ಬಲಿಜ ಸಮುದಾಯದವರು ಒಂದಾಗಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಸರ್ಕಾರದಿಂದ ಸಮುದಾಯಕ್ಕೆ ನ್ಯಾಯಯುತವಾಗಿ ಬರಬೇಕಾದ ಅನುದಾನಗಳನ್ನು ಪಡೆದುಕೊಳ್ಳಲು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಬಲಿಜ ಸಮುದಾಯದವರು ಒಂದಾಗಬೇಕೆಂದು ತಾಲ್ಲೂಕಿನ ಬಲಿಜ ಮುಖಂಡರಾದ ಬಿ.ಎಂ.ರಾಮಚಂದ್ರಪ್ಪನವರು ಹೇಳಿದರು.
ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಮೇ 28ರ ಭಾನುವಾರ ದಂದು ಬೆಂಗಳೂರು ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ಕರ್ನಾಟಕ ರಾಜ್ಯ ಮಟ್ಟದ ಬಲಿಜ ಸಮಾವೇಶದ ಕುರಿತಾಗಿ ಪತ್ರಿಕಾ ಘೋಷ್ಟಿಯನ್ನು ನೆರವೇರಿಸಿ ಮಾತನಾಡಿ ಬಲಿಜ ಸಮುದಾಯವನ್ನು ವಿನಾ ಕಾರಣವಾಗಿ ಮತ್ತು ಯಾವುದೇ ಆಯೋಗಗಳ ರಚನೆಯಿಲ್ಲದೆ ಮತ್ತು ಅನುಮತಿಯಿಲ್ಲದೆ ಸಮುದಾಯವನ್ನು 2ಎ ನಿಂದ 3ಎ ಗೆ ಸೇರಿಸಿ ಬಲಿಜ ಜನಾಂಗಕ್ಕೆ ತೀರದ ಅನ್ಯಾಯವನ್ನು ಮಾಡಲಾಗಿದೆಯೆಂದು ಮತ್ತು ಇದರ ಕುರಿತಾಗಿ ಧ್ವನಿ ಎತ್ತಲು ಬಲಿಜ ಸಮುದಾಯವು ಒಗ್ಗಟ್ಟಾಗಿ ಸಮಾವೇಶಕ್ಕೆ ಹಾಜರಾಗಿ ತಮ್ಮ ಹಕ್ಕೊತ್ತಾಯವನ್ನು ಮಾಡಬೇಕೆಂದು ಹೇಳಿದರು.
ಮುಖಂಡರಾದ ಎನ್.ಶ್ರೀನಿವಾಸಯ್ಯ ಮಾತನಾಡಿ ಬಲಿಜ ಜನಾಂಗವು ಅತಿ ಹಿಂದುಳಿದ ಜನಾಂಗವಾಗಿದ್ದು ಸರ್ಕಾರದ ಯಾವುದೇ ಅನುದಾನಗಳಾಗಲಿ ಅಥವಾ ಅನುಕೂಲಗಳಾಗಲೀ ಮಾಡದೆ ಸರ್ಕಾರವು ತಾರತಮ್ಯವನ್ನು ಎಸುಗುತ್ತಿದೆಯೆಂದು ಹೇಳಿದರು.
ಸಂಚಾಲಕ ಕಲಾಶಂಕರ್ ಮಾತನಾಡಿ ರಾಜ್ಯದಲ್ಲಿ ಹಲವಾರು ಜಯಂತಿಗಳನ್ನು ಮಾಡುತ್ತಿದ್ದು, ದೇಶಕ್ಕೆ ಕಾಲಜ್ಞಾನವೆಂಬ ಮಹಾನ್ ಗ್ರಂಥವನ್ನು ನೀಡಿ ದಾರೀ ದೀಪವಾದ ಶ್ರೀ ಶ್ರೀ ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿಯನ್ನು ಬಲಿಜ ಸಮುದಾಯದ ಜಯಂತಿಯನ್ನಾಗಿ ಸರ್ಕಾರದವತಿಯಿಂದ ಆಚರಿಸಬೇಕೆಂದು ಹೇಳಿದರು.
ಕೊಳ್ಳೂರು ನಾಗೇಂದ್ರ ಮಾತನಾಡಿ ಸರ್ಕಾರವು ಹಲವಾರು ಅನುದಾನಗಳನ್ನು ಬಿಡುಗಡೆ ಮಾಡುತ್ತಿದೆ ಆದರೆ ಬಲಿಜ ಸಮುದಾಯಕ್ಕೆ ಯಾವುದೇ ರೀತಿಯಲ್ಲೂ ಪ್ರೋತ್ಸಾಹ ನೀಡುವ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಮತ್ತು ವಿನಾಕಾರಣ ಸಮುದಾಯವನ್ನು 3ಎ ಗೆ ಸೇರಿಸಿ ಸಮುದಾಯಕ್ಕೆ ಬರಬೇಕಾದ ಮೀಸಲಾತಿಯನ್ನು ತಪ್ಪಿಸಿದ್ದಾರೆ. ಮತ್ತು ಹಲವಾರು ಪ್ರಸಿದ್ಧ ವ್ಯಕ್ತಿಗಳ ಹೆಸರಲ್ಲಿ ಭವನಗಳನ್ನು ನಿರ್ಮಾಣ ಮಾಡುತ್ತಿದ್ದು ತಾಲ್ಲೂಕಿಗೊಂದು ಬಲಿಜ ಭವನವನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಸಮಾಜ ಸೇವಕ ಎಸ್.ಎಲ್.ಎನ್.ಮಂಜುನಾಥ್, ಹೇಮಂತ್, ಮನೋಜ್, ಚಿನ್ನಿಪ್ರಕಾಶ್, ರಕ್ಷಿತ್ ಹಾಗೂ ಯುವ ಮುಖಂಡರುಗಳು ಹಾಜರಿದ್ದರು.