ಕಾರವಾರ: ವಿಮೆ ಕಂತಿನ ಅರ್ಧದಷ್ಟು ಮೊತ್ತವನ್ನು ಮಾತ್ರ ನಿಗದಿ ಮಾಡಬೇಕು, ಪ್ರವಾಸೋದ್ಯಮ ಇಲಾಖೆಯವರು ಕಾರುಗಳನ್ನು ಸಬ್ಸಿಡಿ ದರದಲ್ಲಿ ನೀಡುವಂತೆ, ಆಟೊಗಳನ್ನೂ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಆಟೊರಿಕ್ಷಾ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಆಟೊ ಚಾಲಕರು ಮತ್ತು ಮಾಲೀ ಕರಿಗೆ ಅಸಂಘಟಿತ ವಲಯದ ಕಾರ್ಮಿಕ ರಿಗೆ ನೀಡುವ ಎಲ್ಲ ಸೌಲಭ್ಯಗಳನ್ನೂ ಒದಗಿಸಬೇಕು. ಆಟೊಗಳನ್ನು ನಿಲ್ಲಿಸಲು ನಿಲ್ದಾಣ, ಸಂಘದವರಿಗೆ ಕಟ್ಟಡ, ಪ್ರತಿ ತಾಲ್ಲೂಕಿನಲ್ಲೂ ಸಮುದಾಯ ಭವನ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.
ಗುಡ್ಡಗಾಡು ಪ್ರದೇಶವೇ ಹೆಚ್ಚಿರುವ ಈ ಜಿಲ್ಲೆಯ ಆಟೊ ಚಾಲಕರು ಮತ್ತು ಮಾಲೀಕರಿಗೆ ಆದಾಯ ಕಡಿಮೆಯಿದೆ. ಅವರ ಕುಟುಂಬಗಳಿಗೆ ವಿಶೇಷ ಆರ್ಥಿಕ ಭದ್ರತಾ ಸೌಲಭ್ಯ ಜಾರಿ ಮಾಡಬೇಕು. ಆಟೊರಿಕ್ಷಾ ಚಾಲನಾ ಪರವಾನಗಿ ಪಡೆಯಲು ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು ಎಂಬ ನಿರ್ಬಂಧ ಅಸಾಂವಿಧಾನಿಕವಾಗಿದೆ. ಅದನ್ನು ರದ್ದುಮಾಡಬೇಕು ಎಂದು ಆಗ್ರಹಿಸಲಾಯಿತು.
ಆಟೊರಿಕ್ಷಾಗಳಿಗೆ ಬಳಸುವ ಇಂಧನದ ದರದಲ್ಲಿ ರಿಯಾಯಿತಿ ನೀಡಬೇಕು, ಬಾಡಿಗೆಗೆ ಬೈಕ್ಗಳ ಸಂಚಾರವನ್ನು ನಿರ್ಬಂಧಿಸಬೇಕು, 2 ಸ್ಟ್ರೋಕ್ ಆಟೊಗಳ ಸಂಚಾರ ನಿಷೇಧ ಮಾಡಬಾರದು. ಒಂದುವೇಳೆ, ಮಾಡಿದರೆ ಬದಲಿಯಾಗಿ 4 ಸ್ಟ್ರೋಕ್ ಆಟೊವನ್ನು ಪರಿಹಾರವಾಗಿ ನೀಡಬೇಕು ಎಂದು ಸಂಘದ ಪ್ರಮುಖರು ಬೇಡಿಕೆ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಮನವಿ ಸ್ವೀಕರಿಸಿ, ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಪ್ರಸಾದ್ ಕಾರವಾರ ಕರ್, ಕಾರ್ಯದರ್ಶಿ ವಿಶ್ವನಾಥ ಗೌಡ, ಖಜಾಂಚಿ ಶಿವರಾಜ ಮೇಸ್ತ ಹೊನ್ನಾವರ ಇದ್ದರು.