ಕಾರವಾರ: ಭೂಹೀನ ದಲಿತ ಮತ್ತು ಆದಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತದ ಮೂಲಕ ಗುರುವಾರ ಮನವಿ ಸಲ್ಲಿಸಿದರು.
‘ಭೂ ಹೀನರಿಗೆ ಭೂಮಿಯ ಹಕ್ಕು ಕೊಡುವ ಸರ್ಕಾರದ ಕಾರ್ಯಕ್ರಮಗಳು ವರ್ಷದಿಂದ ವರ್ಷಕ್ಕೆ ಕುಂಟುತ್ತಿದೆ. ಬಹುವರ್ಷಗಳಿಂದ ತುಂಡು ಭೂಮಿಗಳಲ್ಲಿ ಉಳುಮೆ ಮಾಡುತ್ತಿರುವವರು ಹಕ್ಕು ಪತ್ರಕ್ಕಾಗಿ ಒತ್ತಾಯಿಸುತ್ತಿದ್ದರೆ, ಆ ವೇಳೆಯಲ್ಲಿ ಭರವಸೆ ನೀಡುವ ಸರ್ಕಾರಗಳು ಅದನ್ನು ಅನುಷ್ಠಾನಗೊಳಿಸುತ್ತಿಲ್ಲ’ ಎಂದು ದೂರಿದರು.
‘ಈಗಿನ ಸರ್ಕಾರವಾದರೂ ಬಡವರಿಗೆ ಶಾಶ್ವತವಾದ ಭೂಮಿ ನೀಡಲು ಯೋಜನೆಯನ್ನು ತರಬೇಕು. ಜತೆಗೆ, ಶಾಶ್ವತ ಜೀವನ ಆಧಾರವಾಗಿರುವ ಭೂಮಿಯನ್ನು ಹಂಚುವ ಯೋಜನೆಯನ್ನು ಜಾರಿಗೆ ತರುವುದು ಸಾಮಾಜಿಕ ನ್ಯಾಯದ ಬದ್ಧತೆಯಾಗಿದೆ’ ಎಂದು ತಿಳಿಸಿದ್ದಾರೆ.