ಬೆಂಗಳೂರು-ಮೈಸೂರು ಜೋಡಿ ಹಳಿ, ವಿದ್ಯುದೀಕರಣ ಸರ್ಕಾರದ ಸಾಧನೆ : ಆರ್. ವಿ ದೇಶಪಾಂಡೆ
ಕಾರವಾರ : ಬೆಂಗಳೂರು ಮತ್ತು ಮೈಸೂರು ನಡುವಿನ 138 ಕಿ.ಮೀ. ಉದ್ದದ ಜೋಡಿ ರೈಲ್ವೆ ಹಳಿ ನಿರ್ಮಾಣ ಮತ್ತು ವಿದ್ಯುದೀಕರಣ ರಾಜ್ಯ ಸರ್ಕಾರದ ಮಹತ್ವದ ಸಾಧನೆಯಾಗಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವರಿ ಸಚಿವ ಆರ್. ವಿ. ದೇಶಪಾಂಡೆ ಹೇಳಿದ್ದಾರೆ
ಎರಡು ಯೋಜನೆಗಳನ್ನು ಕೇಂದ್ರ ಸರ್ಕಾರದ ರೈಲ್ವೆ ಇಲಾಯೊಂದಿಗೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೊಂಡಿದ್ದು ಯೋಜನೆಯ ಒಟ್ಟು ಮೊತ್ತ ರೂ. 990 ಕೋಟಿಗಳಲ್ಲಿದ್ದು ರಾಜ್ಯ ಸರ್ಕಾರದ ಪಾಲು 581 ಕೋಟಿ ರೂ.ಗಳಾಗಿದೆ ಎಂದು ವಿವರಿಸಿದ್ದಾರೆ.
ಈ ಮಾರ್ಗದ ಜೋಡಿ ಹಳಿ ನಿರ್ಮಾಣ ಯೋಜನೆಯು ಮೂರು ಹಂತಗಳಲ್ಲಿ ಕಳೆದ 10 ವರ್ಷಗಳಲ್ಲಿ ಪೂರ್ಣಗೊಂಡಿದೆ ಮತ್ತು ವಿದ್ಯುದೀಕರಣ ಯೋಜನೆಯನ್ನು 2010-11 ನೇ ಸಾಲಿನಲ್ಲಿ ಆರಂಭಿಸಿ ಈಗ ಪೂರ್ಣಗೊಳಿಸಲಾಗಿದೆ. ಮಧ್ಯದಲ್ಲಿ ಶ್ರಿರಂಗಪಟ್ಟಣದ ಬಳಿ ಕಾವೇರಿ ನದಿಗೆ ಅಡ್ಡಲಾಗಿ 2 ಸೇತುವೆಗಳನ್ನು ಕಟ್ಟಬೇಕಾದ್ದರಿಂದ ಹಾಗೂ ಟಿಪ್ಪು ಶಸ್ತ್ರಗಾರವನ್ನು ಸುರಕ್ಷಿತವಾಗಿ ಸ್ಥಳಾಂತರಿಸವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಶ್ರೀರಂಗಪಟ್ಟಣದ ಬಳಿ ಇದ್ದ ಸುಮಾರು 225 ವರ್ಷಗಳಷ್ಟು ಪುರಾತನವಾದ ಮತ್ತು ಚಾರಿತ್ರಿಕ ಸ್ಮಾರಕವಾದ ಟಿಪ್ಪು ಶಸ್ತ್ರಾಗಾರವು 900 ಟನ್ ಭಾರವಿತ್ತು. ಇದಕ್ಕೆ ಸ್ವಲ್ಪವೂ ದಕ್ಕೆ ಆಗದಂತೆ ಸಂಪೂರ್ಣ ಸುರಕ್ಷಿತವಾಗಿ ಸ್ಥಳಾಂತರಿಸಿದ್ದು ಒಂದು ಮಹತ್ವದ ಸಾಧನೆಯಾಗಿದೆ ಎಂದು ಸಚಿವ ದೇಶಪಾಂಡೆ ಸ್ಮರಿಸಿದ್ದಾರೆ.
ಯೋಜನೆಯ ಕಾಮಗಾರಿಯು ಸ್ವಲ್ಪ ವಿಳಂಬವಾಗಿತ್ತು ಆದರೆ ಕಳೆದ 2 ರಿಂದ 3 ವರ್ಷಗಳಲ್ಲಿ ರಾಜ್ಯ ಸರ್ಕಾರವು ಈ ಕಾಮಗಾರಿಗೆ ವಿಶೇಷ ಒತ್ತನ್ನು ನೀಡಿ ಯೋಜನೆಯ ಅನುಷ್ಠಾನದ ವೇಗವನ್ನು ಒದಗಿಸಿತು ಎಂದು ತಿಳಿಸಿದ್ದಾರೆ.
ಬೆಂಗಳೂರು- ಮೈಸೂರು ಮಾರ್ಗದ ಜೋಡಿ ರೈಲ್ವೆ ಹಳಿ ನಿರ್ಮಾಣ ವಿದ್ಯುದೀಕರಣದಿಂದಾಗಿ ಎರಡು ನಗರಗಳ ನಡುವೆ ಪ್ರತಿನಿತ್ಯ ಓಡಾಡುವ ಸುಮಾರು 6 ಸಾವಿರಕ್ಕಿಂತ ಹೆಚ್ಚಿನ ಮತ್ತು ಉಳಿದಂತೆ ಓಡಾಡುವ 25 ಸಾವಿರಕ್ಕೂ ಹೆಚ್ಚು ಸಾಮಾನ್ಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೊತೆಗೆ ರೈಲ್ವೆ ಇಲಾಖೆಗೆ ವಾರ್ಷಿಕ 20 ಕೋಟಿ ಉಳಿತಾಯವಾಗಲಿದೆ. ಅಲ್ಲದೇ ಎರಡು ನಗರಗಳ ನಡುವೆ ಹೆಚ್ಚಿನ ಸಂಖೈಯ ರೈಲುಗಳ ಓಡಾಡಕ್ಕೆ ಸುಗಮ ಸೌಲಭ್ಯ ಸಿಗಲಿದೆ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.