ಕಾರವಾರ, ಫೆಬ್ರವರಿ 24: ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವ ಪ್ರದರ್ಶನ ಮಳಿಗೆಗಳು ಹಾಗೂ ಸಂಜೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳ ಮಾಹಿತಿ ಉತ್ಸವಕ್ಕೆ ಕಾರವಾರದ ರವೀಂದ್ರನಾಥ ಕಡಲತೀರ ಸಜ್ಜಾಗಿದೆ.
ಇದೇ ಮೊದಲ ಬಾರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದಲ್ಲಿ ಮಾಹಿತಿ ಉತ್ಸವ ಕಾರ್ಯಕ್ರಮವನ್ನು ಫೆಬ್ರವರಿ 25ರಂದು ಶನಿವಾರ ಹಾಗೂ 26ರಂದು ಭಾನುವಾರ ಆಯೋಜಿಸಿದೆ.
ಮಯೂರವರ್ಮ ವೇದಿಕೆ ಮುಂಭಾಗ ಮೈದಾನದಲ್ಲಿ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ಎಲ್ಲಾ ಪ್ರಮುಖ ಇಲಾಖೆಗಳು ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಿವೆ. ಇದರೊಂದಿಗೆ ವಾರ್ತಾ ಇಲಾಖೆಯ ಆಕರ್ಷಕ ಮಳಿಗೆಗಳು, ಮಹಿಳಾ ಸ್ವಸಹಾಯ ಸಂಘಗಳ ಮಳಿಗೆಗಳು ಭಾಗವಹಿಸಲಿವೆ.
ಸಾಂಸ್ಕøತಿಕ ಕಾರ್ಯಕ್ರಮಗಳ ಕಲರವ: ಶನಿವಾರ ಸಂಜೆ 5.30ಕ್ಕೆ ಮಯೂರವರ್ಮ ವೇದಿಕೆಯಲ್ಲಿ ಕಾರ್ಯಕ್ರಮಗಳು ಆರಂಭವಾಗಲಿವೆ. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಕಲಾತಂಡಗಳು ಹಾಗೂ ಸ್ಥಳೀಯ ಕಲಾತಂಡಗಳಿಗೆ ಸಾಂಸ್ಕøತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಗೀತಗಾಯನ- ಹುರುಗಲವಾಡಿ ರಾಮಯ್ಯ ಮತ್ತು ತಂಡದವರಿಂದ, ತೊಗಲು ಗೊಂಬೆಯಾಟ- ಗುಂಡುರಾಜ್ ಮತ್ತು ತಂಡ ಹಾಸನ, ಪೂಜಾ ಕುಣ ತ- ಉಮಾಮಹೇಶ್ವರಿ ಕಲಾ ತಂಡ , ಕಂಸಾಳೆ ಪ್ರದರ್ಶನ- ಪರಿವರ್ತನಾ ಕಲಾತಂಡ ಚಾಮರಾಜನಗರ, ಜೀವಸ್ವರ ವಿಡಿಯೊ ಪ್ರದರ್ಶನ, ನೃತ್ಯ ರೂಪಕ- ರಿದಂ ಹಾರ್ಟ್ ಬೀಟ್ ನೃತ್ಯ ಮತ್ತು ಕಲಾಸಂಸ್ಥೆ ಕಾರವಾರ, ಗೋವಿನ ಹಾಡು ರೂಪಕ, ಯುನೈಟೆಡ್ ಬ್ರದರ್ಸ್ ನೃತ್ಯ ತಂಡ ಕಾರವಾರದಿಂದ ನೃತ್ಯ ರೂಪಕ ನಡೆಯಲಿವೆ.
ಗಾನಯಾನ ಆಕರ್ಷಣೆ: ಫೆಬ್ರವರಿ 26ರಂದು ಕನ್ನಡ ಚಲನಚಿತ್ರ ಗೀತೆಗಳ ಗಾಯನ ಹಾಗೂ ನೃತ್ಯ ರೂಪಕಗಳು ಪ್ರಮುಖ ಆಕರ್ಷಣೆಯಾಗಿದೆ. ಗಾಯಕರಾದ ಅಶ್ವಿನಿ ಟಿ.ಎನ್, ನವನೀತ ಕೃಷ್ಣಾ, ವಸುಧಾ ಶಾಸ್ತ್ರಿ, ಸಿಂಚನಾ, ಕಾರ್ತಿಕ್ ಗಾನಯಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಲಾಸ್ಪರ್ಷ ತಂಡ ನೃತ್ಯ ರೂಪಕ ನಡೆಸಿಕೊಡಲಿದೆ.
ಪ್ರದರ್ಶನ ಮಳಿಗೆಗಳು: ಮಯೂರವರ್ಮ ವೇದಿಕೆ ಮುಂಭಾಗದಲ್ಲಿ 20ಪ್ರದರ್ಶನ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಾರಿಗೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್ರಾಜ್ ಇಂಜಿನಿಯರಿಂಗ್ ಇಲಾಖೆ, ಶಿಕ್ಷಣ ಇಲಾಖೆ, ಕಾರವಾರ ನಗರಸಭೆ, ವಾರ್ತಾ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಮಾಹಿತಿಗಳ ಪ್ರದರ್ಶನ ಹಾಗೂ ಸ್ವಸಹಾಯ ಸಂಘಗಳ ಮಳಿಗೆಗಳು ಇರಲಿವೆ.