ಕಾರವಾರ: ಉತ್ತರ ಕನ್ನಡ ಜಿಲ್ಲೆಯ ೨೦ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಳಿಯಾಳ ತಾಲೂಕಿನ ತೇರಗಾಂವ್ ಗ್ರಾಮದಲ್ಲಿ ನಡೆಯಲಿದ್ದು, ಸಮ್ಮೇಳನದ ಲಾಂಛನವನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಗ್ರಾಮಾಂತರ ಭಾಗದಲ್ಲಿ ನಡೆಯುತ್ತಿರುವುದು ಸಂತೋಷ. ಸಾಹಿತಿಗಳು ಮತ್ತು ಸಾಮಾನ್ಯರ ಸಮಾಗಮಕ್ಕೆ ಮತ್ತು ವಿಚಾರ ವಿನಿಮಯಕ್ಕೆ ಸಮ್ಮೇಳನ ನೆರವಾಗಲಿದೆ. ಸಾಹಿತ್ಯದ ಹಬ್ಬಕ್ಕೆ ಜಿಲ್ಲಾಡಳಿತ ಸಹ ಸಾಹಿತ್ಯ ಪರಿಷತ್ ಜೊತೆ ಕೈಜೋಡಿಸಲಿದೆ. ಸಮ್ಮೇಳನಕ್ಕೆ ಬೇಕಾದ ಎಲ್ಲಾ ನೆರವನ್ನು ಜಿಲ್ಲಾಡಳಿತ ನೀಡಲಿದೆ ಎಂದು ಹೇಳಿದರು. ಸಮ್ಮೇಳನವನ್ನು ಅರ್ಥಪೂರ್ಣವಾಗಿ ಸಂಘಟಿಸಿ ಎಂದು ಸಲಹೆ ಮಾಡಿದರು. ಜನರು ಮತ್ತು ಭಾಷಾ ಬಾಂಧವ್ಯವನ್ನು ಸಮ್ಮೇಳನ ಬೆಸೆಯಲಿ. ಸಾಹಿತ್ಯ ಮತ್ತು ಸಂಸ್ಕೃತಿಯ ಅನಾವರಣ ಆಗಲಿ ಎಂದು ಜಿಲ್ಲಾಧಿಕಾರಿ ನಕುಲ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ಸಮ್ಮೇಳನವನ್ನು ವಿಭಿನ್ನವಾಗಿ ಸಂಘಟಿಸಲು ಮತ್ತು ಸಾಹಿತ್ಯದ ಮೂಲ ಮೌಲ್ಯಗಳನ್ನು ಕಾಪಾಡಲು ಮಾಡಲಾಗುತ್ತಿದೆ. ಸಮ್ಮೇಳನದಲ್ಲಿ ಜನ ಸಾಮಾನ್ಯರ ನೋವು ನಲಿವುಗಳಿಗೆ ಸಹ ಸ್ಪಂದಿಸಲಾಗುವುದು ಎಂದರು. ಕನ್ನಡ ಸಾಹಿತ್ಯ ಮತ್ತು ಭಾಷೆಯನ್ನು ಜನರ ಹತ್ತಿರಕ್ಕೆ ಕೊಂಡೊಯ್ಯಲಾಗುತ್ತಿದೆ. ಜಿಲ್ಲೆಯ ಬಹುತೇಕ ತಾಲೂಕಾ ಸಮ್ಮೇಳನಗಳನ್ನು ಗ್ರಾಮಾಂತರ ಭಾಗದಲ್ಲಿ ಸಂಘಟಿಸಿ ಭಿನ್ನ ಸ್ವರೂಪ ನೀಡಲಾಗಿದೆ. ಸಾಹಿತ್ಯ ಜನಸಾಮಾನ್ಯರಿಗಾಗಿ ಎಂಬ ಧ್ಯೇಯವನ್ನು ಇಟ್ಟುಕೊಂಡು ಕನ್ನಡ ನೆಲದ ಮತ್ತು ಕನ್ನಡ ಭಾಷೆ ಉಳಿವಿನ ಬಗ್ಗೆ ಚರ್ಚಿಸಲಾಗಿದೆ. ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಸಹ ಸಮ್ಮೇಳನದಲ್ಲಿ ಅರ್ಥಪೂರ್ಣ ಚರ್ಚೆಗಳಾಗಿವೆ. ಪದ್ಮಶ್ರೀ ಸುಕ್ರಜ್ಜಿಯನ್ನು ತಾಲೂಕಾ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ಮಾಡುವ ಮೂಲಕ ಮೌಖಿಕ ಪರಂಪರೆಗೆ, ಬುಡಕಟ್ಟು ಮಹಿಳೆಯ ಶ್ರೇಷ್ಠತೆಯನ್ನು ,ಮೌಲ್ಯವನ್ನು ಎತ್ತಿಹಿಡಿಯಲಾಗಿದೆ. ಜಿಲ್ಲಾ ಸಮ್ಮೇಳನದಲ್ಲಿ ಸಹ ಹಲವು ಹೊಸತನ ಮತ್ತು ಬದಲಾವಣೆಗಳನ್ನು ಮಾಡಲು ಚಿಂತಿಸಲಾಗುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷರು ನುಡಿದರು. ಸಮ್ಮೇಳವನ್ನು ಯಶಸ್ವಿಯಾಗಿ ಸಂಘಟಿಸಲು ಹಲವರ ಸಹಕಾರ ಮತ್ತು ಸಂಘ ಸಂಸ್ಥೆಗಳ ನೆರವು ಬೇಕೆಂದು ಅವರು ವಿನಂತಿಸಿಕೊಂಡರು.
ಸಮ್ಮೇಳನದ ಲಾಂಛನವನ್ನು ಸಿದ್ದಪಡಿಸಿದ ಕಲಾವಿದ ಸಂತೋಷಕುಮಾರ್ ಮೆಹಂದಳೆ, ಕಾರವಾರ ತಾಲೂಕಾ ಕಸಾಪ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಉಮೇಶ್ ಮುಂಡಳ್ಳಿ. ಅನು ಕಳಸ, ಖಲೀಲುಲ್ಲಾ ಸೇರಿದಂತೆ ಕಾರವಾರ ಕಸಾಪ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.