ಕಾರವಾರ: ಮುಂಬರುವ ವಿಧಾನಸಭೆ ಚುನಾವಣೆಯ ಅಂಗವಾಗಿ ಮತದಾನದ ಮಹತ್ವವನ್ನು ಜಿಲ್ಲೆಯ ವಿಕಲಚೇತನರಿಗೆ ಸಾರುವ ನಿಟ್ಟಿನಲ್ಲಿ ಇದೇ ಮಾರ್ಚ 7 ರಿಂದ 12 ರವರೆಗೆ ವಿಕಲಚೇತನರ ಸರ್ವೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಮತದಾನಕ್ಕೆ ಅರ್ಹರಿರುವ ವಿಕಲಚೇತನರನ್ನು ಗುರುತಿಸಿ ಅವರಿಗೆ ಮತದಾನದ ಅರಿವು ಮೂಡಿಸಲು ಸರ್ವೆ ಕಾರ್ಯವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಮಾಡಲಾಗುತ್ತಿದೆ.
ಸರ್ವೆ ಕಾರ್ಯ ಮುಕ್ತಾಯದ ನಂತರ ಮಾರ್ಚ 13 ರಿಂದ 15 ರವರೆಗೆ ಸಂಗ್ರಹಿಸಿದ ಮಾಹಿತಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ತದನಂತರ ಮಾರ್ಚ 20 ರಂದು ಆಯಾ ತಾಲೂಕಿನ ತಹಶೀಲ್ದಾರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ವಿಕಲಚೇತನರಿಗೆ ಮತದಾನದ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.