ಕಾರವಾರ: ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ, ಮನೋರಂಜನೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಅವಕಾಶವಿರುವ ಹಗಲು ಯೋಗಕ್ಷೇಮ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಸೋಮವಾರ ಕಾರವಾರದಲ್ಲಿ ಉದ್ಘಾಟಿಸಿದರು.
ಕಾರವಾರದ ಹಬ್ಬುವಾಡದಲ್ಲಿ ಆರಂಭಿಸಲಾಗಿರುವ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು, ಮಹಿಳೆಯರು ಹಾಗೂ ರೈತರ ಉತ್ತೇಜನಕ್ಕೆ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅವುಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಸರ್ಕಾರದ ಆಶಯವನ್ನು ಸಾರ್ಥಕಪಡಿಸಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಎಲ್ಲ ಕ್ಷೇತ್ರದಲ್ಲೂ ಜನಪಯೋಗಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದು, ಹಿರಿಯ ನಾಗರಿಕರ ಕಾಳಜಿಗಾಗಿ ಇದೀಗ ಹಗಲು ಯೋಗಕ್ಷೇಮ ಕೇಂದ್ರವನ್ನು ತೆರೆಯಲಾಗಿದೆ. ಇದರ ಜವಾಬ್ದಾರಿ ವಹಿಸಿಕೊಂಡಿರುವ ಸ್ವಯಂ ಸೇವಾ ಸಂಸ್ಥೆಯು ಸರ್ಕಾರದ ಹಣ ಪೋಲಾಗದಂತೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದ ಅವರು, ಅಧಿಕಾರಿಗಳು ತಿಂಗಳಿಗೊಮ್ಮೆ ಕೇಂದ್ರಕ್ಕೆ ಭೇಟಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಈ ಕೇಂದ್ರಕ್ಕೆ ನಿತ್ಯ ಎಷ್ಟು ಮಂದಿ ಬಂದು ಹೋಗುತ್ತಾರೆ ಎಂಬುದನ್ನು ಪುಸ್ತಕದಲ್ಲಿ ನೋಂದಾಯಿಸಬೇಕು. ಕಾಯಿಲೆಗಳಿಂದ ಬಳಲುತ್ತಿದ್ದರೆ ಅವರಿಗೆ ಚಿಕಿತ್ಸೆ ನೀಡಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ತಜ್ಞ ವೈದ್ಯರು ಅಥವಾ ಸಂಬಂಧಿಸಿದ ಆಸ್ಪತ್ರೆಗೆ ಶಿಫಾರಸು ಮಾಡಬೇಕು. ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಡತವನ್ನು ನಿರ್ವಹಣೆ ಮಾಡಬೇಕು. ಹಿರಿಯರು ಓದಬೇಕಾದಂತಹ ರಾಮಾಯಣ, ಮಹಾಭಾರತ ಪುಸ್ತಕಗಳನ್ನು ಕೇಂದ್ರದಲ್ಲಿ ಇರಿಸಬೇಕು ಎಂದು ಹೇಳಿದರು.
ತಂದೆ, ತಾಯಂದಿರನ್ನು ಹಿಂದೆ ಮಕ್ಕಳು ದೇವರಂತೆ ಕಾಣುತ್ತಿದ್ದರು. ಆದರೆ ಈ ಯಾಂತ್ರಿಕ ಯುಗದಲ್ಲಿ ಅವರನ್ನು ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿ. ಪಾಲಕರಿಗೆ ಯಾರೂ ದ್ರೋಹ ಬಗೆಯುತ್ತಾರೋ ಅವರು ಜೀವನದಲ್ಲಿ ಉದ್ಧಾರವಾಗಲ್ಲ. ಆರ್ಥಿಕ ನೆರವಿಗಿಂತ ಅವರಿಗೆ ಮಕ್ಕಳ ಪ್ರೀತಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜೇಂದ್ರ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಹಿರಿಯರಿಗೆ ಉಪಾಹಾರ, ಮನರಂಜನೆ, ಪಿಕ್ನಿಕ್, ಆರೋಗ್ಯ ತಪಾಸಣೆ, ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗುವುದು. ಈ ಕೇಂದ್ರವನ್ನು ಬೆಳಗಾವಿಯ ಮಲ್ಲಿಕಾರ್ಜುನ ಜನಸೇವಾ ಸೊಸೈಟಿ ನಿರ್ವಹಣೆ ಮಾಡಲಿದ್ದು, ಸರ್ಕಾರವು ವಾರ್ಷಿಕವಾಗಿ ಸೊಸೈಟಿಗೆ ರೂ. 11 ಲಕ್ಷ ನೀಡಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯ್ತಿ ಸಿಇಓ ಚಂದ್ರಶೇಖರ ನಾಯಕ, ಎಸ್ಪಿ ವಿನಾಯಕ ವಿ. ಪಾಟೀಲ್ ಉಪಸ್ಥಿತರಿದ್ದರು.