ಕೋಲಾರ:- ತಾಲ್ಲೂಕಿನ ಚದುಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಜನಶ್ರೀ ಟ್ರಸ್ಟ್ ಹಾಗೂ ನಗರದ ರಮ್ಯ ಬುಕ್ ಸ್ಟೋರ್ಸ್ ಸಹಯೋಗದಲ್ಲಿ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಮ್ಯ ಸ್ಟೋರ್ಸ್ನ ಜಗದೀಶ್, ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉಳ್ಳವರು ಕೈಜೋಡಿಸಬೇಕು, ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು ಎಂದು ಕೋರಿದರು.
ಸರ್ಕಾರಿ ಶಾಲೆಗಳೆಂದರೆ ಕೀಳಿರಿಮೆ ಅಗತ್ಯವಿಲ್ಲ, ಈ ದೇಶ ಕಟ್ಟಿದ ಎಲ್ಲಾ ಮಹಾನುಭಾವರು ಸರ್ಕಾರಿ ಶಾಲೆಯಲ್ಲೇ ಓದಿದ್ದು ಎಂಬುದನ್ನು ಮರೆಯಬಾರದು ಎಂದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿರುವದು ವಿಷಾದದ ಸಂಗತಿ ಎಂದ ಅವರು, ಸಮಾನ ಶಿಕ್ಷಣದ ಉಳಿವಿಗಾಗಿ ಸರ್ಕಾರಿ ಶಾಲೆ ಉಳಿಸುವ ಕಾರ್ಯದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು, ಗುಣಮಟ್ಟದ ಶಿಕ್ಷಣ ನೀಡಿಕೆಗೆ ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ಶಾಲೆಯ 1ನೇ ತರಗತಿಯಿಂದ 7ನೇ ತರಗತಿವರೆಗಿನ ಎಲ್ಲಾ ಮಕ್ಕಳಿಗೂ ಉಚಿತ ನೋಟ್ ಪುಸ್ತಕ,ಲೇಖನ ಸಾಮಗ್ರಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಮ್ಯಸ್ಟೋರ್ಸ್ನ ಶ್ರೀನಿವಾಸ್, ಜನಶ್ರಿ ಟ್ರಸ್ಟ್ನ ಕೃಷ್ಣಪ್ಪ ಕುಟುಂಬದವರು, ಎಸ್ಡಿಎಂಸಿ ಅಧ್ಯಕ್ಷೆ ಸುಧಾ, ಗ್ರಾಮದ ಮುಖಂಡರಾದ ಕೃಷ್ಣಪ್ಪ, ಜೆಡಿ ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದು, ಮುಖ್ಯ ಶಿಕ್ಷಕಿ ವೆಂಕಟಲಕ್ಷ್ಮಮ್ಮ ಸ್ವಾಗತಿಸಿ,ಶಿಕ್ಷಕರಾದ ಗೌರಮ್ಮ ನಿರೂಪಿಸಿ, ಬಿ.ಎನ್.ಮಂಜುನಾಥ್ ವಂದಿಸಿದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ