ಕಾರವಾರ: ಡಿಸೆಂಬರ್ ೧೦ರಿಂದ ಆರಂಭವಾಗಲಿರುವ ಮೂರು ದಿನಗಳ ಕರಾವಳಿ ಉತ್ಸವಕ್ಕೆ ಕಾರವಾರ ಸಜ್ಜಾಗುತ್ತಿದ್ದು, ಖ್ಯಾತ ಬಾಲಿವುಡ್ ಹಿನ್ನಲೆ ಗಾಯಕರಾದ ಶಾನ್ ಹಾಗೂ ಮೊನಾಲಿ ಠಾಕೂರ್ ಮತ್ತು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಪ್ರಮುಖ ಆಕರ್ಷಣೆಯಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕರಾವಳಿ ಉತ್ಸವದಲ್ಲಿ ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಮಾತ್ರವಲ್ಲದೆ ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಮಯೂರವರ್ಮ ವೇದಿಕೆಯಲ್ಲಿ ಹಾಗೂ ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿದೆ. ಮಯೂರವರ್ಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ೪.೩೦ರಿಂದ ಹಾಗೂ ರಂಗಮಂದಿರದಲ್ಲಿ ಬೆಳಿಗ್ಗೆ ೧೦.೩೦ರಿಂದ ಪ್ರಾರಂಭವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮ ವಿವರ: ಡಿಸೆಂಬರ್ ೧೦ರಂದು ಹಿಂದೂಸ್ಥಾನಿ ಸಂಗೀತ ಸುಜಾತಾ ಗುರವ ಕಮ್ಮಾರ ಧಾರವಾಡ, ನೃತ್ಯ ರೂಪಕ ರಿದಂ ಹಾರ್ಟ್ಸ್ ಬೀಟ್ ಕಲಾ ತಂಡ ಕಾರವಾರ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಸುರೇಶ ಪಟ್ಕಿ ಪುಣೆ, ಭರತನಾಟ್ಯ ಎಂ.ಎಸ್.ಶಾಂತಲಾ ಶಿವಲೀಲಾ ಟ್ರಸ್ಟ್ ಬೆಂಗಳೂರು, ನೃತ್ಯ ವೈಭವ ಭಾರ್ಗವಿ ಆರ್ಟ್ಸ್ ಮತ್ತು ಡ್ಯಾನ್ಸ್ ಅಕಾಡೆಮಿ ಉಡುಪಿ, ಯಕ್ಷಗಾನ ‘ಧರ್ಮಾಂಗಧ ದಿಗ್ವಿಜಯ ಚಿಟ್ಟಾಣಿ ಯಕ್ಷಗಾನ ತಂಡದಿಂದ, ಸಮೂಹ ನೃತ್ಯ ಬ್ರೇಕ್ ಔಟರ್ಸ್ ನೃತ್ಯ ತಂಡ ಕಾರವಾರ ಹಾಗೂ ರಸಮಂಜರಿ ಶಾನ್ ಮತ್ತು ತಂಡದಿಂದ ನಡೆಯಲಿದೆ.
ಡಿಸೆಂಬರ್ ೧೧: ಸ್ಟಾರ್ ಚಾಯ್ಸ್ ನೃತ್ಯ ಕಲಾ ಕೇಂದ್ರ ಕಾರವಾರ, ನಾಗಭೂಷಣ್ ತಂಡ ಬೆಂಗಳೂರು ಇವರಿಂದ ಸಂಮೋಹ ನೃತ್ಯ, ಭಾರತೀಯ ನೃತ್ಯ ತಂಡ ಯಲ್ಲಾಪುರ ಭರತನಾಟ್ಯ, ಪರಿಮಳಾ ಗಿರಿಯಾಚಾರ್ ಬಾಗಲಕೋಟೆ ಭಾವ ಸಂಗೀತ, ಅನುರಾಧಾ ಹೆಗಡೆ ಶಿರಸಿ ಇವರಿಂದ ದಶಾವತಾರ ನೃತ್ಯ ರೂಪಕ, ತೇಜಸ್ವಿ ಅನಂತ ಬೆಂಗಳೂರು ಎಲ್ಇಡಿ ಪಾಯ್, ಆಕ್ಸಿಜನ್ ತಂಡ ಬೆಂಗಳೂರು ಡ್ಯಾನ್ಸ್ ವೈವಿಧ್ಯ, ಪದ್ಮಶ್ರೀ ಗೀತಾ ಮಹಾಲಿಕ್ ದೆಹಲಿ ಒಡಿಸ್ಸಿ ನೃತ್ಯ, ಸಾಧು ಕೋಕಿಲಾ ಮ್ಯೂಸಿಕಲ್ ನೈಟ್ಸ್ ನಡೆಯಲಿದೆ.
ಡಿಸೆಂಬರ್ ೧೨ರಂದು ಟಿಬೇಟಿಯನ್ ನೃತ್ಯ, ಕಾರವಾರ ಕರೋಕೆ ಕ್ಲಬ್ ಚಿತ್ರಗೀತೆಗಳ ಗಾನಯಾನ, ವಿ.ಜೆ.ಲಾಂಜೇಕರ್ ಸುಗಮ ಸಂಗೀತ, ಕಲ್ಪನಾ ರಶ್ಮಿ ಕಲಾಲೋಕ ಸಂಸ್ಥೆ ಕಾರವಾರ ಆಧುನಿಕ ನೃತ್ಯ ವೈಭವ, ಮಹೇಶ ಎಸ್.ಹೆಗಡೆ ಶಿರಸಿ ಗೀತ ಗಾಯನ, ಕುದ್ರೋಳಿ ಗಣೇಶ್ ತಂಡದಿಂದ ಮ್ಯಾಜಿಕ್ ಷೊ, ಕೈಗಾ ಯೋಜನಾ ಮಂಡಳಿ ಬ್ಯಾಲೆ ತಂಡದಿಂದ ಭಗವದ್ ಗೀತಾ ನೃತ್ಯರೂಪಕ, ಎಸ್ಎಂಎಸ್ ತಂಡ ಭುವನೇಶ್ವರದಿಂದ ಸ್ಯಾಂಡ್ ಆರ್ಟ್ ಮತ್ತು ಬಾಲಿವುಡ್ ಹಿನ್ನಲೆ ಗಾಯಕಿ ಮೊನಾಲಿ ಠಾಕೂರ್ ತಂಡದಿಂದ ಬಾಲಿವುಡ್ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.
ಉದ್ಘಾಟನಾ ಸಮಾರಂಭ: ಕರಾವಳಿ ಉತ್ಸವವನ್ನು ಅರಣ್ಯ ಸಚಿವ ರಮಾನಾಥ ರೈ ಅವರು ಸಂಜೆ ೭ಗಂಟೆಗೆ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ವಾಣಿಜ್ಯ ಮತ್ತು ಜವಳಿ, ಮುಜರಾಯಿ ಸಚಿವ ರುದ್ರಪ್ಪಾ ಲಮಾಳಿ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಎಂದು ಅವರು ಹೇಳಿದರು.
ಶಾಸಕ ಸತೀಶ್ ಸೈಲ್ ಅವರು ಮಾತನಾಡಿ, ಕರಾವಳಿ ಉತ್ಸವ ಜನರ ಉತ್ಸವವಾಗಿದ್ದು, ಜಿಲ್ಲೆಯ ಜನತೆಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಉಪಸ್ಥಿತರಿದ್ದರು