪಾತ್ರ ಹಿರಿದು ಎಂದರು.
ಈ ವರ್ಷ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ನೆರವು ನೀಡಿದ್ದೇವೆ, ಮುಂದಿನ ವರ್ಷ ಮತ್ತಷ್ಟು ವಿವಿಧ ರೀತಿಯ ನೆರವು ಒದಗಿಸುವ ಉದ್ದೇಶ ಹೊಂದಿದ್ದೇವೆ ಎಂದ ಅವರು, ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸಿ, ಸಾಧಕರನ್ನಾಗಿಸಿ ಎಂದು ಶಿಕ್ಷಕರಿಗೆ ಮನವಿ ಮಾಡಿದರು.
ಆರ್ಥಿಕ ಅಧಿಕಾರಿ ಎ.ಎಸ್.ರಾಜೇಂದ್ರ, ನಮ್ಮ ಸಮಾಜ ಮುಖಿ ಕಾರ್ಯಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ, ಅದರಲ್ಲೂ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಖಾಸಗಿ ಶಾಲೆಗಳಷ್ಟೇ ಸೌಲಭ್ಯಗಳು ಸಿಗಬೇಕೆಂಬುದು ನಮ್ಮ ಉದ್ದೇಶವಾಗಿದ್ದು, ಅಗತ್ಯ ಪರಿಕರ ನೀಡುವ ಆಲೋಚನೆ ಇದೆ ಎಂದರು.
ಸ್ಯಾಮಸಂಗ್ ಕಂಪನಿಯ 50ಕ್ಕೂ ಹೆಚ್ಚು ನೌಕರರು ಸಿಆರ್ಪಿಗಳ ಮಾರ್ಗದರ್ಶನದಲ್ಲಿ 15ಕ್ಕೂ ಹೆಚ್ಚು ಕಾರುಗಳಲ್ಲಿ ನೋಟ್ ಪುಸ್ತಕಗಳನ್ನು ತುಂಬಿಕೊಂಡು ತಾಲ್ಲೂಕಿನ ವಿವಿಧ ಕ್ಲಸ್ಟರ್ಗಳಲ್ಲಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಂಚಿಕೆಗೆ ಸ್ವತಃ ತೆರಳಿದರು.
ಕಾರ್ಯಕ್ರಮದಲ್ಲಿ ಸ್ಯಾಮಸಂಗ್ ಕಂಪನಿಯ ಸಂತೋಷ್, ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಇಸಿಒ ಆರ್.ಶ್ರೀನಿವಾಸನ್, ಶಿಕ್ಷಕ ಗೆಳೆಯರ ಬಳಗದ ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಚಂದ್ರಪ್ಪ, ವೆಂಕಟಾಚಲಪತಿಗೌಡ, ವೀರಣ್ಣಗೌಡ, ಸಿಆರ್ಪಿಗಳಾದ ಮಂಜುನಾಥ್,ಮುನಿಬೈರಪ್ಪ, ಪರಮೇಶ್,ರೇಣುಕಮ್ಮ, ಮುನೇಗೌಡ, ವಿಶ್ವನಾಥ್, ಗಂಗಾಧರ್,ವೆಂಕಟೇಶ್,ವೆಂಕಟರೆಡ್ಡಿ, ರವಿಕುಮಾರ್, ಶಾಲೆಯ ಮುಖ್ಯ ಶಿಕ್ಷಕಿ ಪ್ರಭಾವತಮ್ಮ ಮತ್ತಿತರರು ಉಪಸ್ಥಿತರಿದ್ದರು.
ವರದಿ:ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ