ಕಾರವಾರ : ಕ್ಷಿಪ್ರ ಕಾರ್ಯಾಚರಣೆ ಸಾಮರ್ಥ್ಯ ಹೊಂದಿರುವ ‘ತಿಲ್ಲಾಂಚಾಂಗ್’ ಯುದ್ಧನೌಕೆಯನ್ನು ಭಾರತೀಯ ನೌಕಾಪಡೆಗೆ ಗುರುವಾರ ಕಾರವಾರದ ನೌಕಾನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಸೇರ್ಪಡೆ ಮಾಡಲಾಯಿತು.
ಸಂಪೂರ್ಣ ಸ್ವದೇಶಿ ನಿರ್ಮಿತವಾಗಿರುವ ವಾಟರ್ ಜೆಟ್ ತಂತ್ರಜ್ಞಾನ ಹೊಂದಿರುವ ಈ ಯುದ್ಧನೌಕೆಯನ್ನು ಪಶ್ಚಿಮ ನೌಕಾದಳದ ಫ್ಲಾಗ್ ಆಫೀಸರ್ ಕಮಾಂಡಿಂಗ್ ವೈಸ್ ಅಡ್ಮಿರಲ್ ಗಿರೀಶ್ ಲೂತ್ರಾ ಅವರು ಲೋಕಾರ್ಪಣೆ ಮಾಡಿದರು.
ಕರ್ನಾಟಕ ಕರಾವಳಿದ ತೀರ ಪ್ರದೇಶ ಹಾಗೂ ಸಮುದ್ರ ಭಾಗದಲ್ಲಿ ಗಸ್ತು ಕಾರ್ಯಕ್ಕಾಗಿ ಈ ಯುದ್ಧನೌಕೆಯನ್ನು ನಿಯೋಜಿಸಲಾಗುತ್ತಿದ್ದು, ಕಾರವಾರ ನೌಕಾನೆಲೆಯಲ್ಲಿ ಕೇಂದ್ರಸ್ಥಾನವನ್ನು ಹೊಂದಿರುತ್ತದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧವಾಗಿರುವ ಈ ಯುದ್ಧನೌಕೆಯಲ್ಲಿ ನೌಕಾಪಡೆಯ ಅಧಿಕಾರಿಗಳು ಸೇರಿದಂತೆ ೫೦ಮಂದಿ ನೌಕಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಕನಿಷ್ಟ ನೀರಿನಲ್ಲಿ ಕೂಡಾ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುವುದು ‘ತಿಲ್ಲಾಂಚಾಂಗ್’ ವಿಶೇಷ.
ಜಿಆರ್ಎಸ್ಸಿ ಕೊಲ್ಕತ್ತಾ ಸಂಸ್ಥೆ ಈ ಯುದ್ಧನೌಕೆಯನ್ನು ಸಿದ್ಧಪಡಿಸಿದ್ದು, ಈ ಸರಣಿಯಲ್ಲಿ ೪ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ೨ನೌಕೆಗಳು ವಿಶಾಖಪಟ್ಟಣದಲ್ಲಿ ಕಾರ್ಯಾಚರಿಸುತ್ತಿವೆ. ಪಶ್ಚಿಮ ಕರಾವಳಿಗೆ ನೀಡಿರುವ ಪ್ರಥಮ ಯುದ್ಧನೌಕೆ ಇದಾಗಿದೆ. ಈ ಯುದ್ಧನೌಕೆಯಲ್ಲಿ ಪ್ರೊಪೆಲ್ಲರ್ ತಂತ್ರಜ್ಞಾನದ ಬದಲಾಗಿ ೩ಬಲಿಷ್ಟ ವಾಟರ್ ಜೆಟ್ ಇಂಜಿನ್ಗಳನ್ನು ಅಳವಡಿಸಲಾಗಿದೆ. ಈ ವಾಟರ್ ಜೆಟ್ಗಳು ನೀರನ್ನು ಸೆಳೆದುಕೊಂಡು ನೌಕೆಯನ್ನು ವೇಗವಾಗಿ ಮುನ್ನಡೆಸಿಕೊಂಡು ಹೋಗುತ್ತದೆ.
ಕಮಾಂಡರ್ ಅದಿತಿ ಪಟ್ನಾಯಕ್ ‘ಐಎನ್ಎಸ್ ತಿಲ್ಲಾಂಚಾಂಗ್’ ಕಮಾಂಡರ್ ಆಗಿ ಕಾರ್ಯನಿರ್ವಹಿಸಲಿದ್ದು, ಕರಾವಳಿ ಮತ್ತು ಸಮುದ್ರದಲ್ಲಿ ಕಣ್ಗಾವಲು, ನುಸುಳುಕೋರರು ಅಥವಾ ಕಳ್ಳಸಾಗಾಣಿಕೆಗಾರರ ಮೇಲೆ ನಿಗಾ ಮತ್ತು ತಡೆ, ಇಇಝಡ್ ನಿಯಂತ್ರಣ, ಕಾನೂನು ಪರಿಪಾಲನೆ ಮಾತ್ರವಲ್ಲದೆ ಮಿಲಿಟರಿಯೇತರ ಕಾರ್ಯಗಳಾದ ರಕ್ಷಣಾ ಕಾರ್ಯಾಚರಣೆ, ಮಾನವೀಯ ನೆರವುಗಳು, ವಿಪತ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳಿಗೆ ಈ ಯುದ್ಧನೌಕೆ ಸನ್ನದ್ಧವಾಗಿರುತ್ತದೆ ಎಂದು ಕರ್ನಾಟಕ ನೌಕಾ ವಲಯದ ರಿಯರ್ ಅಡ್ಮಿರಲ್ ಕೆ.ಜೆ.ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ಜಿಆರ್ಎಸ್ಇ ಸಂಸ್ಥೆಯ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ವಿ.ಕೆ.ಸಕ್ಸೇನಾ, ನೌಕಾನೆಲೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.