ಪಾಲಕ್ಕಾಡ್, ಆ ೨೮: ಬೀದಿನಾಯಿಗಳ ಧಾಳಿಯಲ್ಲಿ ಇಬ್ಬರು ಮಕ್ಕಳ ಸಹಿತ ಮೂವರಿಗೆ ಗಾಯಗಳಾಗಿವೆ. ಒಂದು ಮಗು ಇನ್ನೂ ಕೇವಲ ಆರು ತಿಂಗಳ ಹಸುಳೆಯಾಗಿದೆ. ಪಾಲಕ್ಕಾಡ್ ಜಿಲ್ಲೆಯ ಗ್ರಾಮದಲ್ಲಿ ಬೀದಿನಾಯಿಗಳ ಕಾಟ ವಿಪರೀತವಾಗಿದ್ದು ಇತ್ತೀಚಿನ ದಿನಗಳಲ್ಲಿ ಜೀವನವೇ ದುಸ್ತರವಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಮಗುವಿನ ಸ್ನಾನ ಮಾಡಿಸುತ್ತಿದ್ದ ವೇಳೆಯಲ್ಲಿ ಏಕಾಏಕಿ ನಾಯಿಯೊಂದು ಮಗುವನ್ನು ಕಚ್ಚಿದೆ. ಕುಥುಂಬಲ್ಲಿ ಎಂಬ ನೇಕಾರರೇ ಹೆಚ್ಚಿರುವ ಗ್ರಾಮದಲ್ಲಿ ಮೂರು ವರ್ಷದ ಮಗುವನ್ನೂ ನಾಯಿಗಳು ಕಚ್ಚಿವೆ.
ಇದೇ ಗ್ರಾಮದಲ್ಲಿ ನಲವತ್ತೈದು ವರ್ಷದ ನಾಗರಿಕರೊಬ್ಬರನ್ನೂ ನಾಯಿ ಕಚ್ಚಿದೆ. ಕಳೆದ ಆಗಸ್ಟ್ ೧೦ರಂದು ತಿರುವನಂತಪುರಂ ಬಳಿ ಅರವತ್ತೈದು ವರ್ಷದ ವೃದ್ದೆಯೊಬ್ಬರನ್ನು ನಾಯಿಗಳು ಕಚ್ಚಿ ಸಾವಿಗೆ ಕಾರಣವಾದ ಬಳಿಕ ನಾಯಿಕಾಟದ ಬಗ್ಗೆ ಹೆಚ್ಚಿನ ಅಸ್ಥೆ ವಹಿಸಲಾಗಿತ್ತು.
ಅಂದಿನಿಂದ ಇದುವರೆಗೆ ಕನಿಷ್ಟ ಏಳು ವ್ಯಕ್ತಿಗಳು ನಾಯಿಕಡಿತಕ್ಕೆ ಒಳಗಾಗಿದ್ದು ಹೆಚ್ಚಿನವರು ಮಕ್ಕಳಾಗಿದ್ದಾರೆ. ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಪ್ರಮುಖವಾಗಿ ಬೀದಿನಾಯಿಗಳ ನಿರ್ಮೂಲನೆ ಹಾಗೂ ಸಾಕು ನಾಯಿಗಳನ್ನು ಮನೆಯೊಳಗೇ ಕಟ್ಟಿರುವಂತೆ ಮನೆಯ ಮಾಲಿಕರಿಗೆ ತಿಳಿಸುವುದು ಇತ್ಯಾದಿಗಳಾಗಿವೆ.