ಇನ್ನೂ ಮೂರು ದಿನ ವಿವಿಧೆಡೆ ಮೌಲ್ಯಾಂಕನ ಶಿಬಿರ
ಕಾರವಾರ :ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಿಸುವ ಸಲುವಾಗಿ ಸೋಮವಾರದಿಂದ ಆರಂಭವಾದ ಪರೀಕ್ಷಾ (ಮೌಲ್ಯಾಂಕನ) ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಭಾಗವಹಿಸಿರುವುದು ಕಂಡು ಬಂತು.
ಜಿಲ್ಲಾ ಆಡಳಿತ, ಜಿಲ್ಲಾಪಂಚಾಯತ್, ಅಲಿಮ್ಕೋ, ಆಕ್ಸಲಿಯರಿ ಪ್ರೊಡಕ್ಷನ ಸೆಂಟರ್ ಬೆಂಗಳೂರು, ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಭಾರತ ಸರ್ಕಾರದ ಪಂಡಿತ ದೀನದಯಾಳ್ ಉಪಾಧ್ಯಾಯ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿಯಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಸಾಧನ-ಸಲಕರಣೆಗಳನ್ನು ವಿತರಿಸಲು ಪರೀಕ್ಷಾ (ಮೌಲ್ಯಾಂಕನ) ಶಿಬಿರವನ್ನು ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ನಡೆಯಿತು.
ಕಾರವಾರ ಮತ್ತು ಅಂಕೋಲ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ವಿವಿಧ ಅಂಗ ವೈಕಲ್ಯಕ್ಕೆ ನಿಗದಿಪಡಿಸಲಾಗಿದ್ದ ಕೌಂಟರ್ಗಳಲ್ಲಿ ಸೂಕ್ತ ದಾಖಲೆಗಳ ಪರಿಶೀಲನೆ ಮಾಡಿಸಿ ಹಾಗೂ ತಮ್ಮ ಅಂಗವೈಕಲ್ಯತೆಯನ್ನು ಮೌಲ್ಯಂಕನ ಮಾಡಿಕೊಂಡು ಸಲಕರಣೆಗಳಿಗೆ ನೋಂದಾಯಿಸಿಕೊಂಡರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಎನ್.ಅಶೋಕ್ಕುಮಾರ್ ಮಾತನಾಡಿ ಪ್ರತಿ ವರ್ಷವೂ ಈ ಶಿಬಿರ ನಡೆಯುತ್ತಿದ್ದು ಪ್ರಸಕ್ತ ಸಲಿನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಹೆಚ್ಚಿನ ಫಲಾನುಭವಿಗಳು ಮೌಲ್ಯಾಂಕನ ಶಿಬಿರದಲ್ಲಿ ಬೇರೆ ವಿಭಾಗದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.
ತಾಲೂಕು ಆಸ್ಪತ್ರೆ ಹೊನ್ನಾವರದಲ್ಲಿ 10-07-2018 ರಂದು, ಪಂಡಿತ ಸಾರ್ವಜನಿಕ ಆಸ್ಪತ್ರೆ ಶಿರಸಿಯಲ್ಲಿ 11-07-2018 ರಂದು, ಸಾರ್ವಜನಿಕ ಆಸ್ಪತ್ರೆ ದಾಂಡೇಲಿಯಲ್ಲಿ 12-07-2018 ರಂದು ಈ ಶಿಬಿರ ಏರ್ಪಡಿಸಲಾಗಿದೆ. ವಾರ್ಷಿಕ ವರಮಾನ ರೂ. 1,80,000/- ಕ್ಕೆ ಮಿರದ ಅಥವಾ ಬಿ.ಪಿ.ಎಲ್ ಕಾರ್ಡ್ ಹೊಂದಿದ 40% ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ವಿಕಲಚೇತನರಿಗೆ ಮತ್ತು ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಹಿರಿಯ ನಾಗರಿಕರಿಗೆ ಮಾತ್ರ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ ಎಂದರು.
ಈಗಾಗಲೇ ಸಾಧನ-ಸಲಕರಣೆಗಳನ್ನು ಪಡೆಯದಿರುವ ವಿಕಲಚೇತನರು ಆಧಾರ್ ಕಾರ್ಡ್, ಪಡೀತರ ಚೀಟಿ, ವೋಟರ್ ಐಡಿ, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಒಂದು ಗುರುತಿನ ಚೀಟಿ ಹಾಗೂ ಇತ್ತಿಚೀನ ಪಾಸ್ಪೋರ್ಟ್ ಸೈಜ್ನ 2 ಭಾವಚಿತ್ರದೊಂದಿಗೆ ಪರೀಕ್ಷಾ ಶಿಬಿರಕ್ಕೆ ಹಾಜರಾಗಬೇಕಾಗಿಯೂ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಆರೋಗ್ಯಾಧಿಕಾರಿಗಳನ್ನು, ಶಿಶು ಅಭಿವೃದ್ಧಿ ಅಧಿಕಾರಿಗಳನ್ನು, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.
ಪ್ರೊಬೆಷನರಿ ಐಎಎಸ್ ಅಧಿಕಾರಿ ಡಾ.ದಿಲೀಶ್ ಸಸಿ ಅವರು ಶಿಬಿರವನ್ನು ವೀಕ್ಷಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ.ರಮೇಶ್ರಾವ್, ಶಿಶು ಅಭಿವೃದ್ಧಿ ಅಧಿಕಾರಿ ನಾಯಕ್ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.