ನವದೆಹಲಿ: ಕಾಂಗ್ರೆಸ್ಸಿನ ತಾರಾ ಪ್ರಚಾರಕರನ್ನಾಗಿ ಪ್ರಿಯಾಂಕಾ ವಾದ್ರಾ ಅವರನ್ನು ಬಳಸಿಕೊಂಡಿರುವ ಬಗ್ಗೆ ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಅವರು, ‘ನಮ್ಮಲ್ಲಿ ಪ್ರಿಯಾಂಕಾ ಅವರಿಗಿಂತ ಹೆಚ್ಚು ಸುಂದರವಾದ ತಾರಾ ಪ್ರಚಾರಕರು ಇದ್ದಾರೆ’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಪ್ರಿಯಾಂಕಾ ಅವರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ತಾರಾ ಪ್ರಚಾರಕಿ ಎಂದು ಕಾಂಗ್ರೆಸ್ ಘೋಷಿಸಿದೆ.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಟಿಯಾರ್, ‘ಪ್ರಿಯಾಂಕಾ ಅವರಿಗಿಂತ ಹೆಚ್ಚು ಸುಂದರವಾದ ಯುವತಿಯರು, ಮಹಿಳೆಯರು ಇದ್ದಾರೆ. ಅವರೂ ತಾರಾ ಪ್ರಚಾರಕಿಯರು’ ಎಂದು ಹೇಳಿದರು.
ನಂತರ ಹೇಳಿಕೆ ತಿದ್ದಿಕೊಂಡ ಅವರು, ತಾವು ಹೇಳಿದ್ದು ಅಷ್ಟೇನೂ ಮಹತ್ವದ ಮಾತಲ್ಲ, ಪ್ರಿಯಾಂಕಾ ಅವರನ್ನು ನೇಮಿಸಿರುವುದು ಕಾಂಗ್ರೆಸ್ಸಿನ ಆಂತರಿಕ ವಿಚಾರ ಎಂದರು.
‘ಪ್ರಚಾರಕ್ಕೆ ತಮ್ಮ ಬಳಿ ಪ್ರಿಯಾಂಕಾ ಅವರ ಸುಂದರ ಮುಖವಿದೆ ಎಂದು ಕಾಂಗ್ರೆಸ್ಸಿಗರು ಭಾವಿಸಿದ್ದರೆ, ಇನ್ನೂ ಹೆಚ್ಚಿನ ಸೌಂದರ್ಯ ಇರುವವರು ನಮ್ಮ ಬಳಿ ಇದ್ದಾರೆ. ಇವರನ್ನು ಪ್ರಚಾರಕ್ಕೆ ಬರುವಂತೆ ಬಿಜೆಪಿ ಸೂಚಿಸಬಹುದು’ ಎಂದು ಕಟಿಯಾರ್ ಹೇಳಿದರು.
‘ಕ್ಷಮೆ ಕೇಳುವುದಿಲ್ಲ’: ಆಡಿದ ಮಾತಿಗೆ ತೀವ್ರ ವಿರೋಧ ವ್ಯಕ್ತವಾದ ನಂತರ ಸ್ಪಷ್ಟನೆ ನೀಡಿದ ಕಟಿಯಾರ್, ‘ನನಗೆ ಮಹಿಳೆಯರ ಬಗ್ಗೆ ಗೌರವ ಇದೆ. ನಾನು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದೆ, ಅಷ್ಟೇ. ಪ್ರಿಯಾಂಕಾ ಅವರು ನನ್ನ ಸೋದರ ಸೊಸೆಗೆ ಸಮಾನ’ ಎಂದು ಹೇಳಿದರು. ಅಲ್ಲದೆ, ಶರದ್ ಯಾದವ್ ಅವರು ತಮ್ಮ ಮಾತಿಗೆ ಕ್ಷಮೆ ಕೋರಬೇಕು ಎಂದು ಕಟಿಯಾರ್ ಆಗ್ರಹಿಸಿದರು.
‘ಸೌಂದರ್ಯದ ಬಗ್ಗೆ ನಾನು ಆಡಿದ ಮಾತಿಗೆ ಕ್ಷಮೆ ಕೇಳುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು. ಮಹಿಳೆಯರ ಬಗ್ಗೆ ಯಾರೂ ವೈಯಕ್ತಿಕ ಮಟ್ಟದ ಹೇಳಿಕೆ ನೀಡಬಾರದು. ಪಕ್ಷ ಇಂಥ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಬಿಜೆಪಿ ಮನಸ್ಥಿತಿಗೆ ಕನ್ನಡಿ: ಕಟಿಯಾರ್ ಅವರು ತಮ್ಮ ಮಾತಿಗೆ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
‘ಕಟಿಯಾರ್ ಮಾತು ನನ್ನಲ್ಲಿ ನಗೆಯುಕ್ಕಿಸುತ್ತಿದೆ. ಏಕೆಂದರೆ, ಅವರ ಮಾತು ಮಹಿಳೆಯರ ಬಗ್ಗೆ ಬಿಜೆಪಿ ಹೊಂದಿರುವ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಪ್ರಿಯಾಂಕಾ ಪ್ರತಿಕ್ರಿಯಿಸಿದರು.
‘ಕಟಿಯಾರ್ ಮಾತುಗಳು ಬಿಜೆಪಿಯ ಮಾನಸಿಕ ಸ್ಥಿತಿ ಎಂಥದ್ದೆಂಬುದನ್ನು ಸಾಬೀತುಮಾಡುತ್ತವೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಟೀಕಿಸಿದರು. ಮೋದಿ ಮತ್ತು ಷಾ ಅವರಲ್ಲಿ ಮಹಿಳೆಯರ ಬಗ್ಗೆ ಗೌರವ ಇದ್ದರೆ, ಕಟಿಯಾರ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ಮಹಿಳೆಯರು ಮತ ಚಲಾವಣೆ ವೇಳೆ ತಮ್ಮ ಶಕ್ತಿ ತೋರಿಸುತ್ತಾರೆ ಎಂದರು.