ಕಾರವಾರ:ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಜಿನೇವಾ ಒಪ್ಪಂದ ದಿನಾಚರಣೆ ಹಾಗೂ ರಕ್ತಗುಂಪು ವರ್ಗೀಕರಣ ಕಾರ್ಯಕ್ರಮ
ಕಾರವಾರ,12-8-17: ರಕ್ತದಾನದ ಮಹತ್ವವನ್ನು ಸಾರುವ ಜಿನೇವಾ ಒಪ್ಪಂದ ದಿನಾಚರಣೆಯನ್ನು ಕಾರವಾರದ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ದಿನಾಂಕ 12-8-17ರಂದು ಆಚರಿಸಲಾಯಿತು. ಭಾರತೀಯ ರೆಡಕ್ರಾಸ್ ಸಂಸ್ಥೆ ಉತ್ತರಕನ್ನಡ ಜಿಲ್ಲಾ ಘಟಕ ಮತ್ತು ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ರೆಡಕ್ರಾಸ್ ಯೂತ್ವಿಂಗ್ ನ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಡಾ.ಕೆ.ಆನಂದ್ IAS ಪ್ರೊಬೇಶನರಿ ಅಧಿಕಾರಿಗಳು ಉತ್ತರಕನ್ನಡ ಇವರು ದೀಪಬೆಳಗಿಸಿ ಉದ್ಘಾಟಸಿ, ರಕ್ತದಾನ ಮತ್ತು ರಕ್ತಗುಂಪು ವರ್ಗೀಕರಣ ಬಹಳ ಅವಶ್ಯವಾದುದೆಂದು ಹೇಳಿ, ರಕ್ತದಾನ ಮಾಡಿದ ಪ್ರತಿಯೊಬ್ಬನು ಇನ್ನೊಂದು ಜೀವಕ್ಕೆ ನೆರವಾಗುವುದರ ಬಗ್ಗೆ ಹೆಮ್ಮೆ ಪಡಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ, ಕಾಲೇಜಿನ ಪ್ರಾಂಶುಪಾಲರಾದ ಡಾ. ಕಲ್ಪನಾ ಕೆರವಡಿಕರರವರು ಮಾತನಾಡಿ, ಎಲ್ಲಾ ದಾನಗಳಿಗಿಂತ ರಕ್ತದಾನವೇ ಶ್ರೇಷ್ಠವಾದದ್ದು. ಯುವಕ-ಯುವತಿಯರಲ್ಲಿ ರಕ್ತದಾನದ ಮಹತ್ವ ತಿಳಿಸುವ ಈ ಕಾರ್ಯಕ್ರಮ ಸ್ಪೂರ್ತಿ ನೀಡಲಿ ಎಂದು ಹಾರೈಸಿದರು. ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿಯ ಡಾ. ಶಂಕರ ರಾವ್ರವರು ರಕ್ತದಾನದ ಮಹತ್ವವನ್ನು ಮತ್ತು ವಿವಿಧ ರಕ್ತಗುಂಪುಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಉ.ಕ. ಜಿಲ್ಲಾ ರೆಡ್ಕ್ರಾಸ್ ಘಟಕದ ಚೇರಮನ್ರಾದ ಶ್ರೀ ವಿ. ಎಮ್. ಹೆಗಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಭಾರತೀಯ ರೆಡಕ್ರಾಸ್ ಸಂಸ್ಥೆಯ ಕಾರವಾರ ಘಟಕದ ಕಾರ್ಯದರ್ಶಿ ಶ್ರೀ ಜಗದೀಶ್ ಬಿರ್ಕೋಡಿಕರ್ರವರು ವಂದನಾರ್ಪಣೆಗೈದರು. ಪ್ರೊಫೆಸರ ವೆಂಕಟೇಶ್ ಗಿರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ಕಾಲೇಜಿನ ಯೂನಿಯನ್ ಕಾರ್ಯಧ್ಯಕ್ಷರಾದ ಡಾ. ಯು. ಎನ್. ಶೆಟ್ಟಿ ಮತ್ತು ರೆಡಕ್ರಾಸ್ ಯೂತ್ ವಿಂಗ್ ಸಂಯೋಜಕರಾದ ಡಾ. ಪ್ರೀತಿ ತಲ್ಲೂರ್ರವರು ಮತ್ತು ಪ್ರೊಫೆಸರ್ ಶಿವಾನಂದ ಭಟ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಭಾರತೀಯ ರೆಡಕ್ರಾಸ್ ಘಟಕದ ಸದಸ್ಯರಾದ ಶ್ರೀ ಸದಾನಂದ ನಾಯ್ಕ, ಶ್ರೀ ಮುರಳಿಧರ್ ಗೋವೆಕರ್, ಶ್ರೀಮತಿ ಖೈರುನ್ನಿಸಾಬೇಗಂ ಭಾಗವಹಿಸಿದ್ದರು. ಸಭೆಯ ಬಳಿಕ ಕಾಲೇಜಿನ 200 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಮ್ಮ ರಕ್ತದ ಗುಂಪಿನ ವರ್ಗೀಕರಣ ಮಾಡಿಸಿಕೊಂಡರು. ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ವರ್ಗೀಕರಣ ಕಾರ್ಯವನ್ನು ನಡೆಸಿಕೊಟ್ಟರು. ಸುಮಾರು 10 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಲು ಮುಂದಾದರು.