ಕಾರವಾರ ಜುಲೈ 19 : ಪ್ಲಾಸ್ಟರ್ ಆಫ್ ಪ್ಯಾರಿಸ್ ಪಿಒಪಿ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ನಿಷೇಧಿಸಲಾಗಿದ್ದು ಮುಂದಿನ ಯಾವುದೇ ಹಬ್ಬಗಳಲ್ಲಿ ಅಂತಹ ವಿಗ್ರಹಗಳ ತಯಾರಿಕೆ, ಮಾರಾಟ ಅಥವಾ ನೀರಿಗೆ ವಿಸರ್ಜಿಸುವುದನ್ನು ನಿಷೇಧಿಸಿರುವುದಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಬಣ್ಣ ಲೇಪಿತ ವಿಗ್ರಹಗಳನ್ನು ಪೂಜಿಸಿ ನೀರಿಗೆ ವಿಸರ್ಜಿಸಿದ ಪರಿಣಾಮ ಪರಿಸರದ ಮೇಲೆ ಭಾರೀ ಅನಾಹುತಗಳ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಬಣ್ಣ ಲೇಪಿತ ವಿಗ್ರಹಗಳನ್ನು ನಿಷೇಧಿಸಿ ಆದೇಶಿಸಿದ್ದು ಜಿಲ್ಲೆಯಲ್ಲಿ ಅಂತಹ ಪ್ರಕರಣಗಳ ನಡೆಯದಂತೆ ನಿಷೇಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಸಾರ್ವಜನಿಕರು ಆಚರಿಸುತ್ತಿರುವ ಹಬ್ಬ ಮತ್ತು ಇತರೆ ಸಮಾರಂಭಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ಮತ್ತು ಬಣ್ಣದ ವಿಗ್ರಹಗಳನ್ನು ಕೆರೆ ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜನೆಯನ್ನು ವ್ಯಾಪಕವಾಗಿ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅಂತಹ ಜಲ ಮೂಲಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ (ವಿಸರ್ಜನೆ ನಂತರ) ವಿಶ್ಲೇóಷಿಸಿದ ಮತ್ತು ವಿಶ್ಲೇಷಣಾ ವರದಿಗಳ ಪ್ರಕಾರ ಅಂತಹ ಜಲಮೂಲಗಳು ವಿಗ್ರಹಗಳ ವಿಸರ್ಜನೆಯಿಂದಾಗಿ ಮಾಲಿನ್ಯವಾಗುತಿರುವುದು ದೃಡಪಟ್ಟಿರುತ್ತದೆ. ಈ ಜಲ ಮಾಲಿನ್ಯವು ವಿಗ್ರಹಗಳಲ್ಲಿ ಉಪಯೋಗಿಸಿದ ಪ್ಲಾಸ್ಟರ್ ಆಪ್ ಪ್ಯಾರಿಸ್ ನಿಂದ ಮತ್ತು ಬಳಸುವ ರಾಸಾಯನಿಕ ಬಣ್ಣಗಳಿಂದ ಆಗುತಿದ್ದು, ಇದರಿಂದ ಜಲ ಮೂಲಗಳ ಭೌತಿಕ ಮತ್ತು ರಾಸಾಯನಿಕ ಗುಣಗಳು ಮಾರ್ಪಟ್ಟಿರುತ್ತವೆ. ಇದರಿಂದ ಜಲ ಮೂಲಗಳ ಮೇಲೆ ಅವಲಂಭಿತವಾದ ಪಶು ಪಕ್ಷಿ ಪ್ರಾಣ ಗಳು ಮತ್ತು ಇತರೆ ಪ್ರಾಣ ಗಳ ಜೀವಕ್ಕೆ ಅಪಾಯ ಉಂಟಾಗುವುದರಿಂದ ಹಾಗೂ ಪರಿಸರಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆಯಾಗುವುದರಿಂದ ಇಂತಹ ಕ್ರಿಯೆಗಳನ್ನು ತಡೆಯುವುದು ಅವಶ್ಯಕವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಯಾವುದೇ ಬಣ್ಣದ ವಿಗ್ರಹಗಳನ್ನು ಮತ್ತು ಪಿ.ಓ.ಪಿ ಗಳಿಂದ ಮಾಡಿದ ವಿಗ್ರಹಗಳನ್ನು (ಗಣೇಶ ಮತ್ತು ಇತರೆ) ತಯಾರಿಸಿ ಜಲ ಮೂಲಗಳಿಗೆ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಹಬ್ಬ ಹಾಗೂ ಸಮಾರಂಭಗಳಲ್ಲಿ ಬಣ್ಣದ ವಿಗ್ರಹಗಳನ್ನು ಮತ್ತು ಪಿ.ಓ.ಪಿ ಗಳಿಂದ ಮಾಡಿದ ವಿಗ್ರಹಗಳನ್ನು ಪೂಜಿಸಿದ ನಂತರ ಜಲ ಮೂಲಗಳಿಗೆ ವಿಸರ್ಜನೆ ಮಾಡದಂತೆ ತಡೆಯುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದ್ದು ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳು (ಆಯುಕ್ತರು/ ಮುಖ್ಯಾಧಿಕಾರಿಗಳು) ತಮ್ಮ ಕಾರ್ಯವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಪಿಒಪಿ ಅಧವಾ ಬಣ್ಣದ ವಿಗ್ರಹಗಳನ್ನು ತಯಾರಿಸದಂತೆ ಹಾಗೂ ಜಲ ಮೂಲಗಳಲ್ಲಿ ವಿಸರ್ಜನೆಯಾಗದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.
ಅಲ್ಲದೆ, ಆಯಾ ಸ್ಥಳೀಯ ಮಟ್ಟದ ಅಧಿಕಾರಿಗಳು ಸಬಂಧಪಟ್ಟವರೊಂದಿಗೆ ಸಭೆಗಳನ್ನು ತುರ್ತಾಗಿ ನಡೆಸಿ ಸದರಿ ಅನುಸೂಚನೆಯನ್ನು ಅನುಷ್ಠಾನಗೊಳಿಸಬೇಕು ಹಾಗೂ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ನಿಷೇಧಿತ ವಿಗ್ರಹಗಳನ್ನು ಚೆಕ್ ಪೋಸ್ಟಿನಲ್ಲಿ ತಡೆಗಟ್ಟಲು ಕ್ರಮಕೈಗೊಂಡ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಮತ್ತು ಪರಿಸರ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರವಾರ ಇವರಿಗೆ 7 ದಿನಗಳ ಒಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.