ಕಾರವಾರ : ಹೆಣ್ಣು-ಗಂಡು ಎಂಬ ತಾರತಮ್ಯ ಹೊಗಲಾಡಿಸಿ ಲಿಂಗಾನುಪಾತದ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನಾಯಾಧೀಶ ಟಿ.ಜಿ.ಶಿವಶಂಕರೇಗೌಡ ಹೇಳಿದರು.
ಅವರು ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ನ್ಯಾಲಯ ಸಭಾಂಗಣದಲ್ಲಿ À ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳು ಸದೃಡರಾಗದೇ ಹೊರತು ಸದೃಡ ಸಮಾಜ ನಿರ್ಮಾಣ ಮಾಡುವುದು ಅಸಾದ್ಯವಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬರುತ್ತಿದ್ದಾರೆ. ಮಹಿಳಾ ನ್ಯಾಯವಾದಿಗಳ ಮತ್ತು ನ್ಯಾಯಾಧೀಶರ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತೋಷಕರ ವಿಷಯವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಕೆ.ಪವಾರ ಮಾತನಾಡಿ ಸಮಾಜದಲ್ಲಿ ಹೆಣ್ಣನ್ನು ನಕರಾತ್ಮಕ ದೃಷ್ಠಿಕೋನದಿಂದ ನೋಡದೇ ಸಕರಾತ್ಮಕವಾಗಿ ನೋಡಿ ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದರು
ನ್ಯಾಯವಾದಿ ಶುಭಾ ಗಾಂವಕರ ವಿಶೇಷ ಉಪನ್ಯಾಸ ನೀಡಿ ಮಹಿಳೆಯರು ತಮ್ಮ ರಕ್ಷಣೆಗಾಗಿ ಇರುವ ಕಾನೂನು ಕಾಯ್ದೆಗಳನ್ನು ತಿಳಿದುಕೊಳ್ಳಬೇಕು. ದೌರ್ಜನ್ಯದ ವಿರುದ್ದ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅರಿವನ್ನು ಹೊಂದುವುದು ಅತ್ಯವಶ್ಯಕ. ದೌರ್ಜನ್ಯಕ್ಕೊಳಗಾದ ಮಹಿಳೆಯರು ದೂರು ನೀಡಲು ಮುಂದಾಗಬೇಕು. ಮುಚ್ಚಿಟ್ಟಷ್ಟು ದೌರ್ಜನ್ಯ ಹೆಚ್ಚುತ್ತದೆ. ತಪ್ಪಿತಸ್ಥರು ಇನ್ನೂ ಹೆಚ್ಚಾಗಿ ಈ ರೀತಿಯ ವರ್ತನೆ ಮುಂದುವರೆಸುತ್ತಾರೆ. ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಕೇವಲ ಮಹಿಳೆಯರು ಭಾಗವಹಿಸುವದಲ್ಲ ಬದಲಾಗಿ ಪುರುಷರು ಭಾಗವಹಿಸಿ ಮಹಿಳೆಯರ ಮೇಲೆ ಆಗುವ ಶೋಷಣೆಗಳ ಬಗ್ಗೆ ಅರಿತುಕೊಳ್ಳಬೇಕು ಎಂದರು.
ನ್ಯಾಯವಾದಿ ಸಂಧ್ಯಾ ಪ.ತಳೆಕಲ್ ಮಹಿಳಾ ಆಸ್ತಿ, ಹಕ್ಕು ಹಾಗೂ ಲೈಂಗಿಕ ಅಪರಾದಗಳಿಂದ ಮಕ್ಕಳ ರಕ್ಷಣೆ ಕುರಿತು ಉಪನ್ಯಾಸ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ, ನ್ಯಾಯಾಧೀಶರಾದ ರಾಜೀವ ಗೋಳಸಾರ, ವಿಸ್ಮಿತಾ ಮೂರ್ತಿ, ವಿನುತಾ ಡಿ.ಎಸ್. ವೆಂಕಟೇಶ ಕೆ.ಎನ್.ಮತ್ತು ಇತರರು ಉಪಸ್ಥಿತರಿದ್ದರು.